ರಾಮನಗರ; ಚಿರತೆ ದಾಳಿಗೆ ಮಹಿಳೆ ಬಲಿ, ಗ್ರಾಮಸ್ಥರಿಂದ ರಸ್ತೆ ತಡೆ
ರಾಮನಗರ, ಅಕ್ಟೋಬರ್ 30; ಮಾಗಡಿ ತಾಲೂಕಿನಲ್ಲಿ ಬೆಳಗ್ಗೆ ಹಸುಮೇಯಿಸಲು ತೆರಳಿದ ಮಹಿಳೆಯ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಗೆ ತುತ್ತಾಗಿದ್ದ ಮಹಿಳೆ ಬಲಿಯಾಗಿರುವ ಘಟನೆ ಗಿಡದಕಟ್ಟೆ ಬಳಿ ನಡೆದಿದೆ.
ತಾಲೂಕಿನ ಕಲ್ಲುಪಾಳ್ಯ ಗ್ರಾಮದ ರೈತ ಮಹಿಳೆ ಮಹಾಲಕ್ಷ್ಮಿ (38) ಚಿರತೆ ದಾಳಿಗೆ ಸಿಕ್ಕು ಮೃತಪಟ್ಟ ಮಹಿಳೆ. ರಾತ್ರಿ ಸಮಯದಲ್ಲಿ ಗ್ರಾಮಕ್ಕೆ ನುಗ್ಗುತ್ತಿದ್ದ ಚಿರತೆ ಹಗಲು ವೇಳೆಯಲ್ಲೇ ದಾಳಿ ಮಾಡಿ ಮಹಿಳೆಯನ್ನು ಬಲಿ ತೆಗೆದುಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಪ್ರತಿದಿನದಂತೆ ಶನಿವಾರ ಬೆಳಗ್ಗೆ ಮಹಿಳೆ ಮಹಾಲಕ್ಷಿ ಪುತ್ರ ಕಿರಣ್ ಜೊತೆ ತಮ್ಮ 4 ಹಸುಗಳನ್ನು ಗಿಡಕಟ್ಟೆ ಬಳಿ ಮೇಯಿಸಲು ತೆರಳಿದ ಸಮಯದಲ್ಲಿ ಪೊದೆಯಲ್ಲಿ ಅಡಗಿಕುಳಿತಿದ್ದ ಚಿರತೆ ದಾಳಿ ಮಾಡಿ, ಕತ್ತಿನ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿದೆ.
ಚಿರತೆ ದಾಳಿಯಿಂದ ಸ್ಥಳದಲ್ಲೇ ಮಹಾಲಕ್ಷ್ಮಿ ಸಾವನ್ನಪ್ಪಿದ್ದಾರೆ. ಚಿರತೆ ದಾಳಿ ವೇಳೆ ಮೃತರ ಜೊತೆಯಿದ್ದ ಕಿರಣ್ ಕಿರುಚಾಡುತ್ತಿದಂತೆ ಬೆದರಿದ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಈ ಸಂಬಂಧ ಮಾಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗ್ರಹಿಸಿ ರಸ್ತೆ ತಡೆ; ಮಾಗಡಿ ತಾಲೂಕಿನಾದ್ಯಂತ ಚಿರತೆ, ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡು ಪ್ರಾಣಿಗಳು ಪದೇ ಪದೇ ರೈತರ ಮೇಲೆ ದಾಳಿ ಮಾಡುತ್ತಿವೆ. ಹಾಗಾಗಿ ಶಾಶ್ವತವಾಗಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಹಾಗೂ ಮೃತರ ಕುಟುಂಬಕ್ಜೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಮಾಗಡಿ-ಕುಣಿಗಲ್ ರಸ್ತೆ ತಡೆ ನಡೆಸಿದ ಗ್ರಾಮಸ್ಥರು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಕುಟುಂಬ ಒಬ್ಬರಿಗೆ ನೌಕರಿ ಕೊಡುವಂತೆ ಸರ್ಕಾರ ಮತ್ತು, ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಕೆಲ ದಿನಗಳ ಹಿಂದೆ ಗೊಲ್ಲರ ಹಟ್ಟಿ, ವಡೆಘಟ್ಟ ಗ್ರಾಮದ ಮಹಿಳೆಯ ಮೇಲೆ ಚಿರತೆ ಗಾಯಗೊಳಿಸಿದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮಕೈಗೊಂಡಿದ್ದರೆ ಇಂಥಹ ಘಟನೆ ನಡೆಯುತ್ತಿರಲಿಲ್ಲ ಎಂದರು. ಗ್ರಾಮದ ಬಳಿ ಚಿರತೆ ಕಾಟದ ಬಗ್ಗೆ ಮನವಿ ಮಾಡಿದರು ಒಂದು ತಿಂಗಳಾದರು ಕ್ರಮಕೈಗೊಂಡಿಲ್ಲ, ಈ ಘಟನೆಗೆ ಅರಣ್ಯ ಇಲಾಖೆ ಅಧಿಕಾರಿಗಳೆ ನೇರಹೊಣೆ ಎಂದು ಮೃತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ನಡೆಸುತ್ತಿದ್ದ ಸ್ಥಳಕ್ಜೆ ವಲಯ ಅರಣ್ಯಾಧಿಕಾರಿ ಜಗದೀಶ್ ಗೌಡ ಭೇಟಿ ನೀಡಿ ಕೂಡಲೇ ಚಿರತೆ ಸೆರೆ ಹಿಡಿಯುವ ಬಗ್ಗೆ ಪ್ರತಿಭಟನಾಕಾರರಿಗೆ ಮನವೊಲಿಸಿದರು ಸುಮ್ಮನಿರದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಇಲ್ಲದಿದ್ದರೆ ಕೂಡಲೇ ಚಿರತೆ ಸೆರೆಹಿಡಿಯುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಜಿಲ್ಲಾ ಅರಣ್ಯಾಧಿಕಾರಿ ದೇವರಾಜು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಕ್ಯಾಮರಾ ಮೂಲಕ ಚಿರತೆಯ ಚಲನವಲನ ಕಂಡು ಹಿಡಿದು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗುವುದು ಅಲ್ಲದೇ ಚಿರತೆ ಹಾವಳಿ ಹೆಚ್ಚಿದ್ದರೆ ಪ್ರದೇಶದ ಸುತ್ತಾ-ಮುತ್ತ ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಕೆ. ಧನಂಜಯ ಮಾತನಾಡಿ, "ತಾಲೂಕಿನಾದ್ಯಂತ ನೂರಾರು ಚಿರತೆಗಳಿದ್ದು ರೈತರ, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಪ್ರಾಣಹಾನಿ ಸಂಭವಿಸುತ್ತಿದ್ದರು. ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಇಷ್ಟೊಂದು ಹಾವಳಿ ನಡೆದರು ಕೇವಲ 3 ಬೋನ್ಗಳನ್ನಿಟ್ಟಿದ್ದಾರೆ. ಅಧಿಕಾರಿಗಳ ತಪ್ಪಿನಿಂದಾಗಿ ರೈತರು ಪ್ರಾಣಕಳೆದುಕೊಳ್ಳುವಂತಾಗಿದೆ, ಜನರ ರಕ್ಷಣೆಗೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ" ಎಂದು ಮನವಿ ಮಾಡಿದರು.

7.50 ಲಕ್ಷ ಪರಿಹಾರ; ಜಿಲ್ಲಾ ಅರಣ್ಯಾಧಿಕಾರಿ ದೇವರಾಜು ಮಾತನಾಡಿ, "ಚಿರತೆ ಸೆರೆಹಿಡಿಯಲು ಹೆಚ್ಚು ಬೋನ್ ಅಳವಡಿಸಿ ಹಾಗೂ ಕ್ಯಾಮರಾ ಅಳವಡಿಸಿ ಹಗಲು, ರಾತ್ರಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ, ಘಟನೆ ನಡೆದ ಸ್ಥಳ ಕುಣಿಗಲ್ ಅರಣ್ಯ ವಲಯಕ್ಕೆ ಹತ್ತಿರವಾಗಿದ್ದು ಅಲ್ಲಿನ ಸಿಬ್ಬಂದಿ ಮತ್ತು ಮಾಗಡಿ ಸಿಬ್ಬಂದಿಗಳೊಂದಿಗೆ ಜಂಟಿ ತಂಡ ರಚಿಸಿ ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು" ಎಂದರು.
ಇನ್ನೂ ಮೃತ ಮಹಿಳೆ ಮಹಾಲಕ್ಷಿ ಕುಟುಂಬಕ್ಕೆ ಪರಿಹಾರವಾಗಿ 7.50 ಲಕ್ಷ ರೂಪಾಯಿ ನೀಡುವುದು , ಮೃತರ ಮಗನಿಗೆ ತಾತ್ಕಾಲಿಕ ಉದ್ಯೋಗ ನೀಡಲಾಗುವುದು ಅಲ್ಲದೇ ಮೃತರ ಇಬ್ಬರು ಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರದಂತೆ ಎರಡು ವರ್ಷ ನೀಡಿವ ಭರವಸೆಯನ್ನು ಅಧಿಕಾರಿ ನೀಡಿದರು.
ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗಿದ್ದು, ಸರ್ಕಾರಕ್ಕೆ ಅರಣ್ಯ ರಕ್ಷಣೆ ಅಧಿಕಾರಿಗಳನ್ನು ನೀಡುವಂತೆ ಮನವಿ ಮಾಡಿದ್ದು ನೇಮಕಾತಿ ಮಾಡಿಕೊಳ್ಳಲು ಸರಕಾರ ಸೂಕ್ತ ಕ್ರಮಕೈಗೊಳ್ಳಲಾಗಿದ್ದು ಕೂಡಲೇ ಮಾಗಡಿಗೆ 6 ಮಂದಿಯನ್ನು ನೇಮಕಮಾಡಿಕೊಳ್ಳಲು ಕ್ರಮ ಕೈಗೊಂಡಿದ್ದೇವೆ ಎಂದು ಡಿಎಫ್ಓ ದೇವರಾಜ್ ತಿಳಿಸಿದರು.
ರಸ್ತೆ ತಡೆ ಸಮಯದಲ್ಲಿ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದರು ಹಾಗೂ ಸ್ಥಳಕ್ಕೆ ಡಿವೈಎಸ್ಪಿ ಓಂ. ಪ್ರಕಾಶ್, ತಹಶೀಲ್ದಾರ್ ಬಿ. ಜಿ. ಶ್ರೀನಿವಾಸ್ ಪ್ರಸಾದ್. ಪೊಲೀಸ್ ಇನ್ಸ್ಪೆಕ್ಟರ್ ಬಿ. ರವಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಸಿ. ಸುರೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದರು.












Click it and Unblock the Notifications