ಪ್ರತ್ಯೇಕ ಘಟನೆ: ಕೀಟನಾಶಕ ಸೇವಿಸಿ 2 ವರ್ಷದ ಮಗು ಸಾವು, ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು
ರಾಮನಗರ, ಸೆಪ್ಟೆಂಬರ್ 04: ಕೃಷಿಗಾಗಿ ತಂದಿದ್ದ ಮನೆಯಲ್ಲಿದ್ದ ಕೀಟನಾಶಕ (ದ್ರಾವಕ) ವನ್ನು ಜ್ಯೂಸ್ ಎಂದು ಕುಡಿದು ಮಗು ಮೃತಪಟ್ಟಿರುವ ಘಟನೆ ರಾಮನಗರ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಯಶ್ವಿಕ್ (2) ಮೃತ ಮಗು ಎಂದು ಗುರುತಿಸಲಾಗಿದೆ.
ಕೃಷ್ಣಾಪುರ ಗ್ರಾಮದ ಪುಷ್ಪ ಹಾಗೂ ಹನುಮಂತ ಎಂಬ ದಂಪತಿಯ ಏಕೈಕ ಪುತ್ರನಾದ ಯಶ್ವಿಕ್, ತನ್ನ ಮನೆಯಲ್ಲಿದ್ದ ಕೀಟನಾಶಕವನ್ನು ಜ್ಯೂಸ್ ಎಂದು ತಿಳಿದು ಸೇವಿಸಿದ್ದಾನೆ.
ಮೃತ ಕಂದಮ್ಮನ ತಂದೆ, ತನ್ನ ಬೆಳೆಗೆ ಕೀಟನಾಶಕವನ್ನು ಸಿಂಪಡಿಸಲು ದ್ರಾವಕವನ್ನು ತಂದಿಟ್ಟಿದ್ದರು. ಬೆಳೆ ಕೀಟನಾಶಕ ಸಿಂಪಡಿಸಿ ಬಾಕಿ ಉಳಿದಿದ್ದ ಔಷಧಿಯನ್ನು ಬಾಟಲಿಯೊಂದಕ್ಕೆ ಹಾಕಿ ಇಟ್ಟಿದ್ದರು. ಈ ಬಾಟಲಿಯಲ್ಲಿ ಇರುವುದು ಜ್ಯೂಸ್ ಎಂದು ಭಾವಿಸಿದ ಮಗು ಕೀಟನಾಶಕ ಕುಡಿದಿದೆ. ದ್ರಾವಕ ಕುಡಿದ ಹೊಟ್ಟೆನೋವಿನಿಂದ ಆಳುತಿದ್ದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೀಟನಾಶಕ ಕುಡಿದು ಅಸ್ವಸ್ಥವಾಗಿದ ಮಗುವಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಇನ್ನು ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಶಿವನಸಮುದ್ರದಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು: ಮತ್ತೋರ್ವ ಪಾರು
ಚಾಮರಾಜನಗರ: ಸೆಲ್ಫಿ ಹುಚ್ಚಾಟದಿಂದ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಜೀರೋ ಪಾಯಿಂಟ್ ಗೇಟ್ ಬಳಿ ಇಂದು ನಡೆದಿದೆ.
ಬೆಂಗಳೂರು ಮೂಲದ ಪುನೀತ್ (18) ಮೃತ ದುರ್ದೈವಿಯಾಗಿದ್ದು, ಲೋಹಿತ್(19) ಎಂಬಾತ ತೆಪ್ಪ ನಡೆಸುವವರ ಸಹಾಯದಿಂದ ಬಚಾವಾಗಿದ್ದಾನೆ. ಬೆಂಗಳೂರನಿಂದ ಇಂದು ಶಿವನಸಮುದ್ರಕ್ಕೆ ಇಂದು ಪುನೀತ್, ಲೋಹಿತ್, ತೇಜಸ್ವಿನಿ, ರಿಷಾ ಎಂಬವರು ಬಂದಿದ್ದರು.
ಈ ವೇಳೆ, ಸೆಲ್ಫಿ ತೆಗೆದುಕೊಳ್ಳಲು ಕಲ್ಲುಗಳ ಮೇಲೆ ಏರಿದಾಗ ಪುನೀತ್ ಹಾಗೂ ಲೋಹಿತ್ ಇಬ್ಬರು ಕಾಲು ಜಾರಿ ಬಿದ್ದು ಜೀರೋ ಪಾಯಿಂಟ್ ಗೇಟ್ನಲ್ಲಿ ಸಿಲುಕಿದ್ದರು. ಇದನ್ನು ಗಮನಿಸಿದ ತೆಪ್ಪ ಸವಾರ ಶಾಂತರಾಜು ಎಂಬವರು ನೀರಿಗೆ ಹಾರಿ ಇಬ್ಬರನ್ನೂ ಮೇಲಕ್ಕೆತ್ತಿದ್ದರೂ, ದುರಾದೃಷ್ಟವಶಾತ್ ಪುನೀತ್ ಮೃತಪಟ್ಟಿದ್ದಾನೆ.
ಪವರ್ ಸ್ಟೇಷನ್ ನಾಲೆಯ ನೀರು ಹಾಗೂ ತಮಿಳುನಾಡಿಗೆ ಕಾವೇರಿ ಹೊರ ಹರಿವು ಹೆಚ್ಚಿದ್ದು, ಯುವಕರು ಸೆಲ್ಫಿ ಹುಚ್ಚಿಗೆ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾರೆ. ಸದ್ಯ, ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications