ರೈತರ ಪ್ರತಿಭಟನೆ: ಸಂಗಮ ಮತ್ತು ಮೇಕೆದಾಟು ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ
ಮೇಕೆದಾಟು ಅಣೆಕಟ್ಟು ಯೋಜನೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಉದ್ದೇಶಿತ ಮೇಕೆದಾಟು ಅಣೆಕಟ್ಟು ಯೋಜನೆಯ ಸ್ಥಳದಲ್ಲಿ ವಿವಿಧ ಸಂಘಟನೆಗಳು ಭೂಮಿ ಪೂಜೆ ಹಮ್ಮಿಂಡಿದೆ. ಈ ಹಿನ್ನೆಲೆಯಲ್ಲಿ ಸಂಗಮ ಮತ್ತು ಮೇಕೆದಾಟು ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ರಾಮನಗರ, ಫೆಬ್ರವರಿ 1: ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ಕನ್ನಡ ಪರ ಸಂಘಟನೆಗಳು ಮೇಕೆದಾಟು ಅಣೆಕಟ್ಟು ಯೋಜನೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಉದ್ದೇಶಿತ ಮೇಕೆದಾಟು ಅಣೆಕಟ್ಟು ಯೋಜನೆಯ ಸ್ಥಳದಲ್ಲಿ ಭೂಮಿ ಪೂಜೆ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಕನಕಪುರ ತಾಲೂಕು ಆಡಳಿತ ಮೇಕೆದಾಟು ಬಳಿ ಎರಡು ದಿನ ನಿಷೇಧಾಜ್ಞೆಯನ್ನು ಜಾರಿಮಾಡಿದೆ.
ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿಯಲ್ಲಿರುವ ಸಂಗಮ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಜೆಸಿಬಿ, ಟ್ರ್ಯಾಕ್ಟರ್ಗಳೊಂದಿಗೆ ಬಾರಿ ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಹೋರಾಟಗಾರರು ಅರಣ್ಯ ಪ್ರವೇಶ ಮಾಡುವ ಹಿನ್ನಲೆಯಲ್ಲಿ ಅಧಿಕಾರಿಗಳು ನಿಷೇಧಾಜ್ಞೆಯನ್ನು ಜಾರಿಮಾಡಿದ್ದಾರೆ.
ತಹಶೀಲ್ದಾರ್ ಆದೇಶದಲ್ಲಿರುವ ಅಂಶವೇನು..?
'ಸಾತನೂರು ಪೊಲೀಸ್ ಠಾಣೆಯ , ಆರಕ್ಷಕ ಉಪನಿರೀಕ್ಷಕರ ಕೋರಿಕೆಯನ್ನು ಪರಿಗಣಿಸಿ, ಸುರಕ್ಷತಾ ದೃಷ್ಟಿಯಿಂದ ಕನಕಪುರ ತಾಲೂಕು ದಂಡಾಧಿಕಾರಿಯಾದ ಹೆಚ್.ಶಿವಕುಮಾರ್ ಆದ ನಾನು, ಪರಿಸ್ಥಿತಿಯನ್ನು ಎಲ್ಲಾ ರೀತಿಯಿಂದ ಅವಲೋಕನ ಮಾಡಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ ಮೇಕೆದಾಟು, ಸಂಗಮ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಕಾನೂನು ಪಾಲನೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ದಿನಾಂಕ:31/01/2023 ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ: 01/02/2023 ರ ಮಧ್ಯರಾತ್ರಿ 12.00 ಗಂಟೆಯವರೆಗೆ (ಎರಡು ದಿನಗಳ ಕಾಲ) ಸಿ.ಆರ್.ಪಿ.ಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿರುತ್ತೇನೆ' ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೊತೆಗೆ ಕನ್ನಡ ಪರ ಹೋರಾಟಗಾರರು ಜೆಸಿಬಿ, ಟ್ರ್ಯಾಕ್ಟರ್ ವಾಹನಗಳೊಂದಿಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮೇಕೆದಾಟು ಪ್ರವೇಶ ಮಾಡಿ, ಮೇಕೆದಾಟು ಅಣೆಕಟ್ಟು ಯೋಜನೆಗೆ ಗುದ್ದಲಿ ಪೂಜೆಗೆ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ಕನ್ನಡ ಪರ ಸಂಘಟನೆಗಳು ಉದ್ದೇಶಿತ ಮೇಕೆದಾಟು ಸ್ಥಳದಲ್ಲಿ ಗುದ್ದಲಿ ಪೂಜೆ ಮಾಡುವ ವೇಳೆಯಲ್ಲಿ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಡೆಯುವ ಸಲುವಾಗಿ ಮುಂಜಾಗ್ರತೆ ಕ್ರಮವಾಗಿ ಸಂಗಮ ಮತ್ತು ಮೇಕೆದಾಟು ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡುವಂತೆ ತಾಲೂಕು ಆಡಳಿತಕ್ಕೆ ಪೊಲೀಸರು ಮನವಿ ಮಾಡಿಕೊಂಡಿದ್ದರು.