YTPS: ವೈಟಿಪಿಎಸ್ನ ಒಂದನೇ ಘಟಕದಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆ!
ರಾಯಚೂರು ನವೆಂಬರ್ 30: ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಹೀಗಾಗಿ ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಯಾಗುವ ಆತಂಕ ಶುರುವಾಗಿದೆ. ಈ ನಡುವೆ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ವೈಟಿಪಿಎಸ್) ಒಂದನೇ ವಿದ್ಯುತ್ ಘಟಕವು 800 ಮೆಗಾ ವಾಟ್ಗೂ ಅಧಿಕ ವಿದ್ಯುತ್ ಉತ್ಪಾದಿಸುವ ಮೂಲಕ ದಾಖಲೆ ಮಾಡಿದೆ.
ಹೌದು.. 800 ಮೆಗಾವಾಟ್ ಒಂದನೇ ವಿದ್ಯುತ್ ಘಟಕದ ಉತ್ಪಾದನೆಯ ಸಾಧನೆ ವೈಟಿಪಿಎಸ್ ಅಧಿಕಾರಿಗಳ ಶಕ್ತಿ ಬಲಪಡಿಸಿದೆ. 2023ರ ಆಗಸ್ಟ್ 21 ರಿಂದ ನವೆಂಬರ್ 29 ವರೆಗೆ ನಿರಂತರ ಉತ್ಪಾದನೆ ಮಾಡಿ ನೂರು ದಿನ ಪೂರೈಸಿದೆ. ಹೆಚ್ಚಿನ ಉತ್ಪಾದನೆಯನ್ನು ದಾಖಲಿಸಿರುವುದು ಅಧಿಕಾರಿಗಳ ವಲಯದಲ್ಲಿ ಸಂತಸ ಇಮ್ಮಡಿಸಿದೆ.

ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು ಮುಂಬರುವ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ. ಹೀಗಿರುವಾಗ ಅಗತ್ಯ ವಿದ್ಯುತ್ ಉತ್ಪಾದನೆ ಅತ್ಯಾವಶ್ಯಕವಾಗಿದೆ. ಕೇವಲ ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಉತ್ಪಾದಿಸುವ ಹೊಣೆ ಹೊರುತ್ತಿದ್ದ ವೈಟಿಪಿಎಸ್ ಘಟಕಗಳ ಮೇಲೆ ಪ್ರಸಕ್ತ ವರ್ಷ ಮಳೆಯ ವೈಫಲ್ಯದಿಂದ ಚಳಿಗಾಲದಲ್ಲಿಯೇ ವಿದ್ಯುತ್ ಒದಗಿಸುವ ಒತ್ತಡವಿದೆ. ಆಗಾಗ ತಲೆದೋರುವ ತಾಂತ್ರಿಕ ಸಮಸ್ಯೆಗಳ ಮಧ್ಯೆಯೂ ವಿದ್ಯುತ್ ಉತ್ಪಾದಿಸುತ್ತಿದ್ದು, ಒತ್ತಡ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡಿದೆ.
ನಿರಂತರ ವಿದ್ಯುತ್ ಉತ್ಪಾದನೆ ಅಸಾಧ್ಯ ಎಂಬ ಆರೋಪದ ಹೊರತಾಗಿಯೂ ವರ್ಷದಲ್ಲಿ ನ.29ರಂದು ಒಟ್ಟು 43.270 ಮಿಲಿಯನ್ ಯೂನಿಟ್ ಉತ್ಪಾದನೆಯಾಗಿದೆ. ಒಂದನೇ ವಿದ್ಯುತ್ ಘಟಕದಲ್ಲಿ ಶೇಕಡ 54.08 ರಷ್ಟು ಪ್ಲ್ಯಾಂಟ್ ಲೋಡ್ ಫ್ಯಾಕ್ಟರ್ ಉತ್ಪಾದಿಸಲಾಗಿದೆ. ಪ್ರಸಕ್ತ ವರ್ಷ ವಿದ್ಯುತ್ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ವೈಟಿಪಿಎಸ್ ಪ್ರಭಾರೆ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ ಹೇಳಿದರು.
2016ರ ಡಿಸೆಂಬರ್ನಲ್ಲಿ ವೈಟಿಪಿಎಸ್ನಲ್ಲಿ ಎರಡು ಉತ್ಪಾದನಾ ಘಟಕಗಳು ಆರಂಭವಾಗಿವೆ. ತಲಾ ಒಂದು ಘಟಕ 800 ಮೆಗಾ ವಾಟ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. 2022ರ ಮಾರ್ಚ್ನಿಂದ ಏಪ್ರಿಲ್ 29 ವರೆಗೆ 52 ದಿನ ನಿರಂತರ ಕಾರ್ಯನಿರ್ವಹಿಸಿ 400 ಮೆಗಾವಾಟ್ ಉತ್ಪಾದನೆ ಮಾಡಿದೆ. ಈ ಬಾರಿ ಮಾತ್ರ ಉತ್ಪಾದನೆ 800 ಮೆಗಾವಾಟ್ ದಾಟಿದೆ ಎಂದು ವೈಟಿಪಿಎಸ್ ಮೂಲಗಳು ತಿಳಿಸಿವೆ.

ಮತ್ತೊಂದು ವಿಚಾರ ಅಂದರೆ ಇತ್ತೀಚೆಗೆ ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಸೇರಬೇಕಿದ್ದ ಗುಣಮಟ್ಟದ ಕಲ್ಲಿದ್ದಲು ಕಳ್ಳ ಮಾರ್ಗದಲ್ಲಿ ಖಾಸಗಿ ಕಂಪನಿಗಳ ಪಾಲಾಗುತ್ತಿರುವ ಆರೋಪಗಳು ಕೇಳಿ ಬಂದಿವೆ. ಇದರ ನಡುವೆ ವೈಟಿಪಿಎಸ್ನ ಒಂದನೇ ಘಟಕದಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆ ಆಗಿರುವುದು ಸಂತೋಷ ತಂದಿದೆ.
ಕಲ್ಲಿದ್ದಲು ಕಳ್ಳ ಮಾರ್ಗ
ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಸಂಪೂರ್ಣವಾಗಿ ತಲುಪಬೇಕಾದ ಕಲ್ಲಿದ್ದಲು ಕಳ್ಳ ಮಾರ್ಗದಲ್ಲಿಕಂಡವರ ಪಾಲಾಗುತ್ತಿದೆ. ರಾಯಚೂರು ತಾಲ್ಲೂಕಿನ ಯರಮರಸ್ , ಚಿಕ್ಕಸೂಗೂರು, ಡಿ.ಯದ್ಲಾಪುರ ಮತ್ತು ತೆಲಂಗಾಣ ಗಡಿಭಾಗದ ಕೃಷ್ಣಾ ರೇಲ್ವೆ ಸ್ಟೇಷನ್ ಮಾರ್ಗದ ರಸ್ತೆಯಲ್ಲಿ ರಾಶಿ ರಾಶಿಯಾಗಿ ಕಲ್ಲಿದ್ದಲು ಹಾಕಿರುವ ಗುಡ್ಡೆಗಳು ಕಂಡು ಬರುತ್ತದೆ.
ಪ್ರತಿನಿತ್ಯ ಟನ್ಗಟ್ಟಲೇ ಕಲ್ಲಿದ್ದಲು ಖಾಸಗಿಯವರ ಕೈ ಸೇರುತ್ತಿದೆ. ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಸರಬರಾಜು ಮಾಡುತ್ತಿವೆ. ಈಗ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಹಿಂದೆ ಬಿದ್ದಿವೆ. ಇದರ ಹಿಂದೆ ಕಲ್ಲಿದ್ದಲು ಕಳ್ಳಾಟ ನಡೆಯುತ್ತಿರುವುದು ಬಯಲಾಗಿದೆ.












Click it and Unblock the Notifications