ರಾಯಚೂರು; ಗಂಗಮ್ಮ ಕುಟುಂಬದ ನೆರವಿಗೆ ನಿಂತ ಯಡಿಯೂರಪ್ಪ
ರಾಯಚೂರು, ಏಪ್ರಿಲ್ 08 : ಹುಟ್ಟೂರಿಗೆ ನಡೆದುಕೊಂಡೇ ಹೊರಟ ಗಂಗಮ್ಮ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿರುವ ಸುದ್ದಿ ವೈರಲ್ ಆಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಗಂಗಮ್ಮ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟೂರಿಗೆ ನಡೆದುಕೊಂಡೇ ಹೊರಟ ಗಂಗಮ್ಮ ಎಂಬ ರಾಯಚೂರು ಜಿಲ್ಲೆಯ ಸಿಂಧನೂರಿನ ಮಹಿಳೆ ಮಾರ್ಗ ಮಧ್ಯದಲ್ಲಿ ಅಸುನೀಗಿರುವುದು ಅತ್ಯಂತ ದುರದೃಷ್ಟಕರ ಹಾಗೂ ನೋವಿನ ಸಂಗತಿ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
"ಈ ಬಗ್ಗೆ ಪರಿಶೀಲಿಸಿ, ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಗಂಗಮ್ಮ ಕುಟುಂಬ ಲಾಕ್ ಡೌನ್ ಘೋಷಣೆಯಾದ ಬಳಿಕ ಕೆಲಸ ಕಳೆದುಕೊಂಡಿದ್ದರು. ಆದ್ದರಿಂದ, ಅವರು ಸಿಂಧನೂರಿಗೆ ವಾಪಸ್ ಆಗಲು ಬಯಸಿದ್ದರು.
ಮಾರ್ಚ್ 30ರಂದು ಅವರು ಹೊರಟಿದ್ದ ಟ್ರಾಕ್ಟರ್ಅನ್ನು ತುಮಕೂರು ಟೋಲ್ ಗೇಟ್ ಬಳಿ ತಡೆಯಲಾಯಿತು. ಇದರಿಂದಾಗಿ ಗಂಗಮ್ಮ ಮತ್ತು ಇತರ ಕಾರ್ಮಿಕರು ನಡೆದುಕೊಂಡೇ ಊರು ಸೇರಲು ಬಯಸಿದರು.
ಸುಡುವ ಬಿಸಿಲಿನಲ್ಲಿ, ಸರಿಯಾದ ಆಹಾರ, ನೀರಿನ ವ್ಯವಸ್ಥೆ ಇಲ್ಲದೇ ನಡೆದುಕೊಂಡು ಹೊರಟಿದ್ದ ಗಂಗಮ್ಮ ಮತ್ತು ಇತರ ಕಾರ್ಮಿಕರನ್ನು ಬಳ್ಳಾರಿಯಲ್ಲಿ ಪೊಲೀಸರು ಏಪ್ರಿಲ್ 2ರಂದು ತಡೆದರು. ಎಲ್ಲರನ್ನು ಪುರ್ನವಸತಿ ಕೇಂದ್ರಕ್ಕೆ ಸೇರಿಸಿದರು.
ಆದರೆ, ಸರಿಯಾದ ಆಹಾರ, ನೀರು ಸಿಗದೆ ಬಳಲಿದ್ದ ಗಂಗಮ್ಮ ಅಸ್ವಸ್ಥಗೊಂಡರು. ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಪ್ರಿಲ್ 5ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಲಸೆ ಕಾರ್ಮಿಕರಿಗೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆರೋಪ ಮಾಡಿವೆ.












Click it and Unblock the Notifications