ಅರ್ಧ ರಾಜ್ಯಕ್ಕೆ ವಿದ್ಯುತ್ ಪೂರೈಸುವ ರಾಯಚೂರಿಗೆ 365 ದಿನವೂ ವಿದ್ಯುತ್ ದಾರಿದ್ರ್ಯ
ರಾಯಚೂರು,ಜು.14: ರಾಜ್ಯದಲ್ಲಿ ಇಂಧನ ಸಚಿವರು ಇದ್ದಾರೆಯೆ? ಇದ್ದರೆ ಅವರು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ ಏಕೆ?. ಆರ್ಟಿಪಿಎಸ್ ಮತ್ತು ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೂಲಕ ರಾಜ್ಯಕ್ಕೆ 3320 ಸಾವಿರ ಮೆಗಾವ್ಯಾಟ್. ವಿದ್ಯುತ್ ಪೂರೈಕೆ ಮಾಡುವ ಜಿಲ್ಲೆಯ ಬಗ್ಗೆ ಇವರಿಗೇಕೆ ಇಷ್ಟು ತಾತ್ಸಾರ?
ಅತ್ಯಂತ ಬೃಹತ್ ಘಟಕಗಳನ್ನು ಹೊಂದಿದ ಜಿಲ್ಲೆಗೆ ಭೇಟಿ ನೀಡುವ ಕನಿಷ್ಟ ಜವಾಬ್ದಾರಿ ಹೊಂದಿರದ ಇಂಧನ ಸಚಿವ ಸುನೀಲ್ ಕುಮಾರ ಅವರು ಸಚಿವ ಸ್ಥಾನದ ಅಧಿಕಾರವನ್ನು ರಾಜ್ಯದ ಜನರ ಹಿತಕ್ಕಾಗಿ ಹೊಂದಿದ್ದಾರೊ? ಅಥವಾ ತಮ್ಮ ಸೌಲಭ್ಯಗಳಿಗಾಗಿ ಹೊಂದಿದ್ದಾರೊ? ಎನ್ನುವುದು ಗಂಭೀರ ಪ್ರಶ್ನೆಯಾಗಿದೆ. ಇಂತಹ ಸಚಿವರಿಂದ ಮಹತ್ವಕಾಂಕ್ಷಿ ಜಿಲ್ಲೆ ಮತ್ತು ಹಿಂದುಳಿದ ಜಿಲ್ಲೆ ವಿದ್ಯುತ್ ಅವಲಂಬಿತ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವೆ? ಎಂಬ ಪ್ರಶ್ನೆಗಳು ಜಿಲ್ಲೆಯ ಜನರನ್ನು ಕಾಡುತ್ತಿವೆ.

ಜಿಲ್ಲೆಯ ಜನರಿಗೆ ವಿದ್ಯುತ್ ಕಡಿತ ನಿತ್ಯ ನಿರಂತರ
ರಾಜ್ಯಕ್ಕೆ ಶೇಕಡ 45 ರಷ್ಟು ವಿದ್ಯುತ್ ಪೂರೈಸುವ ಜಿಲ್ಲೆಯಲ್ಲಿ 365 ದಿನ ವಿದ್ಯುತ್ ಕಡಿತದ ದಾರಿದ್ರ್ಯ ಸ್ಥಿತಿಗೆ ನೇರವಾಗಿ ರಾಜ್ಯ ಇಂಧನ ಸಚಿವರೆ ಹೊಣೆಯಾಗಬೇಕಾಗಿದೆ. ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಮತ್ತು ವಿದ್ಯುತ್ ಕಡಿತದ ಬಗ್ಗೆ ಪ್ರಶ್ನಿಸುವ ತಾಕತ್ತಿನ ಜನಪ್ರತಿನಿಧಿಗಳ ಕೊರತೆಯಿಂದ ಜಿಲ್ಲೆಯ ಜನರು ನಿತ್ಯ ವಿದ್ಯುತ್ ಕಡಿತದ ಶಾಪಕ್ಕೆ ಗುರಿಯಾಗಲೇಬೇಕಾಗಿದೆ.
ವಿದ್ಯುತ್ ಕಡಿತಕ್ಕೆ ಸಂಬಂಧಿಸಿದ ಜೆಸ್ಕಾಂ ಇಲಾಖೆಯ ವಿಭಾಗದ ಅಧಿಕಾರಿಗಳು ಸಾರ್ವಜನಿಕರ ಕರೆಗಳು ಸ್ವೀಕರಿಸುವುದೆ ಅಪರೂಪ. ಒಂದು ವೇಳೆ ಕರೆ ಸ್ವೀಕರಿಸಿದರೆ, ಲೈನ್ ಫಾಲ್ಟ್, ಜಂಗಲ್ ಕಟ್ಟಿಂಗ್, ಲೈನ್ ತಂತಿ ಎಳೆಯುವ ಕಾಮಗಾರಿ, ಪರಿವರ್ತಕ ವೈಫಲ್ಯ ಎಂದು ಚುಟುಕು ಉತ್ತರ ನೀಡಿ, ಕರೆ ಸ್ಥಗಿತಗೊಳಿಸುತ್ತಾರೆ. ಪ್ರತಿನಿತ್ಯ ರಾಯಚೂರು ನಗರದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿ ಒಂದಿಲ್ಲೊಂದು ಸಮಸ್ಯೆ ಸಾಮಾನ್ಯಯಾಗಿ ಬಿಟ್ಟಿದೆ. ಅಧಿಕಾರಿಗಳ ಈ ಉತ್ತರ ಗಮನಿಸಿದರೆ ನಗರದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಅತ್ಯಂತ ಕಳಪೆ ಮಟ್ಟದಲ್ಲಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟಗೊಳ್ಳುತ್ತದೆ. ಸರ್ಕಾರದಿಂದ ಪ್ರತಿ ವರ್ಷ ವಿದ್ಯುತ್ ನಿರ್ವಹಣೆ ಮತ್ತು ಯಂತ್ರೋಪಕರಣಗಳಿಗೆ ಕೋಟ್ಯಾಂತರ ರೂಪಾಯಿ ಬಿಡುಗಡೆಗೊಳ್ಳುತ್ತದೆ.

ಕಳಪೆ ಮಟ್ಟದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ
ಅಥವಾ ಗುಣಮಟ್ಟದ ಯಂತ್ರೋಪಕರಣಗಳನ್ನು ಜೆಸ್ಕಾಂ ಅಧಿಕಾರಿಗಳು ಮಾರಾಟ ಮಾಡಿ, ಕಳಪೆ ಗುಣಮಟ್ಟದ ಯಂತ್ರೋಪಕರಣಗಳನ್ನು ಅಳವಡಿಸುತ್ತಾರೆಯೆ? ಎನ್ನುವ ಬಹುದೊಡ್ಡ ಸಮಸ್ಯೆ ಜಿಲ್ಲೆಯಲ್ಲಿ ಕಾಡುತ್ತಿದೆ. ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಕಡಿತಗೊಂಡರೆ, ಅರ್ಧ ಘಂಟೆಯೊಳಗೆ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಆದರೆ, ಜಿಲ್ಲೆಯಲ್ಲಿ ಮಾತ್ರ ಕಡಿತಗೊಂಡ ವಿದ್ಯುತ್ ಮತ್ತೆ ಮರಳಿ ಬರಲು ನಿಶ್ಚಿತ ಸಮಯವೆ ಇಲ್ಲದಂತಹ ಪರಿಸ್ಥಿತಿ ಇದೆ. ಘಂಟೆ, ಎರಡು ಘಂಟೆ, ಮೂರು ಘಂಟೆ ಹೀಗೆ 36 ಘಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಿದಂತಹ ವಿಚಿತ್ರ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಕಂಡು ಬರುತ್ತಿದೆ. ಇಂತ ದಾರುಣ ಪರಿಸ್ಥಿತಿ ಇದೆ. ರಾಜ್ಯ ಇಂಧನ ಸಚಿವರಿಗೆ ಈ ಸಮಸ್ಯೆ ಬಗ್ಗೆ ಮಾಹಿತಿ ಇದೆಯೆ?.

ಉದ್ಯಮಿಗಳು ಬರುವುದಾದರೂ ಹೇಗೆ?
ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ ಅಧೀನದಲ್ಲಿರುವ ನೀತಿ ಆಯೋಗ ಜಿಲ್ಲೆಯನ್ನು ಮಹಾತ್ವಕಾಂಕ್ಷಿ ಜಿಲ್ಲೆಯ ಸಾಲಿನಲ್ಲಿ ಸೇರಿಸಿದೆ. ಇಲ್ಲಿಯ ಮೂಲಭೂತ ಸೌಕರ್ಯ ಸುಧಾರಣೆ ಹೆಚ್ಚಿನ ಆದ್ಯತೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಸರತ್ತು ನಡೆಸಿವೆ. ಆಧುನಿಕ ಕಾಲದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ, ಮೂಲಭೂತ ಸೌಕರ್ಯಗಳು ಮತ್ತು ಕೈಗಾರಿಕಾ ಘಟಕಗಳು ನಿರ್ವಹಿಸುವುದಾದರೂ ಹೇಗೆ?. ಅಸಮರ್ಪಕ ವಿದ್ಯುತ್ ವ್ಯವಸ್ಥೆ ಇರುವ ಜಿಲ್ಲೆಯಲ್ಲಿ ಉದ್ಯಮಿಗಳು ಬರುವುದಾದರೂ ಹೇಗೆ? ಎನ್ನುವ ಬಗ್ಗೆ ಕನಿಷ್ಟ ಕಾಳಜಿ ಇಂಧನ ಸಚಿವರಿಗೆ ಇಲ್ಲ ಎನ್ನುವ ಆಕ್ರೋಶ ಇಲ್ಲಿಯ ಜನರದ್ದಾಗಿದೆ. ಕೇವಲ ವಿದ್ಯುತ್ ಪೂರೈಕೆ ಮತ್ತು ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಜಿಲ್ಲೆಯನ್ನು ಬಳಸಿಕೊಳ್ಳುವ ರಾಜ್ಯ ಸರ್ಕಾರ ಜಿಲ್ಲೆಯ ವಿದ್ಯುತ್ ಸಮಸ್ಯೆ ನಿವಾರಣೆಗೆ ಯಾವುದೆ ಕ್ರಮ ಕೈಗೊಳ್ಳದ ಬೇಜವಾಬ್ದಾರಿತನ ತೋರುತ್ತಿದೆ.

ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿರುವ ಜನರು
ಅಧಿಕಾರಕ್ಕಾಗಿ ಚುನಾವಣೆ ಸಂದರ್ಭಗಳಲ್ಲಿ 24 ಘಂಟೆಗೆ ವಿದ್ಯುತ್ ಪೂರೈಕೆಗೆ ಡ್ರಾಮಾ ಮಾಡುವ ಎಲ್ಲಾ ಜನಪ್ರತಿನಿಧಿಗಳಿಗೆ ಅಧಿಕಾರ ಬಂದ ನಂತರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕನಿಷ್ಟ ಕಾಳಜಿ ಇಲ್ಲದಿರುವುದರಿಂದ ಜಿಲ್ಲೆ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡು ದಶಕಗಳಿಂದ ಹಿಂದುಳಿದ ಹಣೆಪಟ್ಟಿಯೆ ಶಾಶ್ವತಗೊಳ್ಳುವಂತಾಗಿದೆ. ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಜಿಲ್ಲೆಯ ಪಾಲಿಗೆ ಇದ್ದು, ಇಲ್ಲದಂತಾಗಿದ್ದಾರೆ. ಕೇವಲ ಪರ್ಸೆಂಟೇಜ್, ವೇತನ ಮತ್ತಿತರ ಸೌಲಭ್ಯಗಳಿಗಾಗಿ ಈ ಹುದ್ದೆ ಇದೆಯೆ ಎನ್ನುವ ಭಾವನೆ ಜನರಲ್ಲಿ ಮೂಡುವಂತೆ ಮಾಡಿದೆ. ರಾಜ್ಯ ಇಂಧನ ಸಚಿವರಿಗೆ ಜನರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಒಮ್ಮೆ ರಾಯಚೂರು ಜಿಲ್ಲೆಗೆ ಭೇಟಿ ನೀಡಿ, ಇಲ್ಲಿಯ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲಿ. ಇಲ್ಲದಿದ್ದರೆ ಹತ್ತರಲ್ಲಿ ಹನ್ನೊಂದು ಎನ್ನುವ ರೀತಿಯಲ್ಲಿ ರಾಜ್ಯದ ಇಂಧನ ಸಚಿವರು ಜಿಲ್ಲೆಯ ಪಾಲಿಗೆ ಇಲ್ಲ ಎಂದು ಜನ ಭಾವಿಸಿ, ನಿತ್ಯ ವಿದ್ಯುತ್ ಕಡಿತದ ಸಮಸ್ಯೆಗೆ ಬೇಸತ್ತು ಸಚಿವರು ಮತ್ತು ಇಲ್ಲಿಯ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತ ಜೀವನ ಕಳೆಯುತ್ತಾರೆ.











Click it and Unblock the Notifications