ರಾಯಚೂರು: ಭಾರ ಎತ್ತುವ ಸ್ಪರ್ಧೆಯಲ್ಲಿ ಬಂಪರ್ ಬಹುಮಾನ ಪಡೆದ ಹಮಾಲರು
ರಾಯಚೂರು, ಜುಲೈ.15:ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆ ಮಾಸಿ ಹೋಗುತ್ತಿದೆ. ಆದರೆ ರಾಯಚೂರಿನಲ್ಲಿ ಮಾತ್ರ ಗ್ರಾಮೀಣ ಕ್ರೀಡೆಯ ಸೊಬಗು, ಶ್ರೀಮಂತಿಕೆಯನ್ನು ಉಳಿಸಿ, ಬೆಳೆಸುವಂತಹ ಕೆಲಸ ಮಾಡಲಾಗುತ್ತಿದೆ.
ಹೌದು, ರಾಯಚೂರಿನ ರಾಜೇಂದ್ರ ಗಂಜ್, ರೈಸ್ ಮಿಲ್, ಇಂಡಸ್ಟ್ರೀಯಲ್ ಏರಿಯಾದ ಹಮಾಲರ ಸಂಘ ಹಾಗೂ ಗಂಜ್ ನಲ್ಲಿ ಕಸ ಗೂಡಿಸುವ ಮಹಿಳೆಯ ಕ್ಷೇಮಾಭಿವೃದ್ದಿ ಸಂಘ ಕಳೆದ 12 ವರ್ಷಗಳಿಂದ ಗ್ರಾಮೀಣ ಕ್ರೀಡೆಯ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ.
ಅದೇ ರೀತಿ ಈ ವರ್ಷವೂ ಕೂಡ ಗಂಜ್ ಆವರಣದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ಹಮಾಲರಿಗೆ 110 ಕೆಜಿ ಭಾರವಾದ ಉಸುಕಿನ ಚೀಲ ಹಾಗೂ 20 ಕೆಜಿಯಷ್ಟು ಭಾರವಾದ ಕಲ್ಲು ಎತ್ತಿಕೊಂಡು ಸಾಗುವ ಸ್ಪರ್ಧೆ ಏರ್ಪಡಿಸಲಾಗಿತ್ತು.

110 ಕೆಜಿ ಭಾರವಾದ ಉಸುಕಿನ ಚೀಲ ಎತ್ತಿಕೊಂಡು 200 ಮೀಟರ್ ದೂರದವರೆಗೆ ಯಾರೂ ಹತ್ತು ನಿಮಿಷಗಳಲ್ಲಿ ಹೆಚ್ಚು ಬಾರಿ ಹೋಗುತ್ತಾರೋ ಅವರೂ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸುತ್ತಾರೆ. ಅಂದಹಾಗೆ ಈ ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ 29 ಜನ ಹಮಾಲರು ಭಾಗವಹಿಸಿ, ಭಾರವಾದ ಉಸುಕಿನ ಚೀಲ ಎತ್ತಿಕೊಂಡು ಸ್ಪರ್ಧೆ ಗೆಲ್ಲಲೂ ಕಸರತ್ತು ನಡೆಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮರೆಪ್ಪ ಎನ್ನುವವರು 10 ನಿಮಿಷದಲ್ಲಿ 3336 ಮೀಟರ್ ಉದ್ದ ಸಾಗುವ ಮೂಲಕ ಸತತ ಮೂರನೇ ಬಾರಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡರೆ, ಎರಡನೇ ಬಹುಮಾನ ಮಾರೆಪ್ಪ ಎಚ್. ಹಾಗೂ ಮೂರನೇ ಬಹುಮಾನವನ್ನು ಆಂಜನೇಯ ಗೆದ್ದುಕೊಂಡಿದ್ದಾರೆ.
ಮೊದಲನೇ ಬಹುಮಾನವಾಗಿ 5 ಗ್ರಾಂ ಚಿನ್ನದ ಉಂಗುರ, ಎರಡನೇ ಬಹುಮಾನ 50 ಗ್ರಾಂ ಬೆಳ್ಳಿಯ ಕಡಗ ಹಾಗೂ ಮೂರನೇ ಬಹುಮಾನ 30 ಗ್ರಾಂ ಬೆಳ್ಳಿಯ ಕಡಗ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಇನ್ನು ಮಹಿಳೆಯರಿಗಾಗಿ ಏರ್ಪಡಿಸಿದ್ದ 10 ಕೆಜಿ ಭಾರವಾದ ಕಲ್ಲುಗಳನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ಸಾಗುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 6 ಜನ ಮಹಿಳೆಯರಲ್ಲಿ, ಆಂಜೀನಮ್ಮ ಪ್ರಥಮ ಬಹುಮಾನ 5 ಗ್ರಾಂ ಚಿನ್ನದ ಉಂಗುರವನ್ನು ತಮ್ಮದಾಗಿಸಿಕೊಂಡು ಬೀಗಿದರು.
ಎರಡನೇ ಬಹುಮಾನ 50 ಗ್ರಾಂ ಬೆಳ್ಳಿಯ ಕಡಗವನ್ನು ಪದ್ದಮ್ಮ ತನ್ನದಾಗಿಸಿಕೊಂಡರು. ಮೂರನೇ ಬಹುಮಾನ 30 ಗ್ರಾಂ ಬೆಳ್ಳಿಯ ಕಡಗವನ್ನು ಜಯಮ್ಮ ಒಲಿಸಿಕೊಂಡಿದ್ದಾರೆ. ಇನ್ನೂ ಸ್ಪರ್ಧೆ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಜನರು ಸೇರಿಕೊಂಡು ಸ್ಪರ್ಧಾಳುಗಳಿಗೆ ಸಿಳ್ಳೆ, ಕೆಕೆ ಹಾಕುವುದರ ಮೂಲಕ ಹುರಿದುಂಬಿಸಿದರು.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಯನ್ನು, ಪ್ರತಿ ವರ್ಷ ಹಮಾಲರ ಸಂಘ ಆಚರಿಸಿಕೊಂಡು ಬರುತ್ತಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications