ರಾಯಚೂರಿನಲ್ಲಿ ಕುಂಬಾರರ ಸುಗ್ಗಿ ಹಬ್ಬ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ, ಏನಿದರ ವಿಶೇಷತೆ?
ರಾಯಚೂರು, ಜೂನ್ 18: ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆ ಆಚರಣೆಗೆ ಭರದ ಸಿದ್ದತೆ ನಡೆದಿದೆ. ಈ ವರ್ಷ ಮುಂಗಾರು ಮಳೆಯ ಆಗಮನ ತಡವಾಸಗಿದ್ದರಿಂದ ರೈತರು ಕಂಗಲಾಗಿದ್ದಾರೆ. ಇದರ ಮಧ್ಯೆಯೇ ಮಣ್ಣೆತ್ತಿನ ಅಮವಾಸ್ಯೆ ಆಗಮಿಸಿರುವುದು ರೈತರಲ್ಲಿ ಕೊಂಚ ಸಂಭ್ರಮ ಮನೆ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಮಣ್ಣೆತ್ತುಗಳಿಗೆ ಭಾರಿ ಬೇಡಿಕೆಯಿದೆ. ಇದೊಂದು ರೀತಿಯಲ್ಲಿ ಕುಂಬಾರಿಗೆ ಸುಗ್ಗಿ ಹಬ್ಬ ಎಂದರೆ ತಪ್ಪಾಗಲಾರದು.
ಮಣ್ಣೆತ್ತಿನ ಅಮವಾಸ್ಯೆ ಹಬ್ಬ ಗ್ರಾಮಗಳಲ್ಲಿ ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲಾ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಆಚರಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮನ್ಸಲಾಪುರ ಗ್ರಾಮದಲ್ಲಿ ಕುಂಬಾರ ಕುಟುಂಬವು ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ ತಿಂಗಳಿನಿಂದ ಮಣ್ಣಿನ ಎತ್ತುಗಳ ತಯ್ಯಾರಿಯಲ್ಲಿ ನಿರತವಾಗಿದ್ದಾರೆ.

ಕುಂಬಾರ ಕುಟುಂಬದ ನಾಗಮ್ಮ ಎಂಬ ಮಹಿಳೆ ಸುಮಾರು 50 ವರ್ಷಗಳಿಂದ ಮಣ್ಣೆತ್ತು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ತಿಂಗಳ ಮುಂಚೆಯೇ ಅವರು ಮತ್ತು ಅವರು ಕುಟುಂಬ ಹುತ್ತದ ಅಥವಾ ಗುಡ್ಡದ ಕೆಂಪು, ಜಿಗಿ ಮಣ್ಣು ತಂದು, ಕೆಸರು ತಂದು, ಅದರಲ್ಲಿಯ ಕಸ ಕಡ್ಡಿಯನ್ನು ತೆಗೆದು ನಂತರ ಆ ಮಣ್ಣನ್ನು 15 ದಿನಗಳವರೆಗೆ ಹದವಾಗಲು ಬಿಟ್ಟು ಹದಗೊಂಡ ನಂತರ ಎತ್ತುಗಳನ್ನು ತಯಾರಿಸುತ್ತಾರೆ.
ಪ್ರತಿದಿನ ತಮ್ಮ ಕೈಲಾದಷ್ಟು 10 ಜೋಡಿ ಎತ್ತುಗಳನ್ನು ತಯಾರು ಮಾಡುತ್ತಾರೆ. ಇದಕ್ಕೆ ಅವರ ಕುಟುಂಬ ಕೂಡ ಸಾಥ್ ನೀಡುತ್ತಿದೆ. ಮಣ್ಣೆತ್ತುಗಳ ಜೊತೆಗೆ ಮಣ್ಣಿನ ಗ್ವಾದಲಿಗಳನ್ನು ಸಹ ತಯಾರು ಮಾಡುತ್ತಾರೆ. ಅಮವಾಸ್ಯೆಯ 2 ದಿನಕ್ಕೂ ಮುಂಚೆ ಸ್ವತಃ ನಾಗಮ್ಮ ಮತ್ತು ಕುಟುಂಬದವರು ಪುಟ್ಟಿಗಳಲ್ಲಿ ಮಣ್ಣೆತ್ತುಗಳನ್ನು ಇಟ್ಟುಕೊಂಡು ಮನೆ ಮನೆಗೂ ಕೊಟ್ಟು 2 ಸೇರು ಜೋಳ ಅಥವಾ 80 ರಿಂದ 100 ರೂಪಾಯಿವರೆಗೆ ಒಂದು ಜೋಡಿ ಎತ್ತುಗಳನ್ನು ಮಾರಾಟ ಮಾಡುತ್ತಾರೆ.
ಈ ವರ್ಷ ಅಮವಾಸ್ಯೆಯು ಜೂನ್ 18ರಂದು ರವಿವಾರ ರೈತರು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಜನರು ಎತ್ತುಗಳನ್ನು ಖರೀದಿಸುತ್ತಿದ್ದಾರೆ. ಗ್ರಾಮದ ಜನರು ಮಣ್ಣಿನ ಎತ್ತುಗಳನ್ನು ಕೊಂಡು ಪೂಜಿಸಿ, ನೈವೇದ್ಯ ಅರ್ಪಿಸಿ , ಮಳೆ ಬೆಳೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸುತ್ತಾರೆ.

ಈ ಬಗ್ಗೆ ನಾಗಮ್ಮ ಮನ್ಸಲಾಪುರ ಮಾತನಾಡಿದ್ದು, ಶ್ರಮ ಹೆಚ್ಚಾದರೂ ನಿರೀಕ್ಷಿತ ಆದಾಯ ಬರುವುದಿಲ್ಲ. ವಾಸ್ತವವಾಗಿ ತಂತ್ರಜ್ಞಾನ ಬದಲಾದಂತೆ ಮಣ್ಣಿನ ಹೂಜಿ, ಗಡಿಗೆ, ಒಲೆಗಳ ಬೇಡಿಕೆ ಕುಸಿದಿದ್ದು ಮಾರಾಟವೂ ಕ್ಷೀಣಿಸಿದೆ ಎಂದರು.












Click it and Unblock the Notifications