ಸೂಗೂರೇಶ್ವರ ಸ್ವಾಮಿಯ ಕಾರ್ತಿಕ ಮಾಸದ ಜೋಡು ರಥೋತ್ಸವ
ರಾಯಚೂರು ನ.29: ದೇವಸೂಗೂರಿನಲ್ಲಿ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಸೂಗೂರೇಶ್ವರ ಸ್ವಾಮಿಯ ಜೋಡು ರಥೋತ್ಸವ ನೆರವೇರುತ್ತದೆ. ಈ ಬಾರಿಯು ನವೆಂಬರ್ 29 ರಂದು ಸಂಜೆ ರಥೋತ್ಸವ ನಡೆಯಲಿದ್ದು, ಭರ್ಜರಿ ಸಿದ್ಧತೆಗಳು ನಡೆದಿವೆ.
ಕೃಷ್ಣಾನದಿ ತೀರದ ಜಾಗೃತ ದೇವರು ಶ್ರೀ ಸೂಗೂರೇಶ್ವರನ ನೆಲೆ ದೇವಸೂಗೂರು. ಇದು ವೀರಭದ್ರನ ಅವತಾರಿ ಎಂದು ಪೂಜಿಸುವ ಚೆನ್ನವೀರ ಗುರುಗಳ ಮಹಾಜಂಗಮಸ್ಥಾನವೂ ಆಗಿದೆ. ಈ ಸನ್ನಿಧಾನದ ಮಹಿಮೆಗಳು ಅಪಾರ ಎಂದು ಭಕ್ತರು ನಂಬುತ್ತಾರೆ. 12ನೇ ಶತಮಾನದಿಂದ ಶ್ರೀ ಸೂಗೂರೇಶ್ವರನ ದಿವ್ಯಚರಿತ್ರೆ ಆರಂಭವಾದ ಉಲ್ಲೇಖಿಗಳಿದ್ದು, ಈ ಕ್ಷೇತ್ರಕ್ಕೆ ಅಪಾರ ಮಹಿಮೆಯಿದೆ ಎಂದು ನಂಬಲಾಗಿದೆ.
ಸರ್ಕಾರಿ ಶಿಕ್ಷಕಿ ಕೆಲಸ ಪಡೆದ ರಾಯಚೂರಿನ ಪೂಜಾ ಮಂಗಳಮುಖಿಯರಿಗೆ ಮಾದರಿ
ದೇವಸೂಗೂರು ರಾಯಚೂರು ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದ್ದು ಕರ್ನಾಟಕ , ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಂದ ಅತಿ ಹೆಚ್ಚು ಭಕ್ತರು ಸನ್ನಿಧಾನಕ್ಕೆ ಭೇಟಿ ನೀಡುತ್ತಾರೆ.
ಸರ್ವಧರ್ಮಗಳ ಬೀಡು ಸೂಗೂರೇಶ್ವರನ ಸನ್ನಿಧಿ
ಈ ಕ್ಷೇತ್ರದ ಮಹಿಮೆ ಅರಿತು ದೂರದ ಊರುಗಳಿಂದಲೂ ಭಕ್ತರು ನಿತ್ಯ ಬಂದು ದರ್ಶನ ಪಡೆಯುತ್ತಿದ್ದಾರೆ. ಇದು ಸರ್ವಧರ್ಮಗಳ ಸಾಕಾರ ಕೇಂದ್ರವಾಗಿದ್ದು ಜಾತಿ ಭೇದ ಎನ್ನುವ ಸೋಂಕು ಇಲ್ಲಿ ಸುಳಿಯುವುದಿಲ್ಲ. ಯಾವುದೇ ಕಲ್ಮಶವಿಲ್ಲದೆ ಎಲ್ಲ ಧರ್ಮೀಯರು ಬೆರತು ಸಮನ್ವಯದಿಂದ ಸೂಗೂರೇಶ್ವರನ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದು ಭಕ್ತರು ಹೇಳಿದ್ದಾರೆ.
ಸೂಗೂರು ಗ್ರಾಮವು ಹಲವು ಸ್ಥಳ ಪುರಾಣಗಳಿಗೆ ಕೇಂದ್ರ ಬಿಂದು ಆಗಿರುವುದರಿಂದಲೇ ಇದು ದೇವಸೂಗೂರು ಎಂದು ಪ್ರಖ್ಯಾತಿ ಪಡೆದಿದೆ.
ಜನರ ಸಂಕಷ್ಟಗಳನ್ನು ದೂರ ಮಾಡಿದ್ದ ಶಿವಯೋಗಿಗಳು
ಶ್ರೀ ಚನ್ನವೀರ ಶಿವಯೋಗಿಗಳು ಶ್ರೀಶೈಲದಿಂದ ಕಾಶ್ಮೀರ, ಕಾಶ್ಮೀರದಿಂದ ಬಸವಕಲ್ಯಾಣ, ಅಲ್ಲಿಂದ ರಾಯಚೂರಿನ ಗಬ್ಬೂರಿನವರೆಗೂ ಸಂಚರಿಸುತ್ತಾ ಭಕ್ತರಿಗೆ ಪವಾಡಗಳನ್ನು ತೋರಿಸಿ ಸಂಕಷ್ಟಗಳನ್ನು ಪರಿಹರಿಸಿದರು ಎನ್ನುತ್ತಾರೆ.
ರಂಗೋಲಿ ಹುಡಿಯಲ್ಲಿ ಲೀನರಾಗಿ, ಮನುಷ್ಯರನ್ನು ಉದ್ದರಿಸುವುದಕ್ಕಾಗಿಯೇ ಮೂರ್ತಿ ಸ್ವರೂಪ ಧರಿಸಿದರು. ಗಬ್ಬೂರಿನಿಂದ ದೇವಸೂಗೂರಿಗೆ ಮೂರ್ತಿ ಸ್ವರೂಪದಲ್ಲಿ ಬಂದರು ಎಂದು ಇವರ ಪವಾಡಗಳ ಬಗ್ಗೆ ಭಕ್ತ ಸಮೂಹ ಹೇಳುತ್ತದೆ.
ಶೈಕ್ಷಣಿಕ ನೆಲೆಯಾಗಿಯೂ ದೇವಸೂಗೂರು ಖ್ಯಾತಿ ಪಡೆದಿದೆ
ಸೂಗೂರೇಶ್ವರ ದೇವರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಕ್ಷೇತ್ರದ ಮಹಿಮೆಯ ಹಿನ್ನೆಲೆಯು ಭಕ್ತರಲ್ಲಿ ಜನಜನಿತವಾಗಿದ್ದು ಅದು ಪುರಾಣ, ಕಾವ್ಯ , ಪದ್ಯ, ಕವಿತೆ, ತ್ರಿಪದಿ ನಾಟಕಗಳ ಸ್ವರೂಪ ಪಡೆದಿದೆ. ಸನ್ನಿಧಾನವು ಹಸಿರು ವನಸಿರಿಗಳಿಂದ ಕೂಡಿದ್ದು ನೆಮ್ಮದಿಯ ನೆಲೆಯಾಗಿ ಭಕ್ತರನ್ನು ಸದಾ ಸೆಳೆಯುತ್ತಲೇ ಇದೆ. ಆಧ್ಯಾತ್ಮಿಕವಾಗಿ ,ಧಾರ್ಮಿಕವಾಗಿ ಹಾಗೂ ಶೈಕ್ಷಣಿಕ ನೆಲೆಯಾಗಿಯೂ ದೇವಸೂಗೂರಿನ ಖ್ಯಾತಿ ಪಸರಿಸಿದೆ.
ಪೂಜೆ, ಪ್ರಸಾದ ನಿರಂತರವಾಗಿ ನಡೆಯುತ್ತವೆ. ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದಲ್ಲಿ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿದ್ದು ಹರಕೆ ಪೂರೈಸಲು ಬರುವ ಭಕ್ತರಿಗೆ ಅಗತ್ಯ ಅನುಕೂಲ ಮಾಡಿಕೊಡವುದಕ್ಕೆ ದೇವಸ್ಥಾನಕ್ಕೆ ಹೊಂದಿಕೊಂಡು ಕಚೇರಿ, ಸಿಬ್ಬಂದಿ ಇದ್ದಾರೆ. ದೇವಾಲಯದಲ್ಲಿ ವರ್ಷದುದ್ದಕ್ಕೂ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಪೂಜಾ ವೈಶಿಷ್ಟ್ಯಗಳು ನಡೆಯುತ್ತಲೇ ಇರುತ್ತವೆ.
ಸೂಗೂರೇಶ್ವರ ಸ್ವಾಮಿಯ ಜೋಡು ರಥೋತ್ಸವ
ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಜೋಡು ರಥೋತ್ಸವ ನೆರವೇರುತ್ತದೆ. ರಥೋತ್ಸವದ ದಿನದಂದು ಖಂಡೇದಾರ ಧರಿಸಿ ಪೂಜಿಸಿದ ಶಿಖರಗಳಿಗೆ ಬೆಳಗ್ಗೆ ಮುತ್ತೈದೆಯರು ಕಳಸ ಕನ್ನಡಿಗಳನ್ನು ಬೆಳಗುತ್ತಾ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ಆ ಶಿಖರಗಳನ್ನು ಬೃಂಗಿ ಮತ್ತು ಬಂಗಿ ಮನೆಯವರು ಹೊತ್ತು ಗೋಪುರಗಳ ಮೇಲೆರಿಸುತ್ತಾರೆ. ಅನಂತರ ಪಲ್ಲಕ್ಕಿಯ ಏಕಾಂತ ಸೇವೆ ನಡೆಯುತ್ತವೆ.
ಸಂಧ್ಯಾಕಾಲದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರಭಾವವಳಿಯಲ್ಲಿ ಅಲಂಕರಿಸಿ ನ.29 ರಂದು ಸಂಜೆ 5 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ತರಲಾಗುವುದು. ಬಳಿಕ ಪ್ರಧಾನ ಅರ್ಚಕರ ಸಾನ್ನಿಧ್ಯದಲ್ಲಿ ಜೋಡು ರಥೋತ್ಸವ ಜರುಗುವುದು.