ಶಿಕ್ಷಕರ ನೇಮಕಾತಿಯಲ್ಲಿ ಹೈದ್ರಾಬಾದ್ ಕರ್ನಾಟಕಕ್ಕೆ ಮತ್ತೆ ಅನ್ಯಾಯ!
ರಾಯಚೂರು, ಜುಲೈ.05: ಹೈದ್ರಾಬಾದ್ ಕರ್ನಾಟಕ ಭಾಗದ ಬಹು ದಿನದ ಕನಸು ನುಚ್ಚು ನೂರಾಗಿದೆ. 371 ಜೆ ಕಲಂ ಜಾರಿಯಿಂದ ಉದ್ಯೋಗಾವಕಾಶಗಳು ವಿಫುಲವಾಗುತ್ತವೆ ಎಂಬ ನಿರೀಕ್ಷೆಯಿತ್ತು. ಆದರೆ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಅನ್ಯಾಯವಾಗಿದ್ದು, ಆಕಾಂಕ್ಷಿಗಳು ಆತಂಕ ಎದುರಿಸುತ್ತಿದ್ದಾರೆ.
ಕಳೆದ ವರ್ಷ 10 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಲಾಗಿತ್ತು. ಅದರಲ್ಲಿ ಟಿಇಟಿ ಪಾಸಾದರೂ ಸಿಇಟಿ ಪಾಸಾಗಲು ಅಭ್ಯರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದ 1780 ಅಭ್ಯರ್ಥಿಗಳು ಇಂಗ್ಲಿಷ್, ವಿಜ್ಞಾನ ಹಾಗೂ ಗಣಿತ ವಿಷಯದ ಮೇಲೆ ಟಿಇಟಿಯಲ್ಲಿ ಪಾಸಾಗಿದ್ದರು.
ಶಿಕ್ಷಕರ ವರ್ಗಾವಣೆಗೆ ಕೊನೆಗೂ ಹೈಕೋರ್ಟ್ ಅಸ್ತು
ಆದರೆ ಸಿಇಟಿ ಫಲಿತಾಂಶ ಪ್ರಕಟವಾದಾಗ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ನಿಗದಿಯಾಗಿದ್ದ ಹುದ್ದೆಗಳ ಪೈಕಿ ಶೇ.19ರಷ್ಟು ಮಾತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದಕ್ಕೆಲ್ಲ ಪರೀಕ್ಷಾ ಪದ್ಧತಿ ಹಾಗೂ ಮಾನದಂಡಗಳೇ ಕಾರಣ. ನೇಮಕಾತಿ ಬಯಸುವ ಅಭ್ಯರ್ಥಿಗಳ ಫಲಿತಾಂಶವನ್ನು ವಿವಿಧ ರೀತಿಯಲ್ಲಿ ವಿಂಗಡಿಸಲಾಗಿದೆ.
ಮೊದಲಿಗೆ ಟಿಇಟಿ ಪಾಸಾಗಬೇಕು ಬಳಿಕ ಪದವಿ ವ್ಯಾಸಂಗದಲ್ಲಿ ನಿಗದಿತ ವಿಷಯದಲ್ಲಿ ಶೇಕಡ 50ರಷ್ಟು ಅಂಕ ಪಡೆದಿರಬೇಕು. ಬಳಿಕ ಸಿಇಟಿಯಲ್ಲಿ ಮೂರು ಪ್ರಶ್ನೆಗಳ ಪೈಕಿ ಎರಡರಲ್ಲಿ ಶೇಕಡ 50 ಹಾಗೂ 60ರಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮ ಮಾಡಿದ್ದಾರೆ.
ಮಾದರಿ ಪ್ರಶ್ನೆ ಪತ್ರಿಕೆ ನೀಡಿಲ್ಲ, ಲಿಖಿತ ರೂಪದ ಪ್ರಶ್ನೆಗಳನ್ನೂ ಕೇಳಲಾಗಿತ್ತು. ಇದರಿಂದ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯದಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಲು ಸಾಧ್ಯವಾಗಿಲ್ಲ. ಹೀಗಾಗಿ ಶಿಕ್ಷರ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿಯುತ್ತಿವೆ. ಆದ ಕಾರಣ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ.
ಹೈದ್ರಾಬಾದ್ ಕರ್ನಾಟಕದಲ್ಲಿ ಸಿಇಟಿ ಮಾದರಿ ಪರೀಕ್ಷೆಯಿಂದ ಸಾಕಷ್ಟು ಅಭ್ಯರ್ಥಿಗಳು ಉದ್ಯೋಗದಿಂದ ಹೊರಗುಳಿಯುತ್ತಿದ್ದಾರೆ. ಅಲ್ಲದೇ ಸ್ಥಳೀಯ ಹುದ್ದೆಗಳು ಖಾಲಿ ಇರುವುದುರಿಂದ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿದೆ. ಪ್ರಸಕ್ತ ಸಿಇಟಿಯಲ್ಲಿ ರಾಜ್ಯಾದ್ಯಂತ ಶೇಕಡ 30ರಷ್ಟು ಜನ ಆಯ್ಕೆಯಾಗಿಲ್ಲ.
ಅಲ್ಲದೇ ಹುದ್ದೆಗಿಂತಲೂ ಅರ್ಹತೆ ಪಡೆದವರ ಸಂಖ್ಯೆ ಕಡಿಮೆಯಿದ್ದರೂ ಸಿಇಟಿ ನಡೆಸಿದ್ದಾರೆ. ಇದರ ಹಿಂದೆ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ಡಾ.ರಜಾಕ್ ಉಸ್ತಾದ್ ಆರೋಪಿಸುತ್ತಿದ್ದಾರೆ.
ರಾಜ್ಯಾದ್ಯಂತ ಶಿಕ್ಷಕರ ಕೊರತೆಯಿಂದ 22 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರಲ್ಲಿ ಶೇಕಡ 40ರಷ್ಟು ಹುದ್ದೆಗಳು ಹೈಕ ಭಾಗದಲ್ಲಿ ಖಾಲಿ ಇವೆ. ಮತ್ತೊಂದೆಡೆ ಸಿಇಟಿ ಪದ್ಧತಿಯಿಂದ ಶೇಕಡ 81ರಷ್ಟು ನೇಮಕಾತಿ ನಡೆದಿಲ್ಲ. ಇದು ಶೈಕ್ಷಣಿಕವಾಗಿ ಹಿಂದುಳಿದಿರುವ ಹೈದ್ರಬಾದ್ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಗೆ ಕಾರಣವಾಗುತ್ತದೆ.
ಹೀಗಾಗಿ ಸಿಇಟಿ ಪದ್ಧತಿ ಬದಲಿಸಿ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಒತ್ತು ನೀಡಬೇಕಿದೆ.