ಎಲೆಕ್ಷನ್ ಎಫೆಕ್ಟ್: ಹೂವಿನ ಹಾರಗಳಿಗೆ ಸಖತ್ ಡಿಮ್ಯಾಂಡ್! ವ್ಯಾಪಾರಿಗಳು ಫುಲ್ ಖುಷ್
ರಾಯಚೂರು, ಮೇ 03: ಎಡೆದೊರೆ ನಾಡಲ್ಲಿ ದಿನ ಕಳೆಯುತ್ತಿದ್ದಂತೆ ಚುನಾವಣಾ ಕಾವು ರಂಗೇರಿದೆ. ನಾಯಕರು ಗದ್ದುಗೆ ಏರುವುದಕ್ಕೆ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದಲ್ಲಿ ತೊಡಗಿರುವ ನಾಯಕರಿಗೆ ತರಹೇವಾರಿ ಹೂಗುಚ್ಛ ನೀಡಿ ಎಲ್ಲೆಡೆ ಸ್ವಾಗತ ಮಾಡಲಾಗುತ್ತಿದೆ. ಅದರ ಸಲುವಾಗಿ ರಾಯಚೂರು ಜಿಲ್ಲೆಯಲ್ಲಿ ಹೂಗುಚ್ಛ ಹಾಗೂ ತರಹೇವಾರಿ ಹಾರಗಳಿಗೆ ಬೇಡಿಕೆ ಹೆಚ್ಚಾಗಿದೆ.
ಈ ಹಿಂದೆ ಚುನಾವಣೆ ಪ್ರಚಾರದಲ್ಲಿ ಕೇವಲ ಒಂದು ಸಣ್ಣ ಹಾರವನ್ನು ಮಾತ್ರ ಹಾಕುತ್ತಿದ್ದರು. ಆದರೆ, ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ದೊಡ್ಡ ಹಾರ ತಯಾರಿಸಿ ಜೆಸಿಬಿ ಅಥವಾ ಕ್ರೇನ್ ಮೂಲಕ ತಮ್ಮ ನೆಚ್ಚಿನ ನಾಯಕರಿಗೆ ಹಾರ ಹಾಕುವ ಮೂಲಕ ದೊಡ್ಡ ಸದ್ದು ಮಾಡುತ್ತಿದೆ.

ವಿಧಾನಸಭೆ ಚುನಾವಣೆ ಸಲುವಾಗಿ ನಗರದ ರಸ್ತೆ ಬದಿಯಲ್ಲಿ ಹೂಗುಚ್ಛ ಹಾಗೂ ಹಾರಗಳಿಗೆ ಬಾರಿ ಬೇಡಿಕೆ ಬಂದಿದೆ. ಎಲ್ಲೆಡೆ ಚುನಾವಣಾ ಪ್ರಚಾರ, ಸಾರ್ವಜನಿಕ ಕಾರ್ಯಕ್ರಮಗಳು ಜಾಸ್ತಿಯಾಗುತ್ತಿವೆ. ಈ ಸಲುವಾಗಿ ಸ್ಥಳೀಯ ಮುಖಂಡರು, ಅಭ್ಯರ್ಥಿಗಳು ಹಾಗೂ ಪಕ್ಷದ ಹಿರಿಯ ನಾಯಕರಿಗೆ ತರಹೇವಾರಿ ಹೂಗುಚ್ಛ ಹಾಗೂ ಹಾರ ಹಾಕಿ ಸ್ವಾಗತ ಮಾಡುವುದು ವಾಡಿಕೆ. ಹೀಗಾಗಿ, ಎಲ್ಲೆಡೆ ದೊಡ್ಡ ದೊಡ್ಡ ಹಾರ ಹಾಗೂ ಬೃಹತ್ ಹೂಗುಚ್ಛಕ್ಕೆ ಭಾರಿ ಬೇಡಿಕೆ ಬಂದಿದೆ.
ಇನ್ನು ಇದನ್ನೇ ಗಮನಿಸಿದ ವ್ಯಾಪಾರಿಗಳು ಸಣ್ಣ ಹೂಗುಚ್ಛದಿಂದ ಹಿಡಿದು ದೊಡ್ಡ ದೊಡ್ಡ ಹೂಗುಚ್ಛ ತಯಾರಿ ಮಾಡುತ್ತಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ತರಹೇವಾರಿ ಹೂಗಳ ಬೊಕ್ಕೆ ಸಿದ್ಧಪಡಿಸುವುದರಲ್ಲ ನಿರತವಾಗಿದ್ದಾರೆ. ಚುನಾವಣೆ ನೆಪದಲ್ಲಿ ಹೂವಿನ ಹಾರಕ್ಕೆ ಬಹು ಬೇಡಿಕೆ ಬಂದಿದೆ. ಬಹಿರಂಗ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಕ್ಕ ಬೆನ್ನಲ್ಲೇ ಹಾರಕ್ಕೆ ಪ್ರತಿ ದಿನ ಬೇಡಿಕೆ ಬರುತ್ತಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಭಾವುಟದ ಬಣ್ಣದಲ್ಲೇ ಆಳೆತ್ತರದ ಹಾರವನ್ನು ತಯಾರು ಮಾಡಲಾಗುತ್ತಿದೆ. ಅಲ್ಲದೆ, 10, 15, 20 ಅಡಿ ಎತ್ತರದ ಕಸ್ಟಮೈಸ್ಡ್ ಹಾರಕ್ಕೆ ರಾಜಕೀಯ ಪಕ್ಷದಿಂದ ಆರ್ಡರ್ ನೀಡಲಾಗುತ್ತಿದೆ. ನಾನಾ ಬಗೆಯ ಹಾರ, ಚೆಂಡು ಹೂ ಸೇರಿದಂತೆ ಹಣ್ಣುಗಳಿಂದಲೂ ಹಾರ ತಯಾರು ಮಾಡಲಾಗುತ್ತಿದೆ. ಸೇಬು, ದಾಳಿಂಬೆ, ಮೂಸಂಬಿ ಸೇರಿ ವಿವಿಧ ಹಣ್ಣು ಹಾಗೂ ಹಾರಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೂವಿನ ಹಾರ ಬೇಕು ಅಂದರೆ ಎರಡ್ಮೂರು ದಿನಗಳ ಮುಂಚಿತವಾಗಿಯೇ ಆರ್ಡರ್ ಮಾಡಬೇಕು. ಕೊರೊನಾ ಸಮಯದಲ್ಲಿ ಟೈಮಲ್ಲಿ ಬಹಳ ನಷ್ಟ ಎದುರಿಸಿದ್ದ ಹೂವಿನ ವ್ಯಾಪಾರಿಗಳಿಗೆ ಚುನಾವಣೆ ಸುಗ್ಗಿ ಕಾಲ ತಂದಿದೆ.
ಹೂವಿನ ಹಾರವನ್ನು ವ್ಯಾಪಾರಿಗಳು ಕಳೆದ 15 ದಿನಗಳಿಂದ ನಿರಂತರವಾಗಿ ತಯಾರು ಮಾಡುತ್ತಿದ್ದು, 350 ರಿಂದ 30 ಸಾವಿರದವರೆಗೆ ದೊಡ್ಡ ಗಾತ್ರದ ಹೂವಿನ ಹಾರವನ್ನು ವ್ಯಾಪಾರಿಗಳು ತಯಾರು ಮಾಡುತ್ತಿದ್ದು, ಒಂದು ದಿನಕ್ಕೆ ಎರಡರಿಂದ ಮೂರು ಹಾರವನ್ನು ತಯಾರು ಮಾಡುತ್ತಿದ್ದು ಇದರಿಂದ ವ್ಯಾಪಾರಿಗಳಿಗೆ ಉತ್ತಮ ಲಾಭ ತಂದಿದ್ದು, ಒಟ್ಟಿನಲ್ಲಿ ಚುನಾವಣೆ ಹೆಸರಿನಲ್ಲಿ ಹೂವಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡಿಕೊಳ್ಳುತ್ತಿದ್ದಾರೆ.
ಚುನಾವಣಾ ನಂತರ ಕೂಡ ಜಯಗಳಿಸಿದ ಪಕ್ಷದಿಂದ ಮತ್ತಷ್ಟು ವ್ಯಾಪಾರವಾಗುವ ನಿರೀಕ್ಷೆಯಲ್ಲಿದ್ದಾರೆ. ಚುನಾವಣೆ ಮುಗಿಯುವಷ್ಟರಲ್ಲಿ ಈ ಬಾರಿ ನಮಗೆ ಹೆಚ್ಚಿನ ವ್ಯಾಪಾರ ಆಗುತ್ತಿದ್ದು, ಒಂದು ದೊಡ್ಡ ಹಾರಕ್ಕೆ 20 ಸಾವಿರ ತೆಗೆದುಕೊಳ್ಳುತ್ತಿದ್ದೇವೆ. ಒಂದು ದಿನಕ್ಕೆ ಎರಡರಿಂದ ಮೂರು ಹಾರವನ್ನು ಮಾಡುತ್ತೇವೆ. ಇದರಿಂದ ವ್ಯಾಪಾರ ಉತ್ತಮವಾಗಿ ನಡೆದಿದೆ ಎಂದು ರಾಯಚೂರು ಹೂ ವ್ಯಾಪಾರಿ ಸೈಯದ್ ಬಷೀರ್ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications