ಚಿನ್ನದ ನಾಡು ರಾಯಚೂರಿನ ಐತಿಹಾಸಿಕ ನಾರದಗಡ್ಡೆ ಬಗ್ಗೆ ನಿಮಗೆಷ್ಟು ಗೊತ್ತು..?
ರಾಯಚೂರು ಅಕ್ಟೋಬರ್ 14: ಭತ್ತದ ನಾಡು, ಚಿನ್ನದ ನಾಡು, ದೋ ಅಬ್ ಪ್ರದೇಶ ಎಂದು ಕರೆಯಲ್ಪಡುವ ರಾಯಚೂರು ಜಿಲ್ಲೆ ಐತಿಹಾಸಿಕವಾಗಿ ತನ್ನದೇ ಆದ ವೈಶಿಷ್ಠತೆ ಹೊಂದಿದೆ. ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣವಿದ್ದು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪೈಕಿ ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮ ಸಮೀಪದ ನಾರದಗಡ್ಡೆಯೂ ಒಂದು.
ನಾರದಗಡ್ಡೆ ಒಂದು ದ್ವೀಪ ಪ್ರದೇಶವಾಗಿದ್ದು, ನದಿಯ ಮಧ್ಯಭಾಗದಲ್ಲಿ ಚನ್ನಬಸವೇಶ್ವರ ದೇವಾಲಯ ವಿರುವುದರಿಂದ ಐತಿಹಾಸಿಕವಾಗಿ ಗುರುತಿಸಿಕೊಂಡಿದೆ.

ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ನಾರದಗಡ್ಡೆ ಸುತ್ತಲೂ ನದಿ ಒಂದು ಭಾಗದಲ್ಲಿ ಚನ್ನಬಸವೇಶ್ವರ ದೇವಸ್ಥಾನವಿದ್ದು ಇದನ್ನು ನೋಡುವುದೆ ಒಂದು ಆಕರ್ಷಣೆ. ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿದ್ದು ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ಅಪಾರ ಪ್ರಮಾಣದಲ್ಲ ಭಕ್ತರು ಆಗಮಿಸುತ್ತಾರೆ.
ರಾಯಚೂರು ನಗರದಿಂದ ನಾರದಗಡ್ಡೆಗೆ ಹೋಗಬೇಕಾದರೆ ಹಳೆಯ ಬುರ್ದಿಪಾಡ ಗ್ರಾಮಕ್ಕೆ ಹೋಗಬೇಕು ಅಲ್ಲಿಂದ ತೆಪ್ಪದ ಮೂಲಕ ನಾರದಗಡ್ಡೆಗೆ ಹೋಗಬೇಕು. ಈ ಹಿಂದೆ ಮಠದ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದ್ದು ನಂತರ ಬೆಳವಣಿಗೆಯಲ್ಲಿ ಗುರು ಶಿಷ್ಯರ ಜಗಳದಿಂದಾಗಿ ಜಿಲ್ಲಾಡಳಿತದ ಕಟಕಟೆಗೆ ಹೋಗಿದ ಪರಿಣಾಮ ಈಗ ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ.

ನಾರದಗಡ್ಡೆಯ ಐತಿಹಾಸಿಕ ಹಿನ್ನೆಲೆ ಏನು..?
ನಾರದಗಡ್ಡೆ ಚನ್ನಬಸವೇಶ್ವರ ದೇವಸ್ಥಾನ ನದಿಯ ಮಧ್ಯದಲ್ಲಿ ಇರುವುದರಿಂದ ಅದನ್ನು ನೋಡಲು ಹೋಗುವುದೇ ಭಕ್ತರಿಗೆ ಇನ್ನಿಲ್ಲದ ಪುಳಕಿತ. ನಾರದಮುನಿಗಳು ಈ ನಡುಗಡ್ಡೆಗೆ ಬಂದು ತಪಸ್ಸನ್ನು ಮಾಡಿದ ಮಹಿಮೆಯಿಂದ ಈ ಸ್ಥಳಕ್ಕೆ ನಾರದಗಡ್ಡೆ ಎಂದು ಹೆಸರು ಬಂದಿದೆ.
ವೈರಾಗ್ಯ ಚನ್ನಬಸವೇಶ್ವರಸ್ವಾಮಿಜೀ ಮೊದಲು ಶ್ರೀಶೈಲಕ್ಕೆ ಹೋಗಿರುತ್ತಾರೆ. ಆಗ ಅಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯು ಇವರಿಗೆ ಪ್ರತ್ಯಕ್ಷವಾಗಿ ನೀವು ದೊಡ್ಡ ತಪಸ್ವಿಗಳು ಆಗ್ತೀರಿ. ನಿಮಗೆ ಜಾತ್ರೆ, ರಥೋತ್ಸವ, ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಕರ್ನಾಟಕದ ನಾರದ ಮುನಿಗಳು ತಪಸ್ಸು ಮಾಡಿರುವ ಸಜೀವ ಸಮಾಧಿಯಾಗಬೇಕು ಎಂದು ತಿಳಿಸಿದ್ದಾರೆ ಎಂದು ಪ್ರತೀತಿ.

ದೈವವಾಕ್ಯದಂತೆ ಶ್ರೀ ಚನ್ನಬಸವೇಶ್ವರ ಸ್ವಾಮಿಗಳು ನದಿಯ ದಡಕ್ಕೆ ಬಂದಾಗ ಅಂಬಿಗರು ಗೇಲಿಮಾಡಿ, ಅವರಿಗೆ ನದಿ ದಾಟಿಸಲಿಲ್ಲ. ಆಗ ತಮ್ಮ ಪವಾಡಶಕ್ತಿಯಿಂದ ಸ್ವಾಮಿಗಳು ಕರಿಯ ಕಂಬಳಿ ಗದ್ದುಗೆಯನ್ನು ಹಾಕಿಕೊಂಡು, ಅದರ ಮೇಲೆ ಕುಳಿತುಕೊಂಡು ಪಂಚಾಕ್ಷರಿಯನ್ನು ನೆನೆದು ಹೋಗಿ ನಾರದ ಮುನಿಗಳು ತಪಸ್ಸು ಮಾಡಿದ ಸ್ಥಳಕ್ಕೆ ತಲುಪಿದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.
ನಾರದಗಡ್ಡೆಯಲ್ಲಿ ಸೌಕರ್ಯದ ಕೊರತೆ
ದ್ವೀಪ ಪ್ರದೇಶವಾದ ನಾರದಗಡ್ಡೆ ಭಕ್ತರ ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದರಾಗಬೇಕಿತ್ತು. ಆದರೆ ದೇವಸ್ಥಾನ ಸಮಿತಿ ಹಾಗೂ ಜಿಲ್ಲಾಡಳಿತದ ನಿಷ್ಕಾಳಜಿ ಹಾಗೂ ಪ್ರಚಾರದ ಕೊರತೆಯಿಂದಾಗಿ ಜಿಲ್ಲೆಯ ಅನೇಕರಿಗೆ ನಾರದಗಡ್ಡೆಯ ಎಲ್ಲಿದೆ ಎಂಬ ಮಾಹಿತಿಯೇ ಇಲ್ಲ.
ಚನ್ನಬಸವೇಶ್ವರ ಸ್ವಾಮೀಜಿಗಳು ಶ್ರೀಶೈಲದಿಂದ ತಮ್ಮ ಸಂಚಾರ ಮಾಡುತ್ತ ನಾರದಗಡ್ಡೆಗೆ ತಲುಪಿದಾಗ ಹೈದ್ರಬಾದ್ ನವಾಬರು ನೀಡಿದ ಜಮೀನು ಸೇರಿ ಅನೇಕ ಕಡೆ ಮಠಕ್ಕಾಗಿ ದಾನಿಗಳು ನೂರಾರು ಎಕರೆ ಜಮೀನು ನೀಡಿದ್ದಾರೆ. ಆದರೆ ಮಠದ ಜವಾಬ್ದಾರಿ ವಹಿಸಿಕೊಂಡ ಸ್ವಾಮೀಜಿಗಳು ಅದನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತಾಲೂಕಿನ ಮರ್ಚೆಡ್, ನಗರದ ಬಸವನಭಾವಿ ಸೇರಿ ಹಲವೆಡೆ ಮಠದ ಆಸ್ತಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರ ಆರೋಪವಿದೆ.
ದಿನನಿತ್ಯ ಬರುವ ಭಕ್ತರಿಗೆ ಸರಿಯಾದ ಸಮಯಕ್ಕೆ ತೆಪ್ಪ ನಡೆಸುವವರು ಸಿಗದ ಕಾರಣ ಪರಿಪಾಟಲು ಅನುಭವಿಸಬೇಕಾಗಿದೆ. ಜಿಲ್ಲಾಡಳಿತ ಅಗತ್ಯ ಗಮನಹರಿಸಿ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕು ಎಂದು ಬುರ್ದಿಪಾಡ ಗ್ರಾಮದ ಧರ್ಮರೆಡ್ಡಿ ಒತ್ತಾಯಿಸಿದ್ದಾರೆ.












Click it and Unblock the Notifications