ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರಿಯ ಮಕ್ಕಳ ಅಕ್ಷರ ಕಲಿಕೆ
ರಾಯಚೂರು, ಡಿಸೆಂಬರ್ 28: ಮಕ್ಕಳಲ್ಲಿ ಓದು, ಬರಹದ ಆಸಕ್ತಿಯಿದ್ದರೆ ಯಾವ ಸ್ಥಳದಲ್ಲಾದರೂ ಅಭ್ಯಾಸ ಮಾಡುತ್ತಾರೆ. ಇದಕ್ಕೆ ಲಿಂಗಸೂಗೂರು ಪಟ್ಟಣದ ಜೂನಿಯರ್ ಕಾಲೇಜು ಮುಂಭಾಗದ ಬೀದಿ ಬದಿಯ ಗಿಡದ ಬುಡದಲ್ಲಿ ತಳ್ಳುಬಂಡಿಯಲ್ಲಿ ಕುಳಿತು ನಿತ್ಯ ಮಕ್ಕಳು ಅಕ್ಷರ ಅಭ್ಯಾಸ ಮಾಡುತ್ತಿರುವುದು ನಾಗರಿಕರ ಗಮನ ಸೆಳೆಯುತ್ತಿದೆ.
ಲಿಂಗಸುಗೂರು ಸ್ಥಳೀಯ ಶಾಸಕ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಅಂಬಿಕಾ ಬಸವರಾಜ ಭಜಂತ್ರಿ, ಎಲ್ಕೆಯಜಿ (ಪೂರ್ವ ಪ್ರಾಥಮಿಕ)ದಲ್ಲಿ ಓದುತ್ತಿರುವ ನವೀನ ಬಸವರಾಜ ಭಜಂತ್ರಿ ಅವರು ತಾಯಿ ಬಸಮ್ಮ ಭಜಂತ್ರಿ ಜತೆ ಬೆಳಿಗ್ಗೆ 9 ಗಂಟೆಗೆ ಶಾಲೆಗೆ ತೆರಳುತ್ತಾರೆ.
ಶಾಲಾ ಅವಧಿ ಮುಗಿದಾಕ್ಷಣ ಬೀದಿಯಲ್ಲಿ ಆಟವಾಡುತ್ತ, ತಳ್ಳುವ ಬಂಡಿಯಲ್ಲಿ ಕುಳಿತು ಅಕ್ಷರ ಅಭ್ಯಾಸ ಮಾಡುತ್ತಾರೆ. "ನಮ್ಮಪ್ಪ ಗೌಂಡಿ ಕೆಲಸಕ್ಕೆ ಹೋಗುತ್ತಾರೆ. ತಾಯಿ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಮನೆಯಲ್ಲಿ ಯಾರೂ ಇರುವುದಿಲ್ಲ. ಕಾರಣ ಶಾಲೆ ಬಿಟ್ಟನಂತರದಲ್ಲಿ ತಾಯಿ ಜೊತೆ ಸಂಜೆವರೆಗೆ ಬೀದಿ ಬದಿಯಲ್ಲಿಯೆ ಆಟವಾಡುತ್ತ, ಅಕ್ಷರ ಕಲಿಕೆ, ಓದು ಮಾಡಿಕೊಳ್ಳುತ್ತೇವೆ. ನಾನು ಮತ್ತು ತಮ್ಮನ ಜೊತೆಗೆ ಸ್ನೇಹಿತ ಆಗಾಗ ರಿಯಾನ್ ಕೂಡ ಬರುತ್ತಾನೆ. ಆಟ, ಕಲಿಕೆ ಬಿಟ್ಟರೆ ಬೇರೇನು ಗೊತ್ತಿಲ್ಲ" ಎಂದು ಅಂಬಿಕಾ ಭಜಂತ್ರಿ ಹೇಳಿದ್ದಾಳೆ.

ಮಕ್ಕಳ ಸ್ಥಿತಿ ಬಗ್ಗೆ ಮಾತನಾಡಿರುವ ಬಸಮ್ಮ ಭಜಂತ್ರಿ "ಹೊಟ್ಟೆ ತುಂಬಿಕೊಳ್ಳಲು ಗಂಡ ಕೆಲಸಕ್ಕೆ ಹೋಗುತ್ತಾರೆ. ನಾವು ಬೀದಿಬದಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಬದುಕು ನಡೆಸುತ್ತಿದ್ದೇವೆ. ಮೂಲತಃ ವಂದಲಿ ಗ್ರಾಮದವಳು, ಗಂಡನ ಮನೆ ಇಳಕಲ್ಲ. ಲಿಂಗಸುಗೂರಲ್ಲಿ ಹೊಟ್ಟೆ ತುಂಬಿಕೊಳ್ಳಲು ಬಂದಿದ್ದೇವೆ. ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ನಾವಂತು ಕಲಿಯಲು ಆಗಲಿಲ್ಲ. ಮಕ್ಕಳು ಕಲಿಯಲಿ ಎಂದು ಪ್ರೋತ್ಸಾಹಿಸುತ್ತಿರುವೆ" ಎಂದು ಕಷ್ಟ ಹಂಚಿಕೊಂಡರು.

ಬೀದಿ ಬದಿಯ ವ್ಯಾಪಾರಸ್ಥೆಯ ಮಕ್ಕಳು ನಿತ್ಯ ಶಾಲಾ ಅವಧಿಯಲ್ಲಿ ಶಾಲೆಗೆ ಹೋಗುತ್ತಾರೆ. ರಜೆ ಹಾಗು ಶಾಲೆ ಅವಧಿ ನಂತರದಲ್ಲಿ ನಿತ್ಯ ತಾಯಿ ಜೊತೆ ಇಲ್ಲಿಯೆ ಆಟವಾಡಿಕೊಂಡು, ಅಕ್ಷರ ಅಭ್ಯಾಸ ಮಾಡುತ್ತ ರಾತ್ರಿ 8 ಗಂಟೆವರೆಗೆ ಉತ್ಸಾಹ ಭರಿತರಾಗಿ ಇರುವುದು ಖುಷಿ ತಂದಿದೆ. ಇಂತಹ ಮಕ್ಕಳ ಲವಲವಿಕೆ, ಕಲಿಕಾ ಆಸಕ್ತಿ ಇತರೆ ಮಕ್ಕಳಿಗೆ ಮಾದರಿ ಆಗಬೇಕು' ಎಂದು ಶಿಕ್ಷಣ ಪ್ರೇಮಿಗಳಾದ ಅಕ್ರಂಪಾಷಾ, ಹುಸೇನ ತರಕಾರಿ ಖುಷಿ ಹಂಚಿಕೊಂಡರು.












Click it and Unblock the Notifications