ನಾರಾಯಣಪುರ ಜಲಾಶಯ ಒಳಹರಿವು ಹೆಚ್ಚಳ: ನಡುಗಡ್ಡೆ ಗ್ರಾಮಗಳಲ್ಲಿ ಆತಂಕ
ರಾಯಚೂರು, ಜುಲೈ.26: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ನಡುಗಡ್ಡೆ ಜನ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಒಳ ಹರಿವು ಬರುತ್ತಿದೆ.
ಪ್ರತಿ ದಿನ ಒಂದರಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದೆ. ಇದರಿಂದ ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿಯ ದಡದಲ್ಲಿ ಪ್ರವಾಹ ಭೀತಿ ಕಂಡು ಬರುತ್ತಿದೆ. ಲಿಂಗಸುಗೂರು ತಾಲೂಕಿನ ನಡುಗಡ್ಡೆ ಗ್ರಾಮಗಳಾದ ಕಡದರಗಡ್ಡಿ, ಯಂಕನದೊಡ್ಡಿ, ಮ್ಯಾದರಗಡ್ಡಿ ನಾಗರಿಕ ಜಗತ್ತಿನ ಸಂಪರ್ಕ ಕಡಿದು ಕೊಂಡಿವೆ.
ಉಕ್ಕಿ ಹರಿದ ಕೃಷ್ಣೆ: ನೆರೆ ಭೀತಿಯಲ್ಲಿ ಲಿಂಗಸುಗೂರು ತಾಲೂಕಿನ ಹಳ್ಳಿಗಳು
ಜೊತೆಗೆ ಶೀಲಹಳ್ಳಿ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪ್ರತಿ ವರ್ಷ ಈ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಕಡದರಗಡ್ಡಿ ಗ್ರಾಮಸ್ಥರು ಗೋಳು ಕೇಳುವರು ಇಲ್ಲದಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆ ಎದುರಾದಾಗ ಮಾತ್ರ ಜನರ ಎದುರು ಪ್ರತ್ಯಕ್ಷರಾಗುತ್ತಾರೆ.
ಈ ವೇಳೆ ಕಡದರಗಡ್ಡೆ ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಚಾಮರಾಜ ಪಾಟೀಲ್'ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. "ಪ್ರತಿ ವರ್ಷವೂ ನಾವು ಇದೇ ರೀತಿ ಪ್ರಾಣ ಭೀತಿಯಲ್ಲಿ ಬದುಕುತ್ತಿದ್ದರೂ ನಿಮಗೆ ಲೆಕ್ಕಕ್ಕೆ ಇಲ್ಲ" ಅಂತ ತಹಶೀಲ್ದಾರರನ್ನ ದಬಾಯಿಸಿದ್ದಾರೆ.