ಸೂಗೂರೇಶ್ವರ ಸ್ವಾಮಿ ದೇವಾಲಯದಲ್ಲಿ ಮೊಸರುಬಾನ ಬುತ್ತಿ ನೈವೇದ್ಯ
ರಾಯಚೂರು, ಮೇ,24: ರಾಯಚೂರು ಜಿಲ್ಲೆಯ ದೇವಸೂಗೂರಿನ ಸೂಗೂರೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಮೊಸರುಬಾನ ಬುತ್ತಿ ನೈವೇದ್ಯ ಸಮರ್ಪಣೆ, ಪ್ರಸಾದ ವಿತರಣೆ ಸಮಾರಂಭವು ತ್ರಿಂದಶ ಅರ್ಚಕರ ನೇತೃತ್ವದಲ್ಲಿ ಸದ್ಭಕ್ತರ ಸಹಾಯ ಸಹಕಾರದಿಂದ ಸಂಭ್ರಮದೊಂದಿಗೆ ನಡೆಯಿತು.
ದೇವಸೂಗೂರು ಸೂಗೂರೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಮೊಸರನ್ನ ಬಾನಬುತ್ತಿಯ ಧಾರ್ಮಿಕ ಕಾರ್ಯಕ್ರಮ ಗಮನ ಸೆಳೆಯಿತು. ಖಡಕ್ ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ಅಂಬ್ರೆಕಾಳು, ಅಂಬಲಿ, ಉಳ್ಳಾಗಡ್ಡಿ ಚಟ್ನಿ, ಮೊಸರನ್ನ ಸೇರಿದಂತೆ ವಿವಿಧ ಖಾದ್ಯಗಳನ್ನು ಭಕ್ತರು ಹಾಗೂ ಸಾವಿರಾರು ಜಂಗಮರು ಸವಿದರು.
12ನೇ ಶತಮಾನದಲ್ಲಿ ಕಲ್ಯಾಣದ ಬಸವಣ್ಣನವರು ಒಂದು ಲಕ್ಷದ ತೊಂಬತ್ತಾರು ಸಾವಿರ ಜಂಗಮರಿಗೆ ನಿತ್ಯ ಪ್ರಸಾದವನ್ನು ಮಾಡುವ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪಕ್ಕೆ ಇನ್ನೂ 6 ಸಾವಿರ ಜಂಗಮರು ಕಡಿಮೆಯಾಗಿದ್ದರು.

ಆ ಜಂಗಮರು ಕಾಶ್ಮೀರದ ಮಹಾದೇವರಸ ಮುದ್ರೆಯ ಮನೆಯಲ್ಲಿರುವ ವಿಚಾರ ತಿಳಿಯಿತು. ಆದರೆ, ಬಸವಣ್ಣನವರು 6 ಸಾವಿರ ಜಂಗಮರನ್ನು ಕರೆ ತರುವ ಬಗ್ಗೆ ಚಿಂತೆಗೊಳಗಾದರು. ಆಗ ಅಲ್ಲಿಂದ ಅವರನ್ನು ಹೇಗೆ ಕರೆತರುವುದು ಎಂಬ ಯೋಚನೆಯಲ್ಲಿರುವಾಗ ಪ್ರಸಾದ ಮೂಲಕ ಕರೆ ತರಬೇಕು ಎನ್ನುವ ತೀರ್ಮಾನಕ್ಕೆ ಬಂದು, ಮೊಸರನ್ನ ಬಾನ ಮಾಡಿಕೊಂಡ ಅನ್ನದ ರೂಪದಲ್ಲಿ ಕರೆತರಲಾಯಿತು ಎನ್ನುತ್ತದೆ ಇತಿಹಾಸ.
ಮೊಸರನ್ನ ಬಾನಬುತ್ತಿ; ಆಗ ಸೂಗೂರೇಶ್ವರ ಸ್ವಾಮಿಯ ಜತೆಯಲ್ಲಿ ಜಂಗಮರು ಬಂದ ಪ್ರತೀಕವಾಗಿ ಮೊಸರಬಾನ ಬುತ್ತಿಯನ್ನು ಇಂದಿಗೂ ಮಾಡಿಕೊಂಡ ಬರಲಾಗುತ್ತಿದೆ. ಸೂಗೂರೇಶ್ವರ ಸ್ವಾಮಿ ಜಂಗಮ ಸ್ವರೂಪಿಯಾಗುತ್ತಾನೆ.

ದೇವರಿಗೆ ನದಿ ಸ್ಥಾನದ ನಂತರ ಮಹಾಭಿಷೇಕ ಮಾಡಲಾಗುತ್ತಿದೆ. ಕಾವಿಧಾರಣೆ ಮಾಡಿ ಜೋಳಿಗೆಯಲ್ಲಿ ಅಕ್ಕಿ ಹಾಕುವ ಮೂಲಕ ನೈವೇದ್ಯ ಮಾಡಲಾಗುತ್ತದೆ. ವಚನಕಾರರ ದಾಸೋಹ ಪದ್ಧತಿ ಆಚರಣೆ ಸಂದರ್ಭದಲ್ಲಿ ಜಂಗಮರಿಗೆ ಮೊಸರನ್ನ ಬಾನ ಬುತ್ತಿ ಉಣ ಬಡಿಸಲಾಗುತ್ತಿತ್ತು ಎನ್ನುತ್ತಾರೆ ಗ್ರಾಮಸ್ಥರು.
12ನೇ ಶತಮಾನದ ಪರಂಪರೆಯನ್ನು ಈಗಲೂ ಈ ದೇವಾಲಯದಲ್ಲಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಕಾಶ್ಮೀರ ದೇಶದ ಮಹದೇವ ಭೂಪಾಲ ಅರಸರ ಗುರುವರರಾಗಿ, ಆ ಸ್ಥಾನದಲ್ಲಿರುವ 6000 ಜಂಗಮರಿಗೆ ಕ್ರಿಯಾಮೂರ್ತಿಯಾದ ಶ್ರೀ ಚನ್ನವೀರ ಶಿವಾಚಾರ್ಯ ಗುರುವರರು (ಶ್ರೀ ಸೂಗೂರೇಶ್ವರ ಸ್ವಾಮಿ) ಕಲ್ಯಾಣದಣ್ಣ ಭಕ್ತಿ ಭಂಡಾರಿ ಬಸವಣ್ಣರವರ ಬಿನ್ನಃದ ಮೇರೆಗೆ, ಅವರು ತಂದ ಮೊಸರನ್ನಬಾನ ಪ್ರಸಾದ ದಿಂದ 6000 ಜಂಗಮರನ್ನ ಪ್ರಸಾದಕಾಯರನ್ನಾಗಿ ಪರಿವರ್ತಿಸಿದರು.
ಶಿವಯೋಗ ಸಾಧನಾ ಶಕ್ತಿಯಿಂದ ಶಿವಲಿಂಗ ರೂಪವಾಗಿ ಮಾರ್ಪಡಿಸಿ, ಬಸವಣ್ಣರವರ ಜೋಳಿಗೆಯಲ್ಲಿ ಮರೆಮಾಡಿ, ಅರಸರ ಗಮನಕ್ಕೆ ಬಾರದಂತೆ ಕಲ್ಯಾಣಕ್ಕೆ ಕಳುಹಿಸಿದ ಕುರುಹಾಗಿ ಗ್ರಾಮದ ಭಕ್ತ ಮಹೇಶ್ವರರು ಪ್ರತಿ ವರುಷ, ತಮ್ಮ ತಮ್ಮ ಮನೆಗಳಲ್ಲಿ ಮೊಸರುಬಾನ ಬುತ್ತಿ ತಯ್ಯಾರಿಸಿ, ಶ್ರೀ ಸ್ವಾಮಿಗೆ ನೈವೇದ್ಯ ಸಮರ್ಪಿಸಿ ತ್ರಿಂದಶ ಅರ್ಚಕರಿಗೆ ತೃಪ್ತಿಪಡಿಸಿ, ಬಂಧು ಬಾಂಧವರೊಂದಿಗೆ ಪ್ರಸಾದ ಸ್ವೀಕರಿಸುವ ಪದ್ಧತಿ ಪೂರ್ವ ಕಾಲದಿಂದಲೂ ಆಚರಣೆಯಲ್ಲಿದೆ.












Click it and Unblock the Notifications