ಕೋವಿಡ್ ಸೋಂಕಿತರು ಕೇರ್ ಸೆಂಟರ್ಗೆ ದಾಖಲಾಗುವುದು ಕಡ್ಡಾಯ
ರಾಯಚೂರು, ಮೇ 18; ರಾಯಚೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೂಚನೆ ನೀಡಿದ್ದಾರೆ. ಮೇ 17ರಂದು ಜಿಲ್ಲೆಯಲ್ಲಿ 562 ಹೊಸ ಪ್ರಕರಣ ದಾಖಲಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ ಸವದಿ, "ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತಡೆಯಲು ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಹಾಗೂ ಖಾಸಗಿ ಹೊಟೇಲ್ ಮತ್ತು ಲಾಡ್ಜ್ ರೂಂಗಳಲ್ಲಿ ದಾಖಲಿಸಿ" ಎಂದು ಸೂಚನೆ ನೀಡಿದರು.
"ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರು ಜಿಲ್ಲಾಡಳಿತ ವತಿಯಿಂದ ರಚಿಸಲಾಗಿರುವ ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಾಗಬೇಕು. ಜಿಲ್ಲೆಯ 441 ಪ್ರಕರಣಗಳ ಪೈಕಿ ಇದುವರೆಗೂ 27 ಮಂದಿಯನ್ನು ಮಾತ್ರ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿದೆ, ಇದು ಸರಿಯಲ್ಲ" ಎಂದರು.

ಆಮ್ಲಜನಕ ಬಸ್; "ಸಾರಿಗೆ ಇಲಾಖೆ ವತಿಯಿಂದ ಆಮ್ಲಜನಕ ಬಸ್ ಸೇವೆಯನ್ನು ಇದೀಗ ಆರಂಭಿಸಲಾಗಿದ್ದು, ಜಿಲ್ಲೆಗೆ ಇದೀಗ ಪೂರೈಸಲಾಗಿರುವ 30 ಆಮ್ಲಜನಕ ಉತ್ಪಾದಕ ಯಂತ್ರಗಳನ್ನು ಸಾರಿಗೆ ಬಸ್ಸುಗಳಲ್ಲಿ ಇರಿಸಿ ಅಗತ್ಯ ಇರುವವರಿಗೆ ಬಸ್ ನಲ್ಲಿಯೇ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಬೇಕು, ಪ್ರತಿ ಬಸ್ನಲ್ಲಿ 5-6 ಯಂತ್ರಗಳನ್ನು ಅಳವಡಿಸಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಕೋವಿಡ್ ಕೇರ್ ಸೆಂಟರ್ಗಳಲ್ಲಿ ನಿಲ್ಲಿಸಬೇಕು" ಎಂದು ಅಧಿಕಾರಿಗಳಿಗೆ ತಿಳಿಸಿದರು.
"ಹಟ್ಟಿ ಚಿನ್ನದಗಣಿ ಕಂಪನಿ ಆವರಣದಲ್ಲಿ 100 ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಲು ಕಂಪನಿ ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿದೆ. ಅದು ಸ್ವಾಗತಾರ್ಹ, ಅಲ್ಲಿ ಕೂಡಲೇ ಚಿಕಿತ್ಸೆ ಆರಂಭಿಸಲು 10 ಲೀಟರ್ನ 50 ಆಮ್ಲಜನಕ ಉತ್ಪಾದಕ ಯಂತ್ರಗಳನ್ನು ಕೂಡಲೇ ಖರೀದಿಸಬೇಕು, ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಎರಡು ತಿಂಗಳ ಅವಧಿ ಬೇಕು, ತುರ್ತಾಗಿ 10 ಲೀಟರ್ಗಳ 50 ಆಮ್ಲಜನಕ ಉತ್ಪಾದಕ ಯಂತ್ರಗಳನ್ನು ಖರೀದಿಸುವಂತೆ" ಕಂಪನಿಯವರಿಗೆ ಸೂಚಿಸಿದರು.
ಆಸ್ಪತ್ರೆಗೆ ಅಗತ್ಯವಾಗಿರುವ ರೆಮ್ಡಿಸಿವರ್ ಮತ್ತು ಇತರ ಇಂಜೆಕ್ಷನ್ ಹಾಗೂ ಆಕ್ಸಿಜನ್ ಸಿಲಿಂಡರ್ಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು. ಉಳಿದಂತೆ ಅಗತ್ಯ ಔಷಧಿ ಮಾತ್ರೆಗಳನ್ನು ಕಂಪನಿ ವತಿಯಿಂದ ಒದಗಿಸಬೇಕು ಎಂದು ಸಚಿವರು ಹೇಳಿದರು.












Click it and Unblock the Notifications