ಮಾನ್ವಿ ವಿಧಾನಸಭಾ ಕ್ಷೇತ್ರ: ಹಾಲಿ ಶಾಸಕರ ಜನಪ್ರಿಯತೆ ನಡುವೆ, ಕ್ಷೇತ್ರ ಮರಳಿ ಪಡೆಯುತ್ತಾ ಕಾಂಗ್ರೆಸ್?
ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಗಾಳಿ ಜೋರಾಗಿದೆ. ಆದರೆ, ಕಾಂಗ್ರೆಸ್ ಓಟಕ್ಕೆ ಕಳೆದ ಬಾರಿ ಬ್ರೇಕ್ ಹಾಕಿ ಗೆದ್ದಿರುವ ಹಾಲಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ರಾಯಚೂರು ಫೆಬ್ರವರಿ 13: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಗಾಳಿ ಜೋರಾಗಿದೆ. ಆದರೆ, ಕಾಂಗ್ರೆಸ್ ಓಟಕ್ಕೆ ಕಳೆದ ಬಾರಿ ಬ್ರೇಕ್ ಹಾಕಿ ಗೆದ್ದಿರುವ ಹಾಲಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ಮಧ್ಯೆ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರು ಎಂಬುದು ಕೂತುಹಲ ಕೇರಳಿಸಿದ್ದು, ಇದರ ಆಧಾರದ ಮೇಲೆಯೆ ಜೆಡಿಎಸ್ ಮತ್ತು ಕಾಂಗ್ರೆಸ್ ಪರ ಗಾಳಿ ಎಷ್ಟು ಪ್ರಬಲ ಎನ್ನುವುದು ಗೊತ್ತಾಗಲಿದೆ.
ಪ್ರತಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಸರ್ಕಾರದಿಂದ ದೊರಕುವ ಪರಿಹಾರ ಧನ ಹಾಗೂ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಂದ ರಾಜಾ ವೆಂಕಟಪ್ಪ ನಾಯಕ ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಮಾನ್ವಿಯಿಂದ ಮತ್ತೊಮ್ಮೆ ಜೆಡಿಎಸ್ ಟಿಕೆಟ್ ನೀಡುವುದನ್ನು ಖಚಿತಪಡಿಸಿ ಹೆಸರು ಘೋಷಣೆ ಮಾಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುವ ಕಾರ್ಯವನ್ನು ಶಾಸಕರು ಈಗಾಗಲೇ ಮಾಡುತ್ತಿದ್ದಾರೆ.
ಮಾನ್ವಿ ಮತದಾರರು ಹಾಲಿ ಶಾಸಕರನ್ನು ಬದಲಿಸುತ್ತಾರೆ ಎನ್ನುವ ವಿಶ್ವಾಸದಲ್ಲಿ ಮುಳುಗಿರುವ ಕಾಂಗ್ರೆಸ್ ನಾಯಕರು ಟಿಕೆಟ್ಗಾಗಿ ಪ್ರಭಾವ ಬೀರುತ್ತಿದ್ದಾರೆ. ಮುಖ್ಯವಾಗಿ ಮಾಜಿ ಶಾಸಕ ಹಂಪಯ್ಯ ನಾಯಕ ಮತ್ತೊಮ್ಮೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದು, ಇನ್ನೂ ಐದು ಆಕಾಂಕ್ಷಿಗಳು ಕೂಡಾ ಕಾಂಗ್ರೆಸ್ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ.

ಪರಸ್ಪರ ಸಹಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅನಿವಾರ್ಯತೆ ಕಾಂಗ್ರೆಸ್ಗೆ ಎದುರಾಗಿದೆ. ಕಾಂಗ್ರೆಸ್ ಭದ್ರಕೋಟೆ ಎನ್ನುವ ಹೆಗ್ಗಳಿಕೆ ಇರುವ ಮಾನ್ವಿಯಲ್ಲಿ ಜನರು ಮತ್ತೆ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ಮನೆ ಮಾಡಿದೆ. ಇದಕ್ಕಾಗಿ ಯಾವ ಅಭ್ಯರ್ಥಿ ಸೂಕ್ತ ಎಂಬುದನ್ನು ಬಹುತೇಕ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಅವರು ನಿರ್ಧರಿಸುತ್ತಾರೆ ಎನ್ನುವುದನ್ನು ಜನರು ಚರ್ಚಿಸುತ್ತಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿ.ವಿ.ನಾಯಕ ಅವರಿಗೆ ಮಾನ್ವಿಯೇ ಸೂಕ್ತ, ಅಜಾತಶತ್ರು ಎಂದು ಗುರುತಿಸಿಕೊಂಡಿರುವ ಹಂಪಯ್ಯ ನಾಯಕ ಅವರನ್ನೇ ಜನರು ಆಯ್ಕೆ ಮಾಡುತ್ತಾರೆ, ಇವರಿಬ್ಬರ ಹೊರತಾಗಿ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸೋತಿರುವ, ಈಗ ಕಾಂಗ್ರೆಸ್ ಸೇರ್ಪಡೆಯಾದ ಶರಣಯ್ಯ ಅವರನ್ನು ಅನುಕಂಪದಿಂದ ಆಯ್ಕೆ ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎರಡನೇ ಅತಿಹೆಚ್ಚು ಮತಗಳನ್ನು ಪಡೆದಿರುವ ತನುಶ್ರೀ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಖಂಡಿತ ಗೆಲ್ಲುತ್ತಾರೆ ಹಾಗೂ ಜೆಡಿಎಸ್ ಅಭ್ಯರ್ಥಿ ವಿರುದ್ಧ ಅವರ ಸಹೋದರ ಸಂಬಂಧಿಗಳಿಗೆ ಟಿಕೆಟ್ ಕೊಟ್ಟರೆ ವಿಜಯಶಾಲಿಯಾಗುತ್ತಾರೆ ಎನ್ನುವ ಹತ್ತಾರು ಲೆಕ್ಕಾಚಾರಗಳು ಕಾಂಗ್ರೆಸ್ನಲ್ಲಿವೆ. ಕಾಂಗ್ರೆಸ್ ಗೆಲುವಿನ ಹಾರ ಹಾಕಿಕೊಳ್ಳುವುದಕ್ಕೆ ಆಕಾಂಕ್ಷಿಗಳೆಲ್ಲರೂ ಸಜ್ಜಾಗಿದ್ದಾರೆ.

ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಈ ಸಲ ಮಾನ್ವಿಯಲ್ಲಿ ತಮ್ಮ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಪ್ರಭಾವ ಬೆಳೆಸಿಕೊಂಡಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿ ಕೂಡಾ ಪ್ರಭಾವಶಾಲಿ ಆಗಿರುತ್ತಾರೆ ಎನ್ನುವುದು ಖಚಿತ. ಆದರೆ, ಯಾರು ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಮಾಜಿ ಶಾಸಕ ಗಂಗಾಧರ ನಾಯಕ ಹಾಗೂ ಮುಖಂಡ ಬಿ.ಮಾನಪ್ಪ ನಾಯಕ ಅವರು ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಬಹುತೇಕ ಶಿವನಗೌಡ ನಾಯಕ ಅವರ ಅಣತಿ ಅನುಸಾರ ಬಿಜೆಪಿ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಶಿವನಗೌಡ ನಾಯಕ ಯಾವ ಯೋಜನೆ ಮಾಡಿದ್ದಾರೆ ಎಂಬುದು ಕ್ಷೇತ್ರದ ಜನರಿಗೆ ಇನ್ನೂ ಅರಿವಿಗೆ ಬಂದಿಲ್ಲ. ಬಿಜೆಪಿ ಟಿಕೆಟ್ ಘೋಷಣೆಯ ಬಳಿಕವೇ ಎಲ್ಲವೂ ತಿಳಿಯಲಿದೆ.












Click it and Unblock the Notifications