ಶಿವನಗೌಡರಿಂದ ನಮ್ಮ ಕುಟುಂಬ ಕಲಿಯಬೇಕಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ
Recommended Video
ರಾಯಚೂರು, ಜೂನ್ 26: ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ನಡೆಸುತ್ತಿರುವ ಪಾದಯಾತ್ರೆ ಕೇವಲ ಗಿಮಿಕ್ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದರು.
ರಾಯಚೂರಿನ ಸರ್ಕೀಟ್ ಹೌಸ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಗ್ರಾಮ ವಾಸ್ತವ್ಯವನ್ನು ಟೀಕಿಸಿ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಶಾಸಕ ಶಿವನಗೌಡ ನಾಯಕ್ ವಿರುದ್ಧ ಹರಿಹಾಯ್ದರು.
ಶಿವನಗೌಡ ಅವರ ಡ್ರಾಮಾ ಬಹಳ ದಿನ ನಡೆಯುವುದಿಲ್ಲ. ಅವರ ಪಾದಯಾತ್ರೆ ಕೇವಲ ಗಿಮಿಕ್ ಅಷ್ಟೇ. ನಾವು ಅವರಿಂದ ಪಾಠ ಕಲಿಯಬೇಕಿಲ್ಲ. ಈಗ ಪಾದಯಾತ್ರೆ ಮಾಡುವವರು ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಏಕೆ ಸುಮ್ಮನಿದ್ದರು ಎಂದು ವಾಗ್ದಾಳಿ ನಡೆಸಿದರು.
ಜಿಲ್ಲೆಯ 50 ಲಕ್ಷ ಜನರ ಸಮಸ್ಯೆಗಳನ್ನು ಹೊತ್ತು 50 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿರುವುದಾಗಿ ಶಿವನಗೌಡ ನಾಯಕ್ ತಿಳಿಸಿದ್ದರು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜೂನ್ 26ರಂದು ರಾಯಚೂರಿನ ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಅವರ ಗ್ರಾಮ ವಾಸ್ತವ್ಯದ ವಿರುದ್ಧ ಶಿವನಗೌಡ ಅವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ವಿರೋಧಿಸಲು ಶಿವನಗೌಡ ಅವರು ಕರೇಗುಡ್ಡಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.

ಏನು ಯುದ್ಧ ಮಾಡೋಕೆ ಬರ್ತಿದ್ದಾರಾ?
ಶಿವನಗೌಡ ನಾಯಕ್ ಅವರು ಜನರ ದಂಡು ಕಟ್ಟಿಕೊಂಡು ಹೊರಟಿದ್ದಾರಂತೆ. ಇವರೇನು ಯುದ್ಧ ಮಾಡೋಕೆ ಬರುತ್ತಿದ್ದಾರೆಯೇ? ಇಷ್ಟು ಕಾಲ ಸುಮ್ಮನಿದ್ದು ಈಗ ದೇವದುರ್ಗದ ಬಗ್ಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಅಧಿಕಾರದಲ್ಲಿ ಇವರು ಏನು ಮಾಡುತ್ತಿದ್ದರು? ಯಾರಿಗೋಸ್ಕರ ಈ ಪಾದಯಾತ್ರೆ? ಇವರ ಡ್ರಾಮಾ ಬಹಳ ದಿನ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇವರಿಂದ ಹೇಳಿಸಿಕೊಳ್ಳಬೇಕೇ?
ನಮ್ಮ ಕುಟುಂಬ ಮಾಡಿರುವ ಕೆಲಸಗಳು ಇವರಿಗೆ ಎಷ್ಟು ತಿಳಿದಿದೆ? ಆ ಕೆಲಸಗಳನ್ನು ನೋಡಲು ಆಗ ಅವರು ಹುಟ್ಟಿದ್ದರೇ? ಸೋಲು ಗೆಲುವುಗಳನ್ನು ನಮ್ಮ ಕುಟುಂಬ ಸಾಕಷ್ಟು ನೋಡಿದೆ. ನಮ್ಮ ಕುಟುಂಬ ಹೇಗೆ ಕೆಲಸ ಮಾಡಬೇಕೆಂದು ಇವರಿಂದ ಹೇಳಿಸಿಕೊಳ್ಳಬೇಕೇ? ಈ ಡ್ರಾಮಾಗಳನ್ನೆಲ್ಲ ಬಿಡಿ. ನಾಲಿಗೆ ಇದೆಯೆಂದು ಹೇಗೆ ಬೇಕೋ ಹಾಗೆ ಮಾತನಾಡಬಾರದು ಎಂದು ಕಿಡಿಕಾರಿದರು.

ಯಡಿಯೂರಪ್ಪ ಅವರನ್ನು ಖೆಡ್ಡಾಕ್ಕೆ ಕೆಡವಿದ್ದರು
ಶಿವನಗೌಡ ಅವರ ನಾಟಕಗಳೆಲ್ಲ ಗೊತ್ತು. ಯಡಿಯೂರಪ್ಪ ಅವರನ್ನು ಎಷ್ಟು ಸಲ ಬೈದಿದ್ದರು? ಕುಮಾರಸ್ವಾಮಿ ಅವರನ್ನು ಎಷ್ಟು ಸಲ ಹೊಗಳಿದ್ದರು. ಈಗ ಎಷ್ಟು ಕುಮಾರಸ್ವಾಮಿ ಅವರನ್ನು ಎಷ್ಟು ಬೈದರು ಎಲ್ಲವೂ ತಿಳಿದಿದೆ. ಯಡಿಯೂರಪ್ಪ ಅವರನ್ನು ದೇವದುರ್ಗಕ್ಕೆ ಕರೆಯಿಸಿ ಖೆಡ್ಡಾಕ್ಕೆ ಕೆಡವಿದ್ದರು. ಸುಮ್ಮನೆ ನಾಲಿಗೆ ಹರಿಬಿಡಬೇಡಿ ಎಂದು ಹೇಳಿದರು.

ಗ್ರಾಮ ವಾಸ್ತವ್ಯಕ್ಕಾಗಿ ಬಂದಿಲ್ಲ
ಜನಸಾಮಾನ್ಯ ಒಂದಿಡೀ ದಿನ ಕಳೆಯುತ್ತಿದ್ದೇನೆ. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇಲ್ಲಿ ಇದ್ದೇನೆ. ನಾನು ಗ್ರಾಮ ವಾಸ್ತವ್ಯಕ್ಕಾಗಿ ಬಂದಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಬಂದಿದ್ದೇನೆ. ಜಲಧಾರೆ ಮೂಲಕ ಸಮಗ್ರ ಜಿಲ್ಲೆಗೆ ಕುಡಿಯುವ ನೀರು ಪೂರೈಸಲು ಬದ್ಧನಾಗಿದ್ದೇನೆ. ಜಿಲ್ಲೆಗೆ ಮೂರು ಸಾವಿರ ಕೂಟಿ ರೂಪಾಯಿಗೂ ಅಧಿಕ ಅನುದಾನ ನೀಡಿದ್ದೇನೆ. ನಾನು 2-3 ಜಿಲ್ಲೆಗೆ ಸೀಮಿತವಾಗಿರುವ ಮುಖ್ಯಮಂತ್ರಿ ಅಲ್ಲ. ಶಿವಮೊಗ್ಗ ಜಿಲ್ಲೆಗೂ ನೀರಾವರಿಗೆ 500 ಕೋಟಿ ರೂ. ನೀಡಿದ್ದೇನೆ. ಸುಮ್ಮನೆ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ಕುರಿತು ಕಲಾಪದಲ್ಲಿ ಉತ್ತರ ಕೊಡುತ್ತೇನೆ ಎಂದರು.












Click it and Unblock the Notifications