ಗ್ರಾಮ ವಾಸ್ತವ್ಯ : ಪೊಲೀಸ್ ಅಧಿಕಾರಿಗಳ ಅಮಾನತು ವಾಪಸ್
ರಾಯಚೂರು, ಜುಲೈ 02 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಭದ್ರತಾ ವೈಫಲ್ಯ ಕಾರಣ ಎಂದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.
ಪೊಲೀಸ್ ಅಧಿಕಾರಿಗಳ ಅಮಾನತಿಗೆ ಭಾರಿ ವಿರೋಧ ವ್ಯಕ್ತವಾದ ಕಾರಣ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದೆ. ಯರಗೇರಾ ಠಾಣೆಯ ಸಿಪಿಐ ಆಗಿ ದತ್ತಾತ್ರೇಯ ಕರ್ನಾಡ್ ಮರು ನೇಮಕಗೊಂಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾನ್ವಿ ತಾಲೂಕಿನ ಕರೇಗುಡ್ಡಕ್ಕೆ ಸರ್ಕಾರಿ ಬಸ್ನಲ್ಲಿ ತೆರಳುವಾಗ ಯರಮರಸ್ ಬಳಿ ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಗಿತ್ತು. ವೈಟಿಪಿಎಸ್ ಕಾರ್ಮಿಕರು ಬಸ್ ತಡೆದಿದ್ದರು.

ಕಾರ್ಮಿಕರ ಪ್ರತಿಭಟನೆಗೆ ಭದ್ರತಾ ವೈಫಲ್ಯ ಕಾರಣ ಎಂದು ಆರೋಪಿಸಿ ಯರಗೇರಾ ಠಾಣೆಯ ಸಿಪಿಐ ಆಗಿ ದತ್ತಾತ್ರೇಯ ಕರ್ನಾಡ್ ಅವರನ್ನು ಅಮಾನತುಗೊಳಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.
ವಿವಿಧ ಸಂಘಟನೆಗಳು ಸಹ ಪೊಲೀಸರ ಅಮಾನತು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಆದ್ದರಿಂದ, ಅಮಾನತು ಆದೇಶ ವಾಪಸ್ ಪಡೆಯಲಾಗಿದ್ದು, ಯರಗೇರಾ ಠಾಣೆಗೆ ಮರು ನೇಮಿಸಿ ಆದೇಶ ಹೊರಡಿಸಲಾಗಿದೆ.
50 ಜನರ ವಿರುದ್ಧ ಪ್ರಕರಣ : ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ 50 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಟಿಐಸಿಐ ಅಧ್ಯಕ್ಷ ಆರ್.ಮಾನಸಯ್ಯ, ಕಾರ್ಯದರ್ಶಿ ಜಿ.ಅಮರೇಶ ಸೇರಿದಂತೆ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.












Click it and Unblock the Notifications