ತಿಮ್ಮಾಪುರ ಏತ ನೀರಾವರಿ ಯೋಜನೆ ಉದ್ಘಾಟನೆ: ಡಿಸೆಂಬರ್ 19ಕ್ಕೆ ಸಿಂಧನೂರಿಗೆ ಸಿಎಂ, ಡಿಸಿಎಂ ಭೇಟಿ!
ರಾಯಚೂರು ಡಿಸೆಂಬರ್ 15: ಸಿಂಧನೂರು ತಾಲೂಕಿನ ಮಹಾತ್ವಾಕಾಂಕ್ಷಿ ತಿಮ್ಮಾಪುರ ಏತ ನೀರಾವರಿ ಯೋಜನೆ ಉದ್ಘಾಟನೆ ಹಾಗೂ ಸಿಂಧನೂರಿನ ಸರಕಾರಿ ಮಹಾ ವಿದ್ಯಾಲಯದ 50 ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಡಿಸೆಂಬರ್ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸಲಿದ್ದಾರೆ.
40 ಸಾವಿರ ಎಕರೆ ಭೂಮಿಗೆ ನೀರುಣಿಸುವ ತಿಮ್ಮಾಪುರ ಏತ ನೀರಾವರಿ ಯೋಜನೆ ಉದ್ಘಾಟನೆಯ ಹಂತದಲ್ಲಿ ಇದೆ. ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಉದ್ಘಾಟನೆಗೆ ಸಜ್ಜುಗೊಳಿಸಬೇಕು. ಸರಕಾರಿ ಮಹಾ ವಿದ್ಯಾಲಯದ 50ನೇ ವರ್ಷದ ಸಂಭ್ರಮಾಚರಣೆ, ಜಲಧಾರೆ ಯೋಜನೆಗೆ ಚಾಲನೆ, ಟ್ರಾಫಿಕ್ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ, ನಾನಾ ಕಟ್ಟಡಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳು ನಡೆಯಲಿವೆ. ಗೃಹ ಮಂತ್ರಿ ಜಿ. ಪರಮೇಶ್ವರ್, ಸಚಿವರಾದ ಜಮೀರ್ ಅಹ್ಮದ್, ಸುಧಾಕರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ಅಧಿಕಾರಿಗಳು ತಂಡಗಳನ್ನು ರಚಿಸಿಕೊಂಡು ಸಮಿತಿಗಳನ್ನು ಮಾಡಿಕೊಳ್ಳಬೇಕು. ಕಾರ್ಯಕ್ರಮ ಕುರಿತಂತೆ ರೂಪುರೇಷೆ ಸಿದ್ಧಪಡಿಸಬೇಕು. ಸಚಿವರನ್ನು ಸ್ವಾಗತಿಸುವುದು ಸೇರಿದಂತೆ ನಿಯಮಾನುಸಾರ ಎಲ್ಲಾ ರೀತಿಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಬೇಕು. ಯಾರು ಎಲ್ಲಿರಬೇಕು? ಎಂಬುದನ್ನು ಮೊದಲೇ ನಿರ್ಧರಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. ಮೊದಲು ಸಿಂಧನೂರು ನಗರದಲ್ಲಿ ಕಾರ್ಯಕ್ರಮ ಮಾಡಿ ನಂತರ ಒಳ ಬಳ್ಳಾರಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು.
ಹೆಲಿಪ್ಯಾಡ್ಗಳನ್ನು ಎಲ್ಲೆಲ್ಲಿ ಮಾಡುವುದು ಸೂಕ್ತ ಎಂಬ ಕುರಿತಾಗಿಯೂ ಶಾಸಕರು ಪಿಡಬ್ಲ್ಯೂಡಿ ಎಇಇ ಚಂದ್ರಶೇಖರ ಪಾಟೀಲ್ ಜತೆ ಚರ್ಚಿಸಿದರು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದಾಗ ಹೆಲಿಪ್ಯಾಡ್ ಸಮಸ್ಯೆಯಿಂದಾಗಿ ಹೆಲಿಕಾಪ್ಟರ್ ಮಣ್ಣಿನಲ್ಲಿಯೇ ಸಿಕ್ಕಿ ಹಾಕಿಕೊಂಡಿತ್ತು.
ಈ ಬಾರಿ ಸೂಕ್ತ ಸ್ಥಳವನ್ನು ಹೆಲಿಪ್ಯಾಡ್ಗಾಗಿ ಆಯ್ಕೆ ಮಾಡಿರಿ ಎಂಬ ಅಭಿಪ್ರಾಯ ವ್ಯಕ್ತವಾಯಿತು. ನಗರದ ಕಾರ್ಯಕ್ರಮಕ್ಕೆ ಸರಕಾರಿ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ದೊಡ್ಡ ಮಟ್ಟದ ಮೆರವಣಿಗೆ ಮಾಡಲಾಗುವುದು. ಸರಕಾರಿ ಕಾಲೇಜಿನ ಸುವರ್ಣ ಸಂಭ್ರಮವಾಗಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಳ ಬಳ್ಳಾರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರನ್ನೂ ಆಹ್ವಾನಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಆದೇಶಿಸಿದರು.












Click it and Unblock the Notifications