ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ
ರಾಯಚೂರು, ಆಗಸ್ಟ್, 03: ಕಲಿಯುಗ ಕಾಮಧೇನು ಗುರು ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯ ಮಠದಲ್ಲಿ ಆಗಸ್ಟ್ 10 ರಿಂದ 16ರವರೆಗೆ ಸಪ್ತ ರತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವರ್ಷ ಅತ್ಯಂತ ವಿಜೃಂಭಣೆಯಿಂದ ಆರಾಧನಾ ಮಹೋತ್ಸವ ಜರುಗಲಿದೆ ಎಂದು ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥಶ್ರೀ ಪಾದಂಗಳವರು ಹೇಳಿದರು. ಸಪ್ತ ರಾತ್ರೋತ್ಸವ ಕಾರ್ಯಕ್ರಮದ ಮೊದಲ ದಿನವಾದ ಆಗಸ್ಟ್ 10 ರಂದು ಧ್ವಜಾರೋಹಣದೊಂದಿಗೆ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ಗೋಪೂಜೆ, ಗಜ ಪೂಜೆ, ಅಶ್ವಪೂಜೆ, ವಾಹನೋತ್ಸವ , ಧಾನ್ಯೋತ್ಸವ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.
ಆಗಸ್ಟ್ 11ರಂದು ಶಾಖೋತ್ಸವ , ರಜತ ಮಹೋತ್ಸವ ಜರುಗಲಿದೆ. ಆಗಸ್ಟ್ 12ರಂದು ಪೂರ್ವಾರಾಧನೆ ಅಂಗವಾಗಿ ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ಅಭಿಷೇಕ, ರಜತ ಸಿಂಹ ವಾಹನೋತ್ಸವ ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಯರ ಅನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಅಲ್ಲದೆ ಗ್ರಂಥಗಳ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಆಗಸ್ಟ್ 13ರಂದು ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ಮಹಾ ಅಭಿಷೇಕ ಜರುಗಲಿದೆ. ನಂತರ ತಿರುಮಲ ತಿರುಪತಿಯ ಶ್ರೀನಿವಾಸನ ಶೇಷವಸ್ತ್ರ ಸಮರ್ಪಣೆ ಮಾಡಲಾಗುತ್ತದೆ. ಜೊತೆಗೆ ಗಜ, ರಜತ, ಸ್ವರ್ಣ ರಥೋತ್ಸವ ನಡೆಯಲಿದೆ. ಆಗಸ್ಟ್ 14ರಂದು ಉತ್ತರಾಧನೆ ಅಂಗವಾಗಿ ಬೃಂದಾವನಕ್ಕೆ ಮಹಾ ಅಭಿಷೇಕ, ರಾಮದೇವರ ಪೂಜೆ, ಮಹಾ ಮಂಗಳಾರತಿ, ವಿಶೇಷ ಅಲಂಕಾರ ಜರುಗಲಿದೆ. ನಂತರ ವಸಂತೋತ್ಸವ ಮಹಾ ರಥೋತ್ಸವ ಕಾರ್ಯಕ್ರಮ ಜರುಗಲಿದೆ. ಈ ವರ್ಷವೂ ಸಹ ಹೆಲಿಕಾಪ್ಟರ್ ಮೂಲಕ ಮಹಾ ರಥೋತ್ಸವಕ್ಕೆ ಪುಷ್ಪವೃಷ್ಟಿಯಾಗಲಿದೆ ಎಂದು ಶ್ರೀಗಳು ಹೇಳಿದರು.
ರಾಯರ ಮಠದಲ್ಲಿ ಈ ವರ್ಷದ ವಿಶೇಷ
ರಾಯರ ಮೂಲ ಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ, ಸುವರ್ಣ ರಥದ ನವೀಕರಣ, ದಾಸ ಸಾಹಿತ್ಯ ಮ್ಯೂಸಿಯಂ, ಶ್ರೀ ಮಠದ ಮುಂಭಾಗದ ಆವರಣದಲ್ಲಿ ಹೊಸದಾಗಿ ನಿರ್ಮಿಸಿದ ಕಾರಿಡಾರ್ ಸೇರಿದಂತೆ ಇನ್ನಿತರ ಹಲವು ಹೊಸ ಯೋಜನೆಗಳನ್ನು ಮಾಡುತ್ತಿರುವುದು ಈ ವರ್ಷದ ವಿಶೇಷತೆಯಾಗಿದೆ. ಮಂತ್ರಾಲಯದ ಬೀದಿಗಳಲ್ಲಿ ಇದರ ಜೊತೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಂಗವಿಕಲರಿಗೆ ದರ್ಶನ ಪಡೆಯಲು ವ್ಯವಸ್ಥೆ
ಕೊರೊನಾ ಮಹಾಮಾರಿಯ ಉಪಟಳ ಕಡಿಮೆಯಾಗಿದೆ. ಆದರೂ ಭಕ್ತರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ತುಂಗಭದ್ರಾ ನದಿ ಪ್ರವಾಹ ಇಲ್ಲ. ಭಕ್ತರು ಯಾವುದೇ ಭಯ , ಭೀತಿ ಇಲ್ಲದೆ ರಾಯರ ಆರಾಧನಾ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಬೇಕು. ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೆ ವಸತಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರಿಗೆ, ಶೀಘ್ರ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸಹ ಸ್ಥಾಪಿಸಿ ತುರ್ತು ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ನದಿ ತೀರದಲ್ಲಿ ಬಾರಿಕೇಡ್ಗಳನ್ನು ಹಾಕಿ ಭಕ್ತರು ನದಿಗೆ ಇಳಿಯದಂತೆ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ನದಿ ತೀರದಲ್ಲಿ ಭಕ್ತರಿಗೆ ಸ್ನಾನಕ್ಕಾಗಿ 100 ಶವರ್ಗಳನ್ನು ಹಾಕಲಾಗಿದೆ ಎಂದರು.
ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳು
ಭಕ್ತರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳನ್ನು ಒದಗಿಸುವಂತೆ ಕರ್ನಾಟಕ, ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತನಾಡಿದ್ದೇವೆ. ಮಂತ್ರಾಲಯದಲ್ಲಿ ಖಾಸಗಿ ವಿಮಾನ ನಿಲ್ದಾಣ ಸೇರಿದಂತೆ ಸುಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ರಾಯಚೂರು ಹಾಗೂ ಕರ್ನೂಲ್ನಲ್ಲಿ ಸರ್ಕಾರಿ ವಿಮಾನ ನಿಲ್ದಾಣವಾಗಲಿದೆ. ಮಂತ್ರಾಲಯದಲ್ಲಿ ಸರ್ಕಾರದ ವತಿಯಿಂದ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಅಗತ್ಯ ಅದಕ್ಕೆ ಭೂಮಿ ನೀಡಲು ಮಠವು ಸಿದ್ಧವಿದೆ. ಬಂಡವಾಳ ಹೂಡುವವರು ಮುಂದೆ ಬರಬೇಕಿದೆ ಎಂದು ಹೇಳಿದರು.
ವಿದ್ಯುತ್ ಚಾಲಿತ ವಾಹನಗಳಿಗೆ ಅವಕಾಶ
ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಹಿನ್ನೆಲೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಮಾತ್ರ ಮಠದ ಮುಂಭಾಗದ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಐ.ಪಿ.ನರಸಿಂಹಮೂರ್ತಿ, ಶ್ರೀಪತಿ, ಶ್ರೀನಿಧಿ ಕರಣಂ, ಭೀಮಶೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.