ರಾಯಚೂರು: ಸಮೀಕ್ಷೆಯಲ್ಲಿ ಪಾಸ್ ಆದ್ರೇ ಮಾತ್ರ ವಿಧಾನಸಭೆ ಟಿಕೆಟ್?
ರಾಯಚೂರು ಜುಲೈ 16: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್, ಮತ್ಯಾರಿಗೆ ಗೇಟ್ ಪಾಸ್ ಎನ್ನುವುದು ಆಯಾ ಪಕ್ಷಗಳು ಕೈಗೊಳ್ಳುವ ತೀರ್ಮಾನ ಹಾಲಿ ಮತ್ತು ಮಾಜಿ ಶಾಸಕರ ಪಾಲಿಗೆ ಭಾರಿ ಆತಂಕವಾಗಿ ಮಾರ್ಪಟ್ಟಿದೆ. ರಾಜ್ಯ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜಾತ್ಯತೀತ ಜನತಾದಳ ಪಕ್ಷಗಳು ವಿಧಾನಸಭಾ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿವೆ. ರಾಜಕೀಯ ಚಟುವಟಿಕೆಯೊಂದಿಗೆ ಯಾರು ಅಭ್ಯರ್ಥಿ ಸ್ಥಾನಕ್ಕೆ ಅರ್ಹರು ಎನ್ನುವ ಸಮೀಕ್ಷೆ ಕಾರ್ಯವೂ ಮತ್ತೊಂದು ಕಡೆ ಕೈಗೊಂಡಿರುವುದು ಹಾಲಿ, ಮಾಜಿ ಶಾಸಕರ ಪಾಲಿಗೆ ಕಳವಳ ಹೆಚ್ಚುವಂತೆ ಮಾಡಿದೆ.
ಇಲ್ಲಿವರೆಗೂ ಜಾತಿ, ಧರ್ಮ, ಹಣದ ಮೂಲಕ ಟಿಕೆಟ್ ಪಡೆಯುವ ನಾಯಕರಿಗೆ ಈಗ ಈ ಮೂರು ಪ್ರಭಾವದೊಂದಿಗೆ ಆಯಾ ಪಕ್ಷಗಳು ಕೈಗೊಂಡ ಸಮೀಕ್ಷೆ ಕಾರ್ಯದಲ್ಲೂ ಉತ್ತೀರ್ಣರಾಗಬೇಕಾದಂತಹ ಷರತ್ತು ಎದುರಾಗಿದೆ. ಮುಂದಿನ ಚುನಾವಣೆಯಲ್ಲಿ ನಾವು ಉಳಿಯುತ್ತೇವೆಯೊ? ಅಥವಾ ಅಳಿಯುತ್ತೇವೆಯೊ? ಎನ್ನುವ ತಳಮಳ ಹೆಚ್ಚುವಂತೆ ಮಾಡಿದೆ.
ಆಡಳಿತರೂಢ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮೀಕ್ಷೆ ಕಾರ್ಯದಲ್ಲಿ ತೊಡಗಿವೆ. ಮುಂಬರುವ ಚುನಾವಣೆಯಲ್ಲಿ ಭಾರಿ ಪೈಪೋಟಿ ನೀಡುತ್ತಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಆಯಾ ಪಕ್ಷಗಳ ಸಮೀಕ್ಷೆಯೆ ಅಂತಿಮ ಎನ್ನುವ ರೀತಿಯಲ್ಲಿ ಹೈಕಮಾಂಡ್ ನಡಾವಳಿ ಹಾಲಿ, ಮಾಜಿ ಶಾಸಕರು ಹಾಗೂ ಆಕಾಂಕ್ಷಿಗಳಲ್ಲಿ ಭಾರಿ ಕಳವಳ ಮೂಡಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಈ ಬಾರಿ ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುವಂತೆ ಮಾಡಿದೆ. ಚುನಾವಣೆವರೆಗೆ ಒಟ್ಟು ಮೂರರಿಂದ ನಾಲ್ಕು ಸಲ ಸಮೀಕ್ಷೆ ಕಾರ್ಯ ನಡೆಯಲಿದೆ. ಈಗಾಗಲೇ ಎರಡು ಸಮೀಕ್ಷೆಗಳನ್ನು ಆಯಾ ಪಕ್ಷಗಳು ಪೂರ್ಣಗೊಳಿಸಿವೆ ಎಂಬ ಮಾಹಿತಿ ತಿಳಿದು ಬಂದಿದೆ.
ಜನಪ್ರಿಯತೆ ಕಳೆದುಕೊಂಡವರಿಗೆ ಟಿಕೆಟ್ ಕಟ್
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಹಾಲಿ, ಮಾಜಿ ಎನ್ನದೆ, ಯಾರು ಗೆಲ್ಲುತ್ತಾರೊ ಅವರಿಗೆ ಅವಕಾಶ ನೀಡಿ, ಜನಪ್ರಿಯತೆ ಕಳೆದುಕೊಂಡವರು ಶಾಸಕರಿರಲಿ, ಮಾಜಿ ಶಾಸಕರಿರಲಿ. ಟಿಕೆಟ್ ಕಟ್ ಮಾಡುವುದು ನಿಶ್ಚಿತವೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಶಾಸಕರು ಮತ್ತು ಮಾಜಿ ಶಾಸಕರು ಮುಂಬರುವ ಚುನಾವಣೆಯಲ್ಲಿ ತಾವು ಜನರ ಮಧ್ಯೆ ಇದ್ದೇವೆಂದು ಗುರುತಿಸಿಕೊಂಡು ಟಿಕೆಟ್ ಪಡೆಯಲು ಕ್ಷೇತ್ರಗಳಲ್ಲಿ ಓಡಾಟ ತೀವ್ರಗೊಳಿಸಿದ್ದಾರೆ.
ಟಿಕೆಟ್ ನಿರಾಕರಿಸಿದರೆ ಬಂಡಾಯಕ್ಕೂ ಸಿದ್ದತೆ
ಇನ್ನು ಈ ಸಮೀಕ್ಷೆ ಒಂದೆಡೆ ಅಭ್ಯರ್ಥಿಗಳ ತಳಮಳಕ್ಕೆ ಕಾರಣವಾಗಿದ್ದರೆ ಮತ್ತೊಂದು ಕಡೆ ಟಿಕೆಟ್ ನಿರಾಕರಿಸಿದರೆ, ಪಕ್ಷಕ್ಕೆ ಬಂಡಾಯದ ಬಿಸಿಯೂ ಹೆಚ್ಚುವ ಭಯ ಹೈಕಮಾಂಡ್ಗೆ ಸವಾಲಾಗಿದೆ. ಒಟ್ಟಾರೆಯಾಗಿ ರಾಜ್ಯದ ಎಲ್ಲಾ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಉದ್ದೇಶದಿಂದ ನಡೆಸುತ್ತಿರುವ ಸಮೀಕ್ಷೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರ ಪಾಲಿಗೆ ಉರುಳಾಗಿ ಪರಿಣಮಿಸಲಿದೆ ಎನ್ನುವುದು ಕುತೂಹಲಕಾರಿಯಾಗಿದೆ.












Click it and Unblock the Notifications