ರಾಯಚೂರು: ಪೂಜಾರಿಗಳು ದೇಹ ದಂಡಿಸಿ ಭಕ್ತಿ ಮೆರೆವ ವಿಶೇಷ ಜಾತ್ರೆ!
ರಾಯಚೂರು, ಜನವರಿ 16: ಸಂಕ್ರಾಂತಿಯ ಮರುದಿನ ರಾಯಚೂರು ಜಿಲ್ಲೆಯ ಗಿರಿಯಲ್ಲಿ ನಡೆಯೋ ತುಂಬಾ ಜಾತ್ರೆ ವಿಶಿಷ್ಟವಾದದ್ದು. ಮಳೆ-ಬೆಳೆಗಳ ಕುರಿತು ಕಾರಣಿಕ ನುಡಿಯೋ ಪೂಜಾರಿಗಳು ದೇಹ ದಂಡಿಸಿ ಭಕ್ತಿ ಮೆರೆಯುವುದು ವಿಚಿತ್ರ ಸಂಪ್ರದಾಯ.
ಮಾರ್ದನಿಸುತ್ತಿರೋ ಡೊಳ್ಳಿನ ನಾದ, ದೇಹ ದಂಡಿಸಿ ಭಕ್ತಿಯ ಪರಾಕಾಷ್ಟೆ ಮೆರೆಯುತ್ತಿರೋ ಪೂಜಾರಿಗಳು.. ಭೂಮಿ ತೂಕದ ಮಳೆ ಎಂದು ಭವಿಷ್ಯ ನುಡಿದಿದ್ದರಿಂದ ರೈತರಲ್ಲಿ ಆಶಾಭಾವ, ಹೌದು ಇಂಥದ್ದೊಂದು ವಿಚಿತ್ರ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ.
ಸುತ್ತೂರಲ್ಲಿ ಮನೆಮಾಡಿದ ಜಾತ್ರಾ ಸಂಭ್ರಮ!
ಸಂಕ್ರಾಂತಿಯ ಅಂಗವಾಗಿ ಶ್ರೀ ಮರಸಿ ಲಿಂಗೇಶ್ವರ ಜಾತ್ರೆ ನಡೆಯುತ್ತಿದೆ. ಮಸರಕಲ್ ಬಳಿಯ ಶ್ರೀಗಿರಿಯಲ್ಲಿ ವಿಶಿಷ್ಟ ಸಂಪ್ರದಾಯದ ಮೂಲಕ ಜಾತ್ರೆ ಆರಂಭವಾಯಿತು. ಮರಸಿ ಲಿಂಗೇಶ್ವರ ಪೂಜಾರಿಗಳು, ಗೆಜ್ಜೆಯ ಸರಪಳಿ, ಚಾಕೂವಿನಿಂದ ದೇಹ ದಂಡಿಸಿದರು. ಈ ಸಂಪ್ರದಾಯ ಹಲವು ತಲೆ ಮಾರುಗಳಿಂದ ನಡೆದುಕೊಂಡು ಬರುತ್ತಿದೆ. ದೇವರ ಪಲ್ಲಕ್ಕಿಯ ಮೆರವಣಿಗೆಯ ಬಳಿಕ ವಿಚಿತ್ರ ಆಚರಣೆ ಕಂಡು ಬರುತ್ತದೆ.
ಸಂಕ್ರಾಂತಿ ಹಾಗೂ ನೂಲ ಹುಣ್ಣಿಮೆಯಂತೆ ವರ್ಷಕ್ಕೆ ಎರಡೂ ಬಾರಿ ನಡೆಯೋ ಮರಸಿ ಲಿಂಗೇಶ್ವರ ಜಾತ್ರೆಯೂ ಬಹಳ ವಿಶೇಷತೆಯಿಂದ ಕೂಡಿದೆ. ಮರಳು ಮಿಶ್ರಿತ ಗುಡ್ಡಗಾಡು ಪ್ರದೇಶದಲ್ಲಿ ಉದ್ಭವಲಿಂಗ ಇರೋದರಿಂದ ಮರಸಿ ಲಿಂಗೇಶ್ವರ ಎಂಬುದು ನಂಬಿಕೆ. ಏಳೆಂಟು ತಲೆಮಾರಿನಿಂದ ದೇಹ ದಂಡನೆ ಹಾಗೂ ಮಳೆ-ಬೆಳೆಯ ಕುರಿತು ಭವಿಷ್ಯ ನುಡಿಯಲಾಗುತ್ತೆ.
ಮರಸಿ ಲಿಂಗೇಶ್ವರ ಪೂಜಾರಿಗಳು ನುಡಿಯೋ ಭವಿಷ್ಯ ನಿಜವಾಗುತ್ತೆ ಎಂಬುದು ಭಕ್ತರ ಬಲವಾದ ಅಭಿಪ್ರಾಯ. ಸಂಕ್ರಾಂತಿಯಲ್ಲಿ ಮುಂಗಾರು ಹಾಗೂ ನೂಲಹುಣ್ಣಿಮೆ ವೇಳೆ ಹಿಂಗಾರು ಹಂಗಾಮಿನ ಮಳೆ-ಬೆಳೆಗಳ ಸ್ಥಿತಿಗತಿಯನ್ನ ಹೇಳುತ್ತಾರೆ.
ಮಸರಕಲ್ ಸುತ್ತಮುತ್ತಲಿನ 66 ಹಳ್ಳಿಗಳ ಹಾಲುಮತ ಸಮಾಜದವರಿಗೆ ಶ್ರೀ ಮರಸಿ ಲಿಂಗೇಶ್ವರ ಆರಾಧ್ಯ ದೈವ. ಕಟ್ಟಿಗಿಕಾರ್, ಪಂಜಿನ ಪೂಜಾರಿ, ಹಿರೇಮೇಟಿ, ವಗ್ಗರು, ಬಾಕಲಿ ಸೇರಿದಂತೆ ಹಲವು ಮನೆತನದವರು ತಲಾ ತಲಾಂತರಿಂದ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಡೊಳ್ಳಿನ ನಾದಕ್ಕೆ ಕುಣಿಯುತ್ತ ದೇಹ ದಂಡನೆ ಮಾಡುವುದನ್ನ ನೋಡಲು ಭಕ್ತರು ನೆರೆದಿರುತ್ತಾರೆ.