ಜಂತರ್ ಮಂತರ್ ನಲ್ಲಿ ಮೋದಿ ವಿರುದ್ಧ ರಾಹುಲ್ ಗುಡುಗು!
Recommended Video

ನವದೆಹಲಿ, ಆಗಸ್ಟ್ 09: 'ದಲಿತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಯಾವ ಭಾವನೆ ಇದೆ? ಅವರು ಸಮಾಜದ ದುರ್ಬಲ ವರ್ಗವನ್ನು ಮತ್ತಷ್ಟು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ತೆಲಂಗಾಣ ಮೂಲದ ಮಹಾದಿಕಾ ಮೀಸಲು ವಿಕಾಸ ಸಮಿತಿ ಎಂಬ ಸಂಘಟನೆ ಇಂದು(ಆ.09) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅವರು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
"ಸಾಫ್ ನಿಯತ್, ಸಹಿ ವಿಕಾಸ್(ಉತ್ತಮ ಉದ್ದೇಶ, ಸರಿಯಾದ ಅಭಿವೃದ್ಧಿ) ಎಂಬುದು 2019 ರ ಚುನಾವಣೆಗೆ ಬಿಜೆಪಿಯ ಘೋಷವಾಕ್ಯ. ಯಾವುದೋ ಒಂದು ಉದ್ದೇಶಕ್ಕಾಗಿ ಅವರು ಕೆಲಸ ಮಾಡುವುದಾದರೆ, ಅವರ ಹೃದಯದಲ್ಲಿ ದಲಿತರ ಬಗ್ಗೆ ಯಾವ ಭಾವನೆ ಇದ್ದಂತಾಯಿತು?" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

"ತಮ್ಮ ಒಂದು ಪುಸ್ತಕದಲ್ಲಿ ಮೋದಿ ಬರೆದುಕೊಂಡಿದ್ದರು, 'ದಲಿತರು ಮನೆ ಸ್ವಚ್ಛ ಮಾಡಿದರೆ ಖುಷಿಯಾಗುತ್ತದೆ' ಎಂದು. ಎಸ್ ಸಿ ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ಕಾಂಗ್ರೆಸ್(ರಾಜೀವ್ ಗಾಂಧಿ) ನೀಡಿತ್ತು. ಆದರೆ ಇದೀಗ ಆ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುತ್ತಿದೆ. ಈ ಕಾಯ್ದೆ ತಿದ್ದುಪಡಿಯಾಗಲು ಕಾಂಗ್ರೆಸ್ ಬಿಡುವುದಿಲ್ಲ" ಎಂದು ರಾಹುಲ್ ಗಾಂಧಿ ಗುಡುಗಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸಿಪಿಐ(ಎಂ) ಮುಖಂಡ ಸೀತಾರಾಮ್ ಯಚೂರಿಯವರೂ ಇದ್ದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ಸಾಮಾಜಿಕವಾಗಿ ಹಿಂದುಳಿದಿದ್ದು, ಅವರ ಮೇಲೆ ನಿರಂತರ ಹಿಂಸೆ ನಡೆಯುತ್ತಿದೆ ಎಂಬುದನ್ನು ಮನಗಂಡಿದ್ದ 1989ರ ಸರ್ಕಾರ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ 1989 ಅನ್ನು ಜಾರಿಗೆ ತಂದಿತ್ತು. ಇದರನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯಾವುದೇ ವ್ಯಕ್ತಿ ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ದೂರು ನೀಡಿದ್ದೇ ಆದಲ್ಲಿ, ಆರೋಪಿಯನ್ನು ಯಾವುದೇ ವಿಚಾರಣೆಯಿಲ್ಲದೆ ಬಂಧಿಸಲಾಗುತ್ತಿತ್ತು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿತ ಸುಪ್ರೀಂ ಕೋರ್ಟ್ ಈ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅಂತೆಯೇ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗಿದ್ದು ಅದಕ್ಕಾಗಿ ವಿರೋಧ ವ್ಯಕ್ತವಾಗುತ್ತಿದೆ.












Click it and Unblock the Notifications