ಗಡ್ಕರಿ ಬಾಣ ಮೋದಿಯೆಡೆಗೆ... ಕಾಂಗ್ರೆಸ್ ಗೆ ಖುಷಿಯೋ ಖುಷಿ!
ಪುಣೆ, ಫೆಬ್ರವರಿ 12: ಇತ್ತೀಚೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲೇ ಅದಕ್ಕೆ ಪುಷ್ಠಿ ನೀಡುವ ಹೇಳಿಕೆಯೊಂದನ್ನು ಅವರು ನೀಡಿದ್ದಾರೆ.
ಇತ್ತೀಚೆಗೆ ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಗಡ್ಕರಿ, 'ನನಗೆ ಜಾತೀಯತೆಯ ಬಗ್ಗೆ ನಂಬಿಕೆ ಇಲ್ಲ. ನನಗೆ ನಿಮ್ಮ ಬಗ್ಗೆ ಗೊತ್ತಿಲ್ಲ, ಆದರೆ ನನ್ನ ಐದು ಜಿಲ್ಲೆಗಳಲ್ಲಿ ನಾನು ಎಲ್ಲರಿಗೂ ಎಚ್ಚರಿಕೆ ನೀಡಿದ್ದೇನೆ, ಯಾರಾದರೂ ಜಾತಿಯ ಬಗ್ಗೆ ಮಾತನಾಡಿದರೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ' ಎಂದಿದ್ದರು.

ಈ ಮಾತನ್ನು ನಿತಿನ್ ಗಡ್ಕರಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತೇ ಆಡಿದ್ದಾರೆ ಎಂದು ಟೀಕಿಸಿರುವ ಕಾಂಗ್ರೆಸ್, 'ಗಡ್ಕರಿ ಅವರು ಜಾತಿ-ಮತದ ಆಧಾರದ ಮೇಲೆ ರಾಜಕೀಯ ಮಾಡುವುದರ ವಿರುದ್ಧ ಮಾತನಾಡಿದ್ದಾರೆ. ಈ ಮೂಲಕ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಡ್ಕರಿ ಪರೋಕ್ಷವಾಗಿ ದೂರಿದ್ದಾರೆ' ಎಂದು ಕಾಂಗ್ರೆಸ್ ಹೇಳಿದೆ.
ಹನುಮಂತನ ಜಾತಿ ಯಾವುದು ಎಂದು ಪ್ರಶ್ನಿಸುವವರಿಗೂ ನೀವು ಎಚ್ಚರಿಕೆ ನೀಡಿ. ಹನುಮಂತನ ಜಾತಿಯನ್ನು ಪ್ರಶ್ನಿಸಿ ಮತಕೇಳುವುದು ಯಾವ ಆದರ್ಶ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇತ್ತೀಚೆಗೆ ನಿತಿನ್ ಗಡ್ಕರಿ ಅವರು ನರೇಂದ್ರ ಮೋದಿಗೆ ಪರ್ಯಾಯ ಎಂಬ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರು ನೀಡುವ ಹೇಳಿಕೆಗಳೆಲ್ಲವೂ ಪ್ರಧಾನಿ ನರೇಂದ್ರ ಮೋದಿಯನ್ನೇ ಗುರಿಯಾಗಿಸಿರುವಂಥವು ಎಂದು ಕಾಂಗ್ರೆಸ್ ಹೇಳುತ್ತಿದೆ. ಅದೂ ಅಲ್ಲದೆ, ಇತ್ತೀಚೆಗೆ ನಿತಿನ್ ಗಡ್ಕರಿ ಅವರನ್ನು ಕಾಂಗ್ರೆಸ್ ನಾಯಕರೂ ಹೊಗಳುವ ಮೂಲಕ ಅವರನ್ನು ಮೋದಿ ಅವರ ವಿರುದ್ಧ ಎತ್ತಿಕಟ್ಟುವ ಕೆಲಸವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಆರೋಪವೂ ಬಿಜೆಪಿ ವಲಯದಿಂದ ಕೇಳಿಬರುತ್ತಿದೆ.












Click it and Unblock the Notifications