ಎಫ್ ಟಿಐಐ: ಉಪವಾಸ ನಿರತ ಮತ್ತಿಬ್ಬರು ವಿದ್ಯಾರ್ಥಿಗಳು ಅಸ್ವಸ್ಥ
ಪುಣೆ, ಸೆಪ್ಟೆಂಬರ್, 15 : ಎಫ್ ಟಿಐಐ (ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ವಿದ್ಯಾರ್ಥಿಗಳು ಕೈಗೊಂಡ ಅನಿರ್ದಿಷ್ಟಾವಧಿ ಉಪವಾಸದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಎಫ್ ಟಿಐಐ ನಿರ್ದೇಶಕ ಗಜೇಂದ್ರ ಚೌಹಾಣ್ ರನ್ನು ವಜಾಗೊಳಿಸಬೇಕೆಂದು ಉಪವಾಸ ಕೈಗೊಂಡಿದ್ದರು.
ಎಫ್ ಟಿಐಐ ಸಂಸ್ಥೆಯ ಹಿಲಾಲ್ ಸವಾದ್, ಅಲೋಲ್ ಅರೋರ ಮತ್ತು ಹಿಮಾಂಶು ಶೇಖರ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ಸೆಪ್ಟೆಂಬರ್ 10 ರ ಗುರುವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಮಾಡುತ್ತಿದ್ದರು. ಇದರಲ್ಲಿ ಹಿಮಾಂಶು ಶೇಖರ್ ಅವರ ಉಪವಾಸ ಮುಂದುವರೆದಿದೆ.[ಎಫ್ ಟಿಐಐ ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಉಪವಾಸ]
ಅನಿರ್ದಿಷ್ಟಾವಧಿ ಉಪವಾಸದಲ್ಲಿ ಕೂತಿದ್ದ ವಿದ್ಯಾರ್ಥಿಗಳು ಅಸ್ವಸ್ಥರಾಗುತ್ತಿದ್ದಂತೆ ಧ್ವಾಜ್ ಭಟ್ನಾಗರ್ ಮತ್ತು ಶಶಿ ಎಂಬ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಉಪವಾಸ ನಡೆಸಲು ಮುಂದಾಗಿದ್ದು, ಈ ಉಪವಾಸ ನಿರಂತರವಾಗಿ ಹೀಗೆ ಮುಂದುವರೆಯಲಿದೆ ಎಂದು ಎಫ್ ಟಿಐಐ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಎಫ್ ಟಿಐಐ ನಿರ್ದೇಶಕ ಗಜೇಂದ್ರ ಚೌಹಾಣ್ ರನ್ನು ವಜಾಗೊಳಿಸಬೇಕೆಂದು ಮೂರು ತಿಂಗಳುಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಿಮಿತ್ತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಇವರ ಮನವಿಗೆ ಸ್ಪಂದಿಸಲು ಕೇಂದ್ರ ಸರ್ಕಾರ ತಡ ಮಾಡುತ್ತಿದೆ. ಹಾಗಾಗಿ ಎಫ್ ಟಿಐಐ ವಿದ್ಯಾರ್ಥಿಗಳು ಉಪವಾಸ ನಡೆಸುತ್ತಿದ್ದಾರೆ.