ಟೆಕ್ಕಿಗಳ ತುಮುಲಗಳನ್ನು ಬೆತ್ತಲೆ ಮಾಡಿದ ದುರಂತ ಸಾವು
ಪುಣೆ, ಜುಲೈ 13: 'ಐಟಿ ಕಂಪೆನಿಗಳಲ್ಲಿ ಉದ್ಯೋಗ ಭದ್ರತೆ ಇಲ್ಲ, ನನಗೆ ನನ್ನ ಕುಟುಂಬದ ಕುರಿತು ಭಯವಾಗುತ್ತಿದೆ...' ಎಂದು ಪತ್ರ ಬರೆದು, ತಾನು ವಾಸವಿದ್ದ ಹೊಟೇಲಿನ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಪುಣೆಯಲ್ಲಿ ಇಂದು (ಜು.13) ನಡೆದಿದೆ.
ಪುಣೆಯ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಗುರುಪ್ರಸಾದ್ (25 ) ಎಂಬ ಆಂಧ್ರ ಮೂಲದ ಟೆಕ್ಕಿ ಕಳೆದ ಕೆಲ ದಿನಗಳಿಂದ ಉದ್ಯೋಗದ ಅಭದ್ರತೆಯಿಂದ ಬಳಲುತ್ತಿದ್ದರು. ಅದೇ ಕಾರಣಕ್ಕಾಗಿಯೇ ಅವರು ಇಂಥ ಅವಸರದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಅವರೇ ಬರೆದ ಡೆತ್ ನೋಟ್ ಮೂಲಕ ತಿಳಿದುಬಂದಿದೆ.
ತಂದೆ-ತಾಯಿ, ಓರ್ವ ತಂಗಿಯನ್ನು ಬಿಟ್ಟು ಹೋಗಿರುವ ಗೋಪಾಲಕೃಷ್ಣ ಅವರ ನಡೆ, ಟೆಕ್ಕಿಗಳ ಅಭದ್ರ ಬದುಕಿನ ತುಮುಲಗಳನ್ನು ಬೆತ್ತಲೆ ಮಾಡಿರುವುದಂತೂ ಸತ್ಯ!
ಐಟಿ ಕ್ಷೇತ್ರಗಳಲ್ಲಿ ದುಡಿವ ಬಹುಪಾಲು ಜನರಿಗೆ ಒತ್ತಡ ಹೊಸತೇನಲ್ಲ. ಇತ್ತೀಚೆಗಂತೂ ಟೆಕ್ಕಿಗಳಿಗೆ ಎಲ್ಲಿಲ್ಲದ ಅಭದ್ರತೆ ಕಾಡುತ್ತಿದೆ. ಅದಕ್ಕೆ ಕಾರಣ ಅಮೆರಿಕದಲ್ಲಿ ಬದಲಾದ ಸರ್ಕಾರ! ಹೌದು, ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ನಂತರ ಬಿಗಿಗೊಂಡ H1B ವೀಸಾ ನಿಯಮಗಳು ಅಮೆರಿಕದಲ್ಲಿರುವ ಟೆಕ್ಕಿಗಳು ಮರಳು ಸ್ವದೇಶಕ್ಕೆ ಬರುವ ಚಿಂತನೆಯನ್ನು ಗಂಭಿರವಾಗಿ ಮಾಡುವಂತೆ ಮಾಡಿದೆ.
ಈ ಕಾರಣದಿಂದಾಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಹಲವು ಟೆಕ್ಕಿಗಳು ಭಾರತಕ್ಕೆ ವಾಪಸಾಗುತ್ತಿದ್ದಾರೆ. ವಿದೇಶದಿಂದ ಬಂದವರಿಗೆ ಮಣೆ ಹಾಕುವ ಸಲುವಾಗಿ, ಐಟಿ ಕಂಪೆನಿಗಳು ಇಲ್ಲಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ನಿರ್ಧಾರ ಮಾಡುತ್ತಿದೆ. ಈ ಕಾರಣದಿಂದಲೇ ಟೆಕ್ಕಿಗಳು ಅಭದ್ರತೆಯ ಭಾವ ಎದುರಿಸುತ್ತಿದ್ದಾರೆ.












Click it and Unblock the Notifications