ನನ್ನ ನಿವಾಸದಲ್ಲೇ ಇ.ಡಿ, ಸಿಬಿಐ ಕಚೇರಿ ತೆರೆಯಲಿ: ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್
ಪಾಟ್ನಾ, ಆಗಸ್ಟ್ 12: ನಾನು ಕೇಂದ್ರದ ಯಾವುದೇ ತನಿಖಾ ಸಂಸ್ಥೆಗಳಿಗೆ ಹೆದರುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ಮತ್ತು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಮ್ಮ ವಿರುದ್ಧ ರಾಜಕೀಯ ದ್ವೇಷಕ್ಕಾಗಿ ಬಳಸಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಜಾರಿ ನಿರ್ದೇಶನಾಲಯದ ಕ್ರಮದ ಬಗ್ಗೆ ಹೆದರಿಕೆ ಇಲ್ಲವೇ ಎಂಬು ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗಳನ್ನು ಸ್ಥಾಪಿಸಬಹುದು ಎಂದು ಹೇಳಿದ್ದಾರೆ. ಅವರಿಗೆ ಶಾಂತಿ ಸಿಗುವುದಾದದರೆ ನಮ್ಮ ಮನೆಯಿಂದಲೇ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.
"ಇದರಿಂದ ಕೂಡ ಅವರಿಗೆ ನೆಮ್ಮದಿ ಸಿಗಲಿಲ್ಲ ಎಂದರೆ ನಾನು ಮತ್ತೇನು ಮಾಡಲಾರೆ ಎಂದು" ತೇಜಸ್ವಿ ಯಾದವ್ ತಿಳಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡುವ ಭಯ ಇಲ್ಲ ಎಂದು ಅವರು ಹೇಳಿದ್ದಾರೆ.
ಬಿಹಾರದ ಮಾಜಿ ಸಿಎಂ, ತಮ್ಮ ತಾಯಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಬಿಹಾರ ಜನತೆಯ ಹಿತಾಸಕ್ತಿಗಾಗಿ ಕೇಂದ್ರದ ಜತೆ ಹೋರಾಟಕ್ಕೆ ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.

ರಾಜಕಾರಣಿಯಾಗಿ ಪ್ರಬುದ್ಧತೆ ಬಂದಿದೆ
ಉಪಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲೂ ಸಿಬಿಐ ಮತ್ತು ಇಡಿಗೆ ಹೆದರಿರಲಿಲ್ಲ ಎಂದಿರುವ ಯಾದವ್, 2015-17ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಿಂದಲೂ ರಾಜಕಾರಣಿಯಾಗಿ ಪ್ರಬುದ್ಧತೆ ಬಂದಿದೆ ಎಂದರು.
"ಅಂದಿನಿಂದ ನಾನು ಪ್ರಬುದ್ಧನಾಗಿದ್ದೇನೆ, ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸಿದ್ದೇನೆ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ತಂದೆ ಬರಲು ಆಗದ ವೇಳೆ ಪಕ್ಷದ ಪ್ರಚಾರವನ್ನು ಮುನ್ನಡೆಸಿದ್ದೇನೆ" ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಯಾದವ್ ಹೇಳಿದ್ದಾರೆ.

ತನಿಖಾ ಸಂಸ್ಥೆಗಳ ಮೇಲೆ ತೇಜಸ್ವಿ ಆರೋಪ
ಕೇಂದ್ರದ ತನಿಖಾ ಸಂಸ್ಥೆಗಳು ಬಿಜೆಪಿ ಪಕ್ಷದ ಸೆಲ್ಗಳಂತೆ ಕೆಲಸ ಮಾಡುತ್ತಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ. ತೇಜಸ್ವಿ ಯಾದವ್ ವಿರುದ್ಧ ಹಲವು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ.
ನಿತೀಶ್ ಕುಮಾರ್ ಅವರು 2017 ರಲ್ಲಿ ಮಹಾಘಟಬಂಧನ್ ಮೈತ್ರಿಯನ್ನು ಹಿಂತೆಗೆದುಕೊಳ್ಳುವಾಗ ಮತ್ತು ಬಿಜೆಪಿಯೊಂದಿಗೆ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ನಿತೀಶ್ ಕುಮಾರ್ ಕೂಡ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಇಡಿ ಅಥವಾ ಕೇಂದ್ರ ತನಿಖಾ ದಳಕ್ಕೆ ಹೆದರುವುದಿಲ್ಲ ಎಂದು ಹೇಳಿದ್ದರು.

ತಪ್ಪು ಮಾಡಿದ್ದರೆ ಯಾಕೆ ಕ್ರಮ ತೆಗೆದುಕೊಂಡಿಲ್ಲ
ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ದೇಶದ ರೈಲ್ವೆ ಸಚಿವರಾಗಿದ್ದಾಗ ಕಂಪನಿಯೊಂದರ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಲಾಲು ಯಾದವ್, ಅವರ ಪತ್ನಿ ರಾಬ್ರಿ ದೇವಿ, ತೇಜಸ್ವಿ ಯಾದವ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣಗಳನ್ನು ದಾಖಲಿಸಿದೆ.
ತೇಜಸ್ವಿ ಯಾದವ್ ಅವರು 2015 ಮತ್ತು 2017 ರ ನಡುವೆ ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದರು. ಅವರ ವಿರುದ್ಧದ ಹಣ ವರ್ಗಾವಣೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಯಾದವ್, "ನಾನು ಚಿಕ್ಕವನಿದ್ದಾಗ ನನ್ನ ಮೇಲೆ ಪ್ರಕರಣ ದಾಖಲಾಗಿದೆ. ನನ್ನ ಕ್ರಿಕೆಟ್ ಆಟದ ಕುರಿತಂತೆ ಆ ಪ್ರಕರಣ ದಾಖಲಾಗಿರುವುದು. ನಾನು ತಪ್ಪು ಮಾಡಿದ್ದರೆ ಇನ್ನು ಯಾಕೆ ಕ್ರಮ ಕೈಗೊಂಡಿಲ್ಲ?" ಎಂದು ಪ್ರಶ್ನೆ ಮಾಡಿದ್ದಾರೆ.

ಇದು ಪೂರ್ವ ಯೋಜಿತ ಮೈತ್ರಿಯಲ್ಲ
ಕ್ಷಿಪ್ರವಾಗಿ ರಾಜಕೀಯ ಬದಲಾವಣೆ, ಮೈತ್ರಿ ಸರ್ಕಾರ ರಚನೆ ಕುರಿತಂತೆ ಕೇಳಿದ ಪ್ರಶ್ನೆಗೆ, ಇದು ಸ್ವಾಭಾವಿಕ ಮೈತ್ರಿ, ಯಾವುದೇ ಪೂರ್ವ ಯೋಜಿತ ಕ್ರಮವಲ್ಲ ಎಂದು ಹೇಳಿದರು. ಆದರೆ, ಉಭಯ ಪಕ್ಷಗಳ ಶಾಸಕರು ಭೇಟಿಯಾಗಿದ್ದು, ರಾಜಕೀಯ ಬೆಳವಣಿಗೆಗಳನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಒಪ್ಪಿಕೊಂಡರು. ನಿತೀಶ್ ಕುಮಾರ್ ರಾಜೀನಾಮೆ ನೀಡಿ ನಮ್ಮ ಶಾಸಕರಿಗೆ ಮನವರಿಕೆ ಮಾಡಿದ್ದಾರೆ ಎಂದು ಅವರು ಹೇಳಿದರು.
2024ರಲ್ಲಿ ದೇಶವನ್ನು ಮುನ್ನಡೆಸಲು ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಾಗಲು ಅರ್ಹರಾಗಿದ್ದಾರೆ ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ. "ಅವರಿಗೆ ಆಡಳಿತಾತ್ಮಕ ಅನುಭವವಿದೆ, ನರೇಂದ್ರ ಮೋದಿಗೆ ಸಾಧ್ಯವಾದರೆ, ನಿತೀಶ್ ಕುಮಾರ್ ಏಕೆ ಆಗಬಾರದು? ಯಾರು ಬೇಕಾದರೂ ಪ್ರಧಾನಿಯಾಗಬಹುದು," ಎಂದು ಹೇಳಿದ್ದಾರೆ.












Click it and Unblock the Notifications