ಬಿಹಾರದ 37ನೇ ಸಿಎಂ ಪದಗ್ರಹಣಕ್ಕೆ ಹಾಜರಾಗಲ್ಲ ಆರ್ ಜೆಡಿ!
ಪಾಟ್ನಾ, ನವೆಂಬರ್.16: ಬಿಹಾರದ 37ನೇ ಮುಖ್ಯಮಂತ್ರಿ ಆಗಿ 69 ವರ್ಷದ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸೋಮವಾರ ಪಾಟ್ನಾದದಲ್ಲಿ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಿಂದ ದೂರ ಉಳಿಯುವುದಕ್ಕೆ ರಾಷ್ಟ್ರೀಯ ಜನತಾ ದಳವು ತೀರ್ಮಾನಿಸಿದೆ.
ಜನರ ಆದೇಶವನ್ನು ಸರ್ಕಾರದ ಆದೇಶವಾಗಿ ಪರಿವರ್ತಿಸಲಾಗಿದೆ. ಈ ಹಿನ್ನೆಲೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) ಆಯ್ಕೆ ಮಾಡಿರುವ ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ಆರ್ ಜೆಡಿ ನಿರ್ಧರಿಸಿದೆ.
ರಾಜ್ಯದ ರೈತರು, ಕಾರ್ಮಿಕರು, ಗುತ್ತಿಗೆ ನೌಕರರು, ಶಿಕ್ಷಕರ ಮತ್ತು ಸಾರ್ವಜನಿಕರು ಏನಾಗುತ್ತದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಎನ್ ಡಿಎ ಮೈತ್ರಿಕೂಟವು ಸಾರ್ವಜನಿಕರನ್ನು ವಂಚಿಸಿದ್ದಾರೆ. ಆದರೆ ಸಾರ್ವಜನಿಕರ ಪ್ರತಿನಿಧಿಗಳು ಎನಿಸಿರುವ ನಾವು ಸದಾ ಅವರೊಂದಿಗೆ ಇರುತ್ತೇವೆ ಎಂದು ಆರ್ ಜೆಡಿ ಟ್ವೀಟ್ ಮಾಡಿದೆ.

ಇಬ್ಬರು ಅಸಹಾಯಕರು ರಚಿಸಿದ ಸರ್ಕಾರ:
ಬಿಹಾರದಲ್ಲಿ ಎರಡು ಅಸಹಾಯಕ ಪಕ್ಷಗಳು ಒಟ್ಟಾಗಿ ಸರ್ಕಾರವನ್ನು ರಚಿಸಲು ಹೊರಟಿವೆ ಎಂದು ಆರ್ ಜೆಡಿ ಟೀಕಿಸಿದೆ. ಒಂದು ಅಸಹಾಯಕ ಪಕ್ಷವು ದುರ್ಬಲ ಮತ್ತು ಭ್ರಷ್ಟಾಚಾರದಿಂದ ಕೂಡಿದ್ದರೆ ಮತ್ತೊಂದು ಪಕ್ಷವು ಮುಖ ತೋರಲಾಗದ ಸ್ಥಿತಿಯಲ್ಲಿತ್ತು. ಇಂಥ ಎರಡು ಅಸಹಾಯಕ ಪಕ್ಷಗಳು ಕೂಡಿಕೊಂಡು ಸರ್ಕಾರವನ್ನು ರಚಿಸಿವೆ ಎಂದು ಆರ್ ಜೆಡಿ ದೂಷಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಅಂಚೆ ಮತಗಳ ಎಣಿಕೆ ಸಂದರ್ಭದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಈ ಮೊದಲು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಆರೋಪಿಸಿದ್ದರು. 900ಕ್ಕೂ ಹೆಚ್ಚು ಅಂಚೆ ಮತಗಳನ್ನು ಅಸಿಂಧುಗೊಫಳಿಸಲಾಗಿದ್ದು, ಅಂಚೆ ಮತಗಳ ಮರುಎಣಿಕೆಗೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಹಿಲ್ಸಾ ಕ್ಷೇತ್ರದಲ್ಲಿ ಅಂಚೆ ಮತಗಳ ಮರುಎಣಿಕೆಗೆ ಬಿಹಾರ ಚುನಾವಣಾ ಆಯೋಗವು ತೀರ್ಮಾನಿಸಿತ್ತು.
ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತ:
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.












Click it and Unblock the Notifications