ಪೊಲೀಸ್ ಅಧಿಕಾರಿ ಹತ್ಯೆಯ ಆಘಾತದಿಂದ ವೃದ್ಧ ತಾಯಿ ಸಾವು: ಒಟ್ಟಿಗೇ ಅಂತ್ಯಸಂಸ್ಕಾರ
ಪಟ್ನಾ, ಏಪ್ರಿಲ್ 12: ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿನ ಹಳ್ಳಿಯೊಂದರಲ್ಲಿ ಗ್ರಾಮಸ್ಥರಿಂದ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ಬಿಹಾರದ ಪೊಲೀಸ್ ಅಧಿಕಾರಿಯ ವೃದ್ಧ ತಾಯಿ ಭಾನುವಾರ ಆಘಾತದಿಂದ ನಿಧನರಾಗಿದ್ದಾರೆ. ಇಬ್ಬರ ಮೃತದೇಹಗಳನ್ನೂ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿನ ಅವರ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಕಿಶನ್ಗಂಜ್ ಪೊಲೀಸ್ ಠಾಣೆಯ ಎಸ್ಎಚ್ಒ ಆಗಿದ್ದ ಅಶ್ವಿನಿ ಕುಮಾರ್ ಅವರು ಉತ್ತರ ದಿನಾಜ್ಪುರದ ಗ್ರಾಮವೊಂದರಲ್ಲಿ ಕಳವು ಪ್ರಕರಣದ ಆರೋಪಿಯ ಪತ್ತೆಗಾಗಿ ದಾಳಿ ನಡೆಸಲು ತೆರಳಿದ್ದಾಗ ಏ. 10ರಂದು ಸ್ಥಳೀಯರು ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಮಗನ ಸಾವಿನಿಂದ ಆಘಾತಕ್ಕೆ ಒಳಗಾದ ಅವರ ತಾಯಿ, ಆ ನೋವು ಸಹಿಸಲಾಗದೆ ಕೊನೆಯುಸಿರೆಳೆದಿದ್ದಾರೆ.
ಮೋಟಾರ್ ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಅಶ್ವಿನಿ ಕುಮಾರ್ ಅವರೊಂದಿಗೆ ಇನ್ನೂ ಏಳು ಮಂದಿ ಪೊಲೀಸರು ತೆರಳಿದ್ದರು. ಗ್ರಾಮಸ್ಥರು ದಾಳಿ ನಡೆಸಿದಾಗ ಅವರು ಅಶ್ವಿನಿ ಕುಮಾರ್ ಅವರನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದರು. ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಗಾಳದ ಪಾಂಜಿಪರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನೆರೆಯ ಗ್ರಾಮಕ್ಕೆ ಆರೋಪಿಯ ಪತ್ತೆಗಾಗಿ ದಾಳಿ ನಡೆಸಲು ಅಶ್ವಿನಿ ಕುಮಾರ್ ತೆರಳಿದ್ದರು. ಅಲ್ಲಿಂದ ಗೋಲ್ಪೊಖರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂತಪದಾ ಗ್ರಾಮದಲ್ಲಿ ಮಧ್ಯರಾತ್ರಿ ದಾಳಿಗೆ ಮುಂದಾಗಿದ್ದಾಗ ಗ್ರಾಮಸ್ಥರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪಾಂಜಿಪರಾ ಔಟ್ಪೋಸ್ಟ್ನ ಪೊಲೀಸ್ ಸಿಬ್ಬಂದಿ ತಂಡ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅವರು ಕರೆತರುವಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.












Click it and Unblock the Notifications