ವಿದೇಶಕ್ಕೆ ಹೋಗಿ ಗೋಮಾಂಸ ತಿನ್ನಲು ಕಲಿಯುತ್ತಾರೆ: ಕೇಂದ್ರ ಸಚಿವರ ವಿವಾದ
ಬೇಗುಸರಾಯ್, ಜನವರಿ 2: ವಿದೇಶಕ್ಕೆ ತೆರಳುವ ಭಾರತದ ಮಕ್ಕಳಲ್ಲಿ ಹೆಚ್ಚಿನವರು ಗೋಮಾಂಸ ಭಕ್ಷಣೆಯನ್ನು ಶುರುಮಾಡುತ್ತಾರೆ. ಏಕೆಂದರೆ ಅವರಿಗೆ ನಮ್ಮ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಬಗ್ಗೆ ಕಲಿಸುತ್ತಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.
ಬಿಹಾರದ ಬೇಗುಸರಾಯ್ನಲ್ಲಿ ಬುಧವಾರ ಶ್ರೀಮದ್ ಭಗವದ್ ಕಥಾ ಜ್ಞಾಪನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಿವಾದಾತ್ಮಕ ಹೇಳಿಕೆ ನೀಡಿದರು.
'ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸಿಕೊಡಬೇಕು. ನಾವು ನಮ್ಮ ಮಕ್ಕಳನ್ನು ಮಿಷನರಿ ಶಾಲೆಗಳಿಗೆ ಕಳಿಸುತ್ತಿದ್ದೇವೆ. ಅವರಲ್ಲಿ ಹೆಚ್ಚಿನವರು ಐಐಟಿಯಲ್ಲಿ ಓದಿ ನಂತರ ಎಂಜಿನಿಯರ್ಗಳಾಗುತ್ತಾರೆ. ವಿದೇಶಕ್ಕೆ ಹೋಗುತ್ತಾರೆ. ಅವರಲ್ಲಿ ಹೆಚ್ಚಿನವರು ಗೋಮಾಂಸ ತಿನ್ನುತ್ತಾರೆ. ಏಕೆ? ಏಕೆಂದರೆ ಅವರಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸಿಲ್ಲ. ನಂತರ ಅವರ ಪೋಷಕರು ತಮ್ಮ ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸುತ್ತಾರೆ' ಎಂಬುದಾಗಿ ಗಿರಿರಾಜ್ ಸಿಂಗ್ ಹೇಳಿದರು.

ಶಾಲೆಗಳಲ್ಲಿ ಭಗವದ್ಗೀತೆ ಭೋದನೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಗಿರಿರಾಜ್ ಸಿಂಗ್ ಪ್ರತಿಪಾದಿಸಿದರು.
'ಹೀಗಾಗಿ ಶಾಲೆಗಳಲ್ಲಿ ಭಗವದ್ಗೀತಾದ ಶ್ಲೋಕಗಳನ್ನು ಪಾಠವಾಗಿ ಕಲಿಸಿಕೊಡಬೇಕು. ಸಮೀಕ್ಷೆಯೊಂದರ ಪ್ರಕಾರ, ಸುಮಾರು 100 ಮನೆಗಳಲ್ಲಿ 15 ಮನೆಗಳಲ್ಲಿ ಮಾತ್ರ ಹನುಮಾನ್ ಚಾಲೀಸ, ಭಗವದ್ಗೀತೆ ಮತ್ತು ರಾಮಾಯಣದ ಪುಸ್ತಕಗಳು ಇರುವುದು ಕಂಡುಬಂದಿದೆ. ಹೀಗಾಗಿ ನಾವು ಮಕ್ಕಳ ಮೇಲೆ ಆಪಾದನೆ ಹೊರಿಸುವುದರಲ್ಲಿ ಅರ್ಥವಿಲ್ಲ' ಎಂದರು.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಸಂಸ್ಕೃತಿ ಉಳಿದರೆ ಮಾತ್ರ ಭಾರತ ಉಳಿಯಲು ಸಾಧ್ಯ ಎಂದು ಹೇಳಿದರು.












Click it and Unblock the Notifications