ಮೈತ್ರಿಯಿಲ್ಲದೇ ನಿತೀಶ್ ಕುಮಾರ್ ಆಟ ನಡೆಯಲ್ಲ ಎಂದ ತೇಜಸ್ವಿ ಯಾದವ್
ಪಾಟ್ನಾ, ಸಪ್ಟೆಂಬರ್.08: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಿದ್ದಲ್ಲಿ ಎರಡಂಕಿ ಸ್ಥಾನಗಳನ್ನೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ಮುಖಂಡ ತೇಜಸ್ವಿ ಯಾದವ್ ಭವಿಷ್ಯ ನುಡಿದಿದ್ದಾರೆ.
ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಆರ್ ಜೆಡಿ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ತೇಜಸ್ವಿ ಯಾದವ್ ವಿವರಿಸಿದ್ದಾರೆ.
'' ಸಿಎಂ ನಿತೀಶ್ ವರ್ಚುಯಲ್ ಪ್ರಚಾರ, ಸೂಪರ್ ಡೂಪರ್ ಫ್ಲಾಪ್''
ಮೊದಲ ಬಾರಿಗೆ 1995ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಪಕ್ಷವು ಏಳು ಸ್ಥಾನಗಳನ್ನು ಗೆದ್ದುಕೊಂಡಿತ್ತು. 2014ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನಷ್ಟೇ ಗೆಲ್ಲುವುದಕ್ಕೆ ಸಾಧ್ಯವಾಯಿತು ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಸವಾಲು:
ಒಂದು ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಒಬ್ಬಂಟಿಯಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇ ಆದಲ್ಲಿ ಜೀವನದುದ್ದಕ್ಕೂ ಅವರ ಪಕ್ಷವು ಎರಡು ಅಂಕಿಗಳಷ್ಟು ಸ್ಥಾನಗಳನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಇದು ನನ್ನ ಸವಾಲು ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
ಸಮಸ್ಯೆಗಳನ್ನು ಮರೆ ಮಾಚುವುದಕ್ಕೆ ಬಿಡುವುದಿಲ್ಲ:
ಬಿಹಾರದಲ್ಲಿ ವಲಸೆ ಕಾರ್ಮಿಕರು ಮತ್ತು ಕೊರೊನಾವೈರಸ್ ಸೋಂಕಿನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನ್ಯಾಯ ಕೇಳುತ್ತಿರುವ ಮಾತ್ರಕ್ಕೆ ನಿಜವಾದ ಸಮಸ್ಯೆಗಳನ್ನು ಮರೆತಿದ್ದೇವೆ ಎಂದು ಅರ್ಥವಲ್ಲ. ನಾವು ಯಾವುದನ್ನೂ ಮರೆತಿಲ್ಲ, ನೀವು ಆ ಸಮಸ್ಯೆಗಳನ್ನು ಮರೆ ಮಾಚುವುದಕ್ಕೂ ಬಿಡುವುದಿಲ್ಲ ಎಂದು ತೇಜಸ್ವಿ ಯಾದವ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.