ಬಿಹಾರ ಸಂಪುಟ ವಿಸ್ತರಣೆ: ಆರ್ಜೆಡಿಗೆ 16, ಜೆಡಿಯುಗೆ 11 ಸಚಿವ ಸ್ಥಾನ
ಪಾಟ್ನಾ, ಆಗಸ್ಟ್ 16: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಕೈ ಜೋಡಿಸಿ ಹೊಸ ಸರ್ಕಾರ ರಚಿಸಿದ್ದು ಆಗಿದೆ. ಇದೀಗ ಆಗಸ್ಟ್ 16ರ ಮಂಗಳವಾರ ಬೆಳಗ್ಗೆ 11:30ಕ್ಕೆ ನಡೆಯಲಿರುವ ರಾಜ್ಯ ಸಂಪುಟ ವಿಸ್ತರಣೆಯ ಮೇಲೆ ಎಲ್ಲರ ಲಕ್ಷ್ಯ ನೆಟ್ಟಿದೆ.
ಜನತಾ ದಳ (ಯುನೈಟೆಡ್) ಆಗಸ್ಟ್ 9ರಂದು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುವುದಕ್ಕೆ ಸರ್ವಾನುಮತದಿಂದ ನಿರ್ಧರಿಸಿತು. ನಿತೀಶ್ ಕುಮಾರ್ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ದ ಜೊತೆಗೆ ಕೈ ಜೋಡಿಸುವುದಾಗಿ ಘೋಷಿಸಿತು.
Breaking: 10 ಲಕ್ಷ ಉದ್ಯೋಗ, 20 ಲಕ್ಷ ಉದ್ಯೋಗವಕಾಶ: ಬಿಹಾರ ಸಿಎಂ ಘೋಷಣೆ
ಮರುದಿನವೇ ಅಂದರೆ ಆಗಸ್ಟ್ 10ರಂದು ರಾಜಭವನದಲ್ಲಿ ಯಾವುದೇ ಅಲಂಕಾರಗಳಿಲ್ಲದ ಸರಳ ಸಮಾರಂಭದಲ್ಲಿ ಎಂಟನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪದಗ್ರಹಣ ಮಾಡಿದರು. ಇದೀಗ ಸಚಿವ ಸ್ಥಾನಗಳ ಹಂಚಿಕೆಗೆ ಯಾವ ಲೆಕ್ಕಾಚಾರ ನಡೆಯುತ್ತಿದೆ ಎಂಬುದರ ಕುರಿತು ಚರ್ಚಿಸಲಾಗುತ್ತಿದೆ.
ಆರ್ಜೆಡಿ ಬತ್ತಳಿಕೆಗೆ ಉತ್ತಮ ಖಾತೆ
ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿರುವ ನಿತೀಶ್ ಕುಮಾರ್ ಎಲ್ಲಾ ಪ್ರಮುಖ ಗೃಹ ಖಾತೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಆರ್ಜೆಡಿ ಹೆಚ್ಚಿನ ಇಲಾಖೆಗಳನ್ನು ಪಡೆಯಬಹುದು ಎಂಬ ನಿರೀಕ್ಷೆಯಿದೆ. ಬಿಹಾರ ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಆರ್ಜೆಡಿ 16 ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದ್ದು, ಜೆಡಿಯು 11 ಸ್ಥಾನಗಳನ್ನು ಉಳಿಸಿಕೊಳ್ಳಬಹುದು.
ಇನ್ನು ಜಿತನ್ ರಾಮ್ ಮಾಂಝಿ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ) ಒಂದು ಸಚಿವ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಮಹಾಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ಗೆ ಎರಡು ಕ್ಯಾಬಿನೆಟ್ ಸ್ಥಾನಗಳು ದೊರೆಯುವ ಸಾಧ್ಯತೆಯಿದೆ. ಒಬ್ಬ ಸ್ವತಂತ್ರ ಶಾಸಕ ಸೇರಿದಂತೆ ಒಟ್ಟು 31 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಹಿಂದಿನ ನಿತೀಶ್ ಕುಮಾರ್ ನೇತೃತ್ವದ ಸಂಪುಟದಲ್ಲೂ ಜಮುಯಿ ಜಿಲ್ಲೆಯ ಚಕೈಯಿಂದ ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು.
ಜೆಡಿಯು ಪಕ್ಷದ ಸಂಭಾವ್ಯರ ಪಟ್ಟಿ ಹೀಗಿದೆ
ಬಿಹಾರದ ಹೊಸ ಸಂಪುಟದಲ್ಲಿ ಜೆಡಿಯುನಿಂದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಬಿಜೇಂದ್ರ ಪ್ರಸಾದ್ ಯಾದವ್, ವಿಜಯ್ ಚೌಧರಿ, ಶ್ರವಣ್ ಕುಮಾರ್, ಅಶೋಕ್ ಚೌಧರಿ, ಮದನ್ ಸಾಹ್ನಿ, ಸಂಜಯ್ ಕುಮಾರ್ ಝಾ, ಜಮಾ ಖಾನ್, ಸುಮಿತ್ ಕುಮಾರ್ ಸಿಂಗ್, ಲೇಶಿ ಸಿಂಗ್ ಸೇರಿದಂತೆ ಕೆಲವರಿದ್ದಾರೆ.
ಆರ್ಜೆಡಿ ಸಂಭಾವ್ಯರ ಪಟ್ಟಿಯಲ್ಲಿ ಯಾರಿಗೆ ಸ್ಥಾನ?
ತೇಜ್ ಪ್ರತಾಪ್ ಯಾದವ್, ಸುರೇಂದ್ರ ಯಾದವ್, ಶಶಿಭೂಷಣ್ ಸಿಂಗ್, ಭೂದೇವ್ ಚೌಧರಿ, ಅನಿತಾ ದೇವಿ, ಕುಮಾರ್ ಸರ್ವಜೀತ್, ಅಲೋಕ್ ಮೆಹ್ತಾ, ಶಹನವಾಜ್ ಆಲಂ, ಸುಧಾಕರ್ ಸಿಂಗ್, ಮತ್ತು ಸಮೀರ್ ಮಹಾಸೇತ್ ಸೇರಿದಂತೆ ಕೆಲವು ಆರ್ಜೆಡಿ ಸಚಿವ ಸ್ಥಾನದ ಸಂಭಾವ್ಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ನಿಂದ ಶಕೀಲ್ ಅಹ್ಮದ್ ಮತ್ತು ರಾಜೇಶ್ ಕುಮಾರ್ ಸಚಿವ ಸ್ಥಾನದ ಫೇವರಿಟ್ ಆಗಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹಿರಿಯ ಪುತ್ರ ಸಂತೋಷ್ ಸುಮನ್ ಮಾಂಝಿ ಕೂಡ ಮಂಗಳವಾರ ಸಂಪುಟಕ್ಕೆ ಸೇರ್ಪಡೆ ಆಗುವ ಸಾಧ್ಯತೆಯಿದೆ.
ಆರ್ಜೆಡಿ ಕೋಟಾದಿಂದ ಕ್ಯಾಬಿನೆಟ್ನಲ್ಲಿ ಯಾದವ್ ಪ್ರಾಬಲ್ಯವಿರುವ ಸಾಧ್ಯತೆಯಿದೆ. ಅದಾಗ್ಯೂ, ಪಕ್ಷವು ಯಾದವೇತರ ಇತರ ಹಿಂದುಳಿದ ವರ್ಗ (ಒಬಿಸಿ) ನಾಯಕರು ಮತ್ತು ದಲಿತರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತಿದೆ.
ಬಿಜೆಪಿಗೆ ಬಾಯ್ ಬಾಯ್ ಎಂದಿರುವ ನಿತೀಶ್ ಕುಮಾರ್
2013ರಲ್ಲಿ ನರೇಂದ್ರ ಮೋದಿ ಅವರು ಸಮ್ಮಿಶ್ರ ಸರ್ಕಾರದ ಪ್ರಧಾನಿ ಅಭ್ಯರ್ಥಿಯಾದ ನಂತರ ಸಿಎಂ ನಿತೀಶ್ ಕುಮಾರ್ ಮೊದಲ ಬಾರಿಗೆ ಎನ್ಡಿಎ ತೊರೆದಿದ್ದರು. 2017 ರಲ್ಲಿ ಮತ್ತೆ ಆರ್ಜೆಡಿ-ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತೊರೆದು ಮತ್ತೆ ಎನ್ಡಿಎ ಪಾಳಯಕ್ಕೆ ಕಾಲಿಟ್ಟರು.
ಮಾಜಿ ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ಆರ್ಸಿಪಿ ಸಿಂಗ್ ಕೇಸರಿ ಪಾಳಯದೊಂದಿಗೆ ಶಾಮೀಲಾಗಿದ್ದಾರೆ. ಬಿಜೆಪಿ ತನ್ನ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ನಿತೀಶ್ ಕುಮಾರ್ ಆರೋಪವು ಮೈತ್ರಿ ಕೊನೆಯ ಮೂಲಕ ಅಂತ್ಯವಾಯಿತು. ಒಮ್ಮೆ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದ ಸಿಂಗ್, ಭ್ರಷ್ಟಾಚಾರದ ಆರೋಪದ ಮೇಲೆ ಇತ್ತೀಚಿಗಷ್ಟೇ ರಾಜೀನಾಮೆ ನೀಡಿದ್ದರು.