ಬಿಹಾರ ಮಾಜಿ ಸಿಎಂ ಅಂತ್ಯಕ್ರಿಯೆ: 22 ರೈಫಲ್ ನಿಂದಲೂ ಗುಂಡು ಹಾರಲಿಲ್ಲ
ಪಾಟ್ನಾ (ಬಿಹಾರ), ಆಗಸ್ಟ್ 22: ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಅವರ ಅಂತ್ಯಸಂಸ್ಕಾರ ಬುಧವಾರ ನಡೆಯಿತು. ಸರಕಾರಿ ಗೌರವದೊಂದಿಗೆ ನಡೆದ ಅಂತ್ಯ ಸಂಸ್ಕಾರದ ವೇಳೆ ಪೊಲೀಸ್ ಸಿಬ್ಬಂದಿ ತಮ್ಮ 22 ರೈಫಲ್ ನಿಂದ ಗುಂಡು ಹಾರಿಸಲು ಯತ್ನಿಸಿದ್ದಾರೆ. ಆದರೆ ಒಂದು ಗುಂಡು ಕೂಡ ಹಾರಿಲ್ಲ.
ಮಿಶ್ರಾ ಅಂತ್ಯಕ್ರಿಯೆ ಸುಪೌಲ್ ಜಿಲ್ಲೆಯ ಅವರ ಪೂರ್ವಜರ ಹಳ್ಳಿಯಲ್ಲಿ ನಡೆಯಿತು. ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಮತ್ತಿತರ ಗಣ್ಯರು ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿ ಮತ್ತು ಇತರ ಗಣ್ಯರ ಎದುರಿಗೇ ಮಿಶ್ರಾ ಅವರಿಗೆ ಅಂತಿಮವಾಗಿ ಪೊಲೀಸರು ಗುಂಡು ಹಾರಿಸಿ, ಗೌರವ ಸಲ್ಲಿಸುವ ಪ್ರಯತ್ನ ವಿಫಲವಾಯಿತು. ಗುಂಡು ಹಾರಿಸಲು ಪೊಲೀಸರು ಪಟ್ಟ ಎಲ್ಲ ಪ್ರಯತ್ನಗಳು ವಿಫಲವಾಯಿತು. ಸಿಎಂ ನಿತೀಶ್ ಕುಮಾರ್ ಅವರು ಹೆಲಿಕಾಪ್ಟರ್ ನಲ್ಲಿ ಅಂತ್ಯಕ್ರಿಯೆ ಸ್ಥಳವನ್ನು ತಲುಪಿದ್ದರು.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಜನತಾ ದಳ ಶಾಸಕ ಯದುವಂಶ್ ಕುಮಾರ್ ಯಾದವ್, ಇದು ಮಾಜಿ ಮುಖ್ಯಮಂತ್ರಿಗೆ ಮಾಡಿದ ಅವಮಾನ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಜಗನ್ನಾಥ ಮಿಶ್ರಾ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ. ಆಗಸ್ಟ್ ಹತ್ತೊಂಬತ್ತನೇ ತಾರೀಕು ನಿಧನರಾಗಿದ್ದರು. ಅವರಿಗೆ ಎಂಬತ್ತೆರಡು ವರ್ಷ ವಯಸ್ಸಾಗಿತ್ತು. ಪ್ರೊಫೆಸರ್ ಆಗಿ ತಮ್ಮ ವೃತ್ತಿ ಜೀವನವನ್ನು ಅವರು ಆರಂಭಿಸಿದ್ದರು. ಆ ನಂತರ ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಬಿಹಾರದ ಮುಖ್ಯಮಂತ್ರಿ ಆಗಿದ್ದರು.












Click it and Unblock the Notifications