ಪಾಸ್ವಾನ್ vs ಮಾಂಝಿ vs ನಿತೀಶ್, ಬಿಜೆಪಿಗೆ ಪೀಕಲಾಟ
ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಭರದಿಂದ ಸಿದ್ಧತೆ, ಪ್ರಚಾರ, ಸೀಟು ಹಂಚಿಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಈ ನಡುವೆ ಎನ್ಡಿಎ ಮೈತ್ರಿಕೂಟ ಪಕ್ಷಗಳ ನಡುವಿನ ತಿಕ್ಕಾಟ, ಯಾವ ನೇತೃತ್ವದಲ್ಲಿ ಚುನಾವಣೆ ನಡೆಸಬೇಕು ಎಂಬುದು ಈಗ ಬಿಜೆಪಿಗೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ.
ಎಲ್ ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್, ಜೆಡಿಯುವಿನ ನಿತೀಶ್ ಕುಮಾರ್ ಹಾಗೂ ಇತ್ತೀಚಿನ ಮಿತ್ರ ಎಚ್ಎಎಂನ ಮಾಂಝಿ ನಡುವಿನ ವಾಕ್ಸಮರ, ಶೀತಲ ಸಮರ ಉಪಶಮನ ಮಾಡದಿದ್ದರೆ ಬಿಜೆಪಿಗೆ ಬಿಹಾರದಲ್ಲಷ್ಟೇ ಅಲ್ಲ ಕೇಂದ್ರದಲ್ಲೂ ಭಾರಿ ಪೆಟ್ಟು ಬೀಳುವ ಸಾಧ್ಯತೆಯಿದೆ.
2000ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರು ಲೋಕ ಜನಶಕ್ತಿ ಪಕ್ಷ ಆರಂಭಿಸಿದರು. 80, 90 ರ ದಶಕದಲ್ಲಿ ದಮನಿತರು ಶೋಷಿತರಿಗೆ ಮೇಲ್ವರ್ಗದ ಮೇಲಿದ್ದ ಸಿಟ್ಟು ಆಕ್ರೋಶಕ್ಕೆ ದನಿಯಾಗಿ ದಲಿತ ನಾಯಕ ಎನಿಸಿಕೊಂಡರು. ಸದ್ಯ ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಬಿಹಾರದಲ್ಲಿ ಈಗ ಅವರ ಪುತ್ರ ಚಿರಾಗ್ ಹಾಗೂ ಜಿತನ್ ರಾಮ್ ಮಾಂಝಿ ಇಬ್ಬರು ದಲಿತ ವೋಟ್ ಬ್ಯಾಂಕ್ ಕಾಯುವ ಕೆಲಸ ಮಾಡಬೇಕಿದೆ.

ಜೆಡಿಯು ಜೊತೆ ಎಲ್ ಜೆಪಿ ತಿಕ್ಕಾಟ
ಬಿಜೆಪಿಗಾಗಿ ನಾವು ಜೆಡಿಯು ಜೊತೆ ಅನಿವಾರ್ಯವಾಗಿ ಕೈ ಜೋಡಿಸಿದ್ದೇ ವಿನಾ ರಾಜ್ಯಮಟ್ಟದಲ್ಲಿ ಜೆಡಿಯು ಜೊತೆ ಮೈತ್ರಿ ಅಗತ್ಯವಿಲ್ಲ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಕಾಲ ಬಂದಿದೆ ಎಂದು ಹಿರಿಯ ಎಲ್ ಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಜೆಡಿಯು ವಿರುದ್ಧ ಎಲ್ ಜೆಪಿ ಅಭ್ಯರ್ಥಿ ಕಣಕ್ಕಿಳಿದರೆ ಮೈತ್ರಿ ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬುದು ಬಿಜೆಪಿಗೂ ಗೊತ್ತಿದೆ. ಜೆಡಿಯು ಜೊತೆ ಎಲ್ ಜೆಪಿ ಗುದ್ದಾಡಿದರೂ ಬಿಜೆಪಿ ಜೊತೆ ಎಲ್ ಜೆಪಿ ಚೆನ್ನಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೊಗಳುತ್ತಾ ಸಾಗಿರುವ ಎಲ್ ಜೆಪಿಗೆ ರಾಮ್ ವಿಲಾಸ್ ಪಾಸ್ವಾನ್ ಅವರು ಕೇಂದ್ರ ಸಚಿವರಾಗಿ ಉಳಿದುಕೊಳ್ಳಬೇಕಿದೆ. ಚುನಾವಣೆ ಹತ್ತಿರ ಇರುವುದರಿಂದ ಮೈತ್ರಿ ಉಳಿಸಿಕೊಳ್ಳುವುದು ಮೂರು ಪಕ್ಷಗಳಿಗೂ ಬೇಕಿದೆ. ಆದರೆ, ಚರ್ಚಿಸಲು ಯಾರು ಸಿದ್ಧರಾಗಿಲ್ಲ.

ದಲಿತ ಮತಗಳ ಲೆಕ್ಕಾಚಾರ ಅಂದು -ಇಂದು
ಬಿಹಾರದಲ್ಲಿ ಶೇ 17ರಷ್ಟು ದಲಿತ ಮತಗಳಿವೆ. ಜಾತಿ ಆಧಾರಿತ ರಾಜಕೀಯವನ್ನು ಚೆನ್ನಾಗಿ ಅರಿತಿದ್ದ ಆರ್ ಜೆಡಿಯ ಲಾಲೂ ಪ್ರಸಾದ್ ಯಾದವರು ವೋಟ್ ಬ್ಯಾಂಕ್ ತಂತ್ರವನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಲಾಲೂ-ರಾಬ್ಡಿ ದೇವಿ ಅಧಿಕಾರ ಅವಧಿಯ ಫಲವೇ ಪಾಸ್ವಾನ್ ಅವರಿಗೆ ದಲಿತ ಕಾರ್ಡ್ ಬಳಸಿ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿತ್ತು.
ಲಾಲೂ ಪ್ರಸಾದ್ ಅವರು ದಲಿತ ಮತಗಳನ್ನು ಕಳೆದುಕೊಳ್ಳುವ ವೇಳೆಗೆ ನಿತೀಶ್ ಕುಮಾರ್ ಹಾಗೂ ಪಾಸ್ವಾನ್ ಇಬ್ಬರು ಇದೇ ವೋಟ್ ಬ್ಯಾಂಕ್ ಮೇಲೆ ಕಣ್ಣಿರಿಸಿದರು. 2005ರಲ್ಲಿ ಅಧಿಕಾರಕ್ಕೆ ಬಂದ ನಿತೀಶ್ ಅವರು ಮಹಾದಲಿತ್ ವೋಟ್ ಬ್ಯಾಂಕ್ ತಂತ್ರ ಬಳಸಿದರು. 20ಕ್ಕೂ ಅಧಿಕ ಉಪ ಪಂಗಡಗಳನ್ನು ಒಳಗೊಂಡಿದ್ದ ಮಹಾದಲಿತ್ ಸಮೂಹಕ್ಕೆ ಪಾಸ್ವಾನ್ ಉಪ ಪಂಗಡವನ್ನು ನಿತೀಶ್ ಸೇರಿಸಿರಲಿಲ್ಲ.
2015ರ ವಿಧಾನಸಭೆ ಚುನಾವಣೆ ಹೊರತುಪಡಿಸಿದರೆ, ಪಾಸ್ವಾನ್ ಅವರು ತಮ್ಮ ಪಂಗಡದ ಬಲದಿಂದಲೇ 2014 ಹಾಗೂ 2019ರಲ್ಲಿ ಜಯ ದಾಖಲಿಸಿದರು. ಬಿಜೆಪಿ ಅವರ ಬೆನ್ನ ಹಿಂದೆ ಇತ್ತು ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.

ಪಾಸ್ವಾನ್ ಮುಂಚೂಣಿಯಲ್ಲಿ
ತಮ್ಮನ್ನು ಸಿಎಂ ಅಭ್ಯರ್ಥಿ ಎಂಬಂತೆ ಬಿಂಬಿಸಿ ಕೊಂಡಿರುವ ಚಿರಾಗ್ ಪಾಸ್ವಾನ್ ಅವರು ಸ್ಥಳೀಯರ ಅಗತ್ಯಕ್ಕೆ ದನಿಯಾದರು. ''ಬಿಹಾರ ಮೊದಲು, ಬಿಹಾರಿ ಮೊದಲು'' ಎಂಬ ಘೋಷವಾಕ್ಯ ಹೊರ ತಂದರು. ಮಿತ್ರಪಕ್ಷವಾದರೂ ನಿತೀಶ್ ಆಡಳಿತದ ಹುಳುಕುಗಳನ್ನು ಎತ್ತಿ ಹಿಡಿದರು. ಜನಪರ ಕಾರ್ಯಗಳಲ್ಲಿ ತೊಡಗಿಕೊಂಡು ಮನ್ನಣೆ ಗಳಿಸಿದರು. ಕೊವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಿರಾಗ್ ನಾಯಕತ್ವ ವಹಿಸಿಕೊಳ್ಳಬೇಕು ಎಂಬುದು ಯುವ ಜನಾಂಗದ ಒಕ್ಕೊರಲ ಬೇಡಿಕೆಯಾಗಿದೆ ಎಂದು ಎಲ್ ಜೆಪಿ ಹೇಳಿಕೊಂಡಿದೆ.

ಬದಲಿ ವ್ಯವಸ್ಥೆ ಬಿಜೆಪಿಗೂ ಈಗ ಸಾಧ್ಯವಿಲ್ಲ
ಕೊವಿಡ್ 19 ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗಿದ್ದ ಯುವ ಸಮುದಾಯಕ್ಕೆ ಚಿರಾಗ್ ಭರವಸೆ ನೀಡಿದ್ದು, ಎಲ್ಲರೂ ಬಿಹಾರದಲ್ಲೆ ನೆಲೆಗೊಳ್ಳಲು ಸಿದ್ಧ ಎಂದಿದ್ದಾರೆ. ನಿತೀಶ್ ಸರ್ಕಾರ ಸರಿಯಾಗಿ ಕಾಳಜಿ ವಹಿಸಿದ್ದರೆ ಬೇರೆ ರಾಜ್ಯಕ್ಕೆ ವಲಸೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಚಿರಾಗ್ ಎಲ್ಲರಿಗೂ ಮನದಟ್ಟಾಗುವಂತೆ ಮಾಡಿದ್ದಾರೆ. ದಲಿತ-ಮುಸ್ಲಿಂ ಹಾಗೂ ಶ್ರಮಿಕ ವರ್ಗದವರಿಗೆ ನಿತೀಶ್ ಸರ್ಕಾರದ ಮೇಲೆ ಉದ್ಯೋಗ ಕುರಿತಂತೆ ಇದ್ದ ನಿರೀಕ್ಷೆ ಹುಸಿಯಾಗಿದ್ದು, ಇದು ನಿತೀಶ್ ಗೆ ಮುಳುವಾಗುವ ಸಾಧ್ಯತೆಯಿದೆ. ದಲಿತ ಹಾಗೂ ಮುಸ್ಲಿಂ ಪ್ರಾತಿನಿಧ್ಯದ ಬಗ್ಗೆ ಮತ್ತೆ ಚರ್ಚೆ ಮೊದಲಾಗಿದೆ.

ಹಳೆ ಹುಲಿ ನಿತೀಶ್ ತಂತ್ರಗಾರಿಕೆ ಬಗ್ಗೆ ಎಚ್ಚರ
ಸೀಟು ಹಂಚಿಕೆ ಹಾಗೂ ಅಭ್ಯರ್ಥಿಗಳನ್ನು ಯಾವ ಕ್ಷೇತ್ರಗಳಲ್ಲಿ ಕಣಕ್ಕಿಳಿಸಬೇಕು ಎಂಬ ಸಮಸ್ಯೆ ಚಿರಾಗ್ ಹಾಗೂ ನಿತೀಶ್ ನಡುವಿನ ತಿಕ್ಕಾಟಕ್ಕೆ ಮೂಲ ಕಾರಣವಾಗಿದೆ. 2010ರ ವಿಧಾನಸಭೆಯಲ್ಲಿ ಇದ್ದ ಸೀಟು ಹಂಚಿಕೆ ಅನುಪಾತದಂತೆ ಈ ಬಾರಿಯೂ ಸೀಟು ಹಂಚಿಕೆಯಾಗಲಿ ಎಂದು ಜೆಡಿಯು ಹಠ ಹಿಡಿದಿದೆ.
ಈಗ ಬಿಜೆಪಿ ವರಿಷ್ಠರು ಸೀಟು ಹಂಚಿಕೆ, ಜಾತಿ ಸೆಂಟಿಮೆಂಟು, ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತರು ಎಲ್ಲರ ಪ್ರಾತಿನಿಧ್ಯ ಪರಿಗಣಿಸಿ ಜೆಡಿಯು ಹಾಗೂ ಎಲ್ ಜೆಪಿ ನಡುವಿನ ಕಿತ್ತಾಟವನ್ನು ಬಗೆಹರಿಸಬೇಕಿದೆ. 2015ರಲ್ಲಿ ಮೋಹನ್ ಭಾಗ್ವತ್ ಅವರು ಮೀಸಲಾತಿ ಬಗ್ಗೆ ಆಡಿದ ಒಂದು ಮಾತು ಬಿಜೆಪಿ ಸೋಲಿಗೆ ಕಾರಣವಾಯಿತು ಎಂಬುದು ಬಹಿರಂಗ ಸತ್ಯ. ಹೀಗಾಗಿ, ಮಾಂಝಿ, ಪಾಸ್ವಾನ್ ಹಾಗೂ ನಿತೀಶ್ ಮಾತಿನ ಓಟಕ್ಕೆ ಕೊಂಚ ಬ್ರೇಕ್ ಹಾಕುವುದು ಅನಿವಾರ್ಯ.

ಮಾಂಝಿ ಜೊತೆ ಮೈತ್ರಿಗೆ ಚಿರಾಗ್ ಸಿದ್ಧವಿಲ್ಲ
ಬಿಹಾರ್ ಮೊದಲು ಬಿಹಾರಿ ಮೊದಲು ಎಂಬ ಚಿರಾಗ್ ಘೋಷವಾಕ್ಯವನ್ನೇ ತಿದ್ದಿ ಬಿಹಾರ್ ಮೊದಲು ನಿತೀಶ್ ಮೊದಲು ಎಂದು ನಿತೀಶ್ ಪರ ಬ್ಯಾಟ್ ಬೀಸುತ್ತಾ ಮಾಂಝಿ ಎನ್ಡಿಎ ಮೈತ್ರಿಕೂಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಚಾರದ ಸಾಧನಗಳಲ್ಲಿ ಪಾಸ್ವಾನ್ ಅಪ್ಪ-ಮಗನ ಬಗ್ಗೆ ಉಲ್ಲೇಖವೇ ಇಲ್ಲ. ಒಂದು ವೇಳೆ ಮಾಂಝಿ ಕಾರಣದಿಂದ ಎನ್ಡಿಎ ಜೊತೆ ಚಿರಾಗ್ ಮೈತ್ರಿ ಕಳೆದುಕೊಂಡರೆ, ಜೆಡಿಯು- ಎಚ್ಎಎಂ ಮೈತ್ರಿ ಇನ್ನಷ್ಟು ಬಲವಾಗಲಿದೆ. ಜೆಡಿಯು ವಿರುದ್ಧ 143 ಎಲ್ ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧ ಚಿರಾಗ್ ಘೋಷಿಸಿದ್ದಾರೆ ಕೂಡಾ.
Recommended Video

ಮಾತಿನ ಚಕಮಕಿ ನಡುವೆ ರೆಫ್ರಿಯಾದ ಬಿಜೆಪಿ
ಪಾಸ್ವಾನ್ vs ಮಾಂಝಿ vs ನಿತೀಶ್ ನಡುವಿನ ವಾಕ್ಸಮರ, ಪ್ರತಿಷ್ಠೆಯ ಕಾದಾಟದಲ್ಲಿ ಬಿಜೆಪಿ ಸದ್ಯಕ್ಕೆ ರೆಫ್ರಿ ಪಾತ್ರ ನಿರ್ವಹಿಸುತ್ತಿದೆ. ಎಲ್ ಜೆಪಿ ಬಗ್ಗೆ ಬಿಜೆಪಿ ಅಷ್ಟಾಗಿ ಅವಲಂಬನೆ ಇಟ್ಟುಕೊಂಡಿಲ್ಲ. ಸೀನಿಯರ್ ಪಾಸ್ವಾನ್ ಕೇಂದ್ರದಲ್ಲಿ ಮಂತ್ರಿಸ್ಥಾನ ಉಳಿಸಿಕೊಳ್ಳಬೇಕು, ಬಿಹಾರದಲ್ಲಿ ಚಿರಾಗ್ ಅಧಿಕಾರಕ್ಕೆ ಬರಬೇಕು ಎಂಬುದು ಎಲ್ ಜೆಪಿಯ ರಣತಂತ್ರ. ಆದರೆ, ಅಂತಿಮ ದಾಳ ಬಿಜೆಪಿ ವರಿಷ್ಠರಿಂದ ಉರುಳಲಿದ್ದು, ಕೇಂದ್ರದ ಸಚಿವ ಸ್ಥಾನದ ಬದಲಿಗೆ ನಿತೀಶ್ ಕೈಕುಲುಕಿ ಮುಗುಳ್ನಗುವ ಅನಿವಾರ್ಯ ಸ್ಥಿತಿ ಚಿರಾಗ್ ಗೆ ಒದಗಿಬರಬಹುದು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications