ರಾಬ್ರಿ ದೇವಿ ಇಫ್ತಾರ್ ಕೂಟದಲ್ಲಿ ಸಿಎಂ ನಿತೀಶ್ ಕುಮಾರ್; ಬಿಜೆಪಿಗೆ ಪರೋಕ್ಷ ಸಂದೇಶ!
ಪಾಟ್ನಾ, ಏಪ್ರಿಲ್ 23: ಬಿಹಾರದಲ್ಲಿ ಜೆಡಿಯು ಮತ್ತು ಭಾರತೀಯ ಜನತಾ ಪಕ್ಷ(ಬಿಜೆಪಿ) ನಡುವಿನ ಸಂಬಂಧ ಹಳಸಿದಂತೆ ತೋರುತ್ತಿದೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಿವಾಸದಲ್ಲಿ ಆಯೋಜಿಸಿದ ಇಫ್ತಿಯಾರ್ ಕೂಟದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಡೊರಾಂಡಾ ಖಜಾನೆ ಮೇವು ಹಗರಣ ಪ್ರಕರಣದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ಗೆ ಜಾಮೀನು ಸಿಕ್ಕ ನಂತರದಲ್ಲಿ ಅವರ ಪತ್ನಿ ಹಾಗೂ ಮಾಜಿ ಸಿಎಂ ರಾಬ್ರಿ ದೇವಿಯವರ ಅಧಿಕೃತ ನಿವಾಸದಲ್ಲಿ ಮೊದಲ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಈ ಔತಣಕೂಟದಲ್ಲಿ ಸಿಎಂ ನಿತೀಶ್ ಕುಮಾರ್ ಹಾಜರಾಗಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ನಾಂದಿ ಹಾಡಿದಂತೆ ತೋರುತ್ತಿದೆ.
ಬಿಹಾರದಲ್ಲಿ ಸಿಪಾಯಿ ದಂಗೆಯ ವೀರ ವೀರ್ ಕುನ್ವರ್ ಸಿಂಗ್ ಜಯಂತಿಯ ಅಂಗವಾಗಿ ಬಿಜೆಪಿಯು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೆ ಒಂದು ದಿನ ಬಾಕಿ ಇರುವಂತೆ ಬಿಜೆಪಿ ಜೊತೆಗೆ ಸೇರಿಕೊಂಡು ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ನಡೆಯು ಸಾಕಷ್ಟು ರಾಜಕೀಯ ಚರ್ಚೆಗಳನ್ನು ಹುಟ್ಟು ಹಾಕಿದೆ.

ಬಿಜೆಪಿ ಮತ್ತು ಜೆಡಿಯು ಮಧ್ಯೆ ವೈಮನಸ್ಸು:
ಬಿಹಾರದಲ್ಲಿ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದಾಗ ಬಿಜೆಪಿ ಹಾಗೂ ಜೆಡಿಯು ಮಧ್ಯೆ ಎಲ್ಲವೂ ನೆಟ್ಟಗಿಲ್ಲ ಎನ್ನುವ ಅನುಮಾನಗಳು ಹುಟ್ಟಿಕೊಳ್ಳದೇ ಇರಲಾಗದು. ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ನಾಯಕರು ಮೇಲಿಂದ ಮೇಲೆ ಅಸಮಾಧಾನ ಹೊರ ಹಾರುತ್ತಿದ್ದಾರೆ. ಸರ್ಕಾರದ ನಡೆಗೆ ಮಿತ್ರಪಕ್ಷದವರೇ ಅಡ್ಡಗಾಲು ಹಾಕುತ್ತಿರುವುದು ಸ್ವತಃ ಮುಖ್ಯಮಂತ್ರಿಯನ್ನೂ ಕೆರಳುವಂತೆ ಮಾಡಿದೆ. ಈ ನಡುವೆ ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನೆ ಆದಂತೆ ಗೋಚರಿಸುತ್ತಿದೆ.

ಬಿಜೆಪಿಗೆ ಪರೋಕ್ಷ ಸಂದೇಶ ಕೊಟ್ಟರೇ ನಿತೀಶ್ ಕುಮಾರ್?:
ರಾಜ್ಯದಲ್ಲಿ ಬಿಜೆಪಿ ನಾಯಕರ ಟೀಕೆಗಳಿಂದ ರೋಸಿ ಹೋಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರದ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದಂತೆ ಕಾಣುತ್ತಿದೆ. ಅಮಿತ್ ಶಾ ರಾಜ್ಯ ಭೇಟಿಗೂ ಮುನ್ನ ದಿನವೇ ಆರ್ ಜೆಡಿ ಕುಟುಂಬದ ಇಫ್ತಾರ್ ನಲ್ಲಿ ಭಾಗವಹಿಸುವ ಮೂಲಕ ತಮ್ಮ ಮುಂದಿನ ದಾರಿ ಮುಕ್ತವಾಗಿದೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications