ಬಿಹಾರದಲ್ಲಿ ಮತ್ತೆ ವೋಟ್ ಕೌಂಟಿಂಗ್: ಎಷ್ಟು ಕ್ಷೇತ್ರಗಳಲ್ಲಿ ಮರುಎಣಿಕೆ?
ಪಾಟ್ನಾ, ನವೆಂಬರ್.13: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಹಣಬಲ, ತೋಳ್ಬಲದಿಂದ ದಿಗ್ವಿಜಯ ಸಾಧಿಸಿದೆ ಎಂದು ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ದೂಷಿಸಿದ್ದರು.
ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಆರೋಪದ ಹಿನ್ನೆಲೆ ಬಿಹಾರ ಚುನಾವಣಾ ಆಯೋಗವು ಹಿಲ್ಸಾ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಮತಎಣಿಕೆ ನಡೆಸುವುದಕ್ಕೆ ಸಮ್ಮತಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಕ್ಷೇತ್ರದಲ್ಲಿ ಎರಡು ಅಭ್ಯರ್ಥಿಗಳ ನಡುವೆ ಗೆಲುವಿನ ಅಂತರದ ಮತಗಳಿಗಿಂತ ಅಸಿಂಧುಗೊಳಿಸಿದ ಮತಗಳ ಸಂಖ್ಯೆಯೇ ಹೆಚ್ಚಾಗಿದ್ದವು ಎನ್ನಲಾಗಿದೆ.
ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತಎಣಿಕೆ ಪ್ರಕಿಯೆ ಸಂದರ್ಭದಲ್ಲಿ ಲೆಕ್ಕವಿಲ್ಲದಷ್ಟು ಅಂಚೆಮತಗಳನ್ನು ಅಸಿಂಧುಗೊಳಿಸಲಾಗಿದೆ. ಕಡಿಮೆ ಅಂತರದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲಿ ಮರು ಮತಎಣಿಕೆ ನಡೆಸುವಂತೆ ತೇಜಸ್ವಿ ಯಾದವ್ ಆಗ್ರಹಿಸಿದ್ದರು.

ಹಿಲ್ಸಾ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆ
ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ತೇಜಸ್ವಿ ಯಾದವ್ ಆರೋಪಿಸಿರುವ ಹಿನ್ನೆಲೆ ಹಿಲ್ಸಾ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಮರುಎಣಿಕೆ ನಡೆಸಲಾಗುತ್ತದೆ ಎಂದು ಬಿಹಾರ ಚುನಾವಣಾ ಆಯೋಗದ ಮುಖ್ಯಸ್ಥ ಹೆಚ್.ಆರ್.ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ಸೋತ ಅಭ್ಯರ್ಥಿಯು ಅಂಚೆ ಮತಗಳನ್ನು ಮರು ಎಣಿಕೆ ಮಾಡುವಂತೆ ಮೊದಲು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು. ತದನಂತರದಲ್ಲಿ ಮತಗಳ ಅಂತರ ಮತ್ತು ಗೆಲುವಿನ ಅಂತರದಲ್ಲಿ ಅಲ್ಪಮತಗಳ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆ ಸಮ್ಮತಿ ಸೂಚಿಸಲಾಗಿದೆ. ಅಸಿಂಧುಗೊಳಿಸಲಾದ ಮತಗಳ ಜೊತೆಗೆ ಎಲ್ಲ 551 ಅಂಚೆ ಮತಪತ್ರಗಳ ಪುನರ್ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಜೆಡಿಯು ಅಭ್ಯರ್ಥಿ ಗೆಲುವಿನ ಅಂತರ ಕೇವಲ 12 ಮತ!
ಹಿಲ್ಸಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಯುದ ಕೃಷ್ಣಮುರಾರಿ ಶರಣ್ ಅಲಿಯಾಸ್ ಪ್ರೇಮ್ ಮುಖಿಯಾ ತಮ್ಮ ಪ್ರತಿಸ್ಪರ್ಧಿ ಆರ್ ಜೆಡಿ ಅಭ್ಯರ್ಥಿ ಅತ್ರಿ ಮುನಿ ಅಲಿಯಾಸ್ ಶಕ್ತಿ ಸಿಂಗ್ ವಿರುದ್ಧ ಕೇವಲ 12 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಪ್ರೇಮ್ ಮುಖಿಯಾ 61,848 ಮತಗಳನ್ನು ಪಡೆದರೆ, ಆರ್ಜೆಡಿಯ ಶಕ್ತಿ ಸಿಂಗ್ 61,836 ಮತಗಳನ್ನು ಪಡೆದಿದ್ದರು. ಇದರ ನಡುವೆ ಮತ್ತೊಂದು ಅಚ್ಚರಿ ವಿಚಾರ ಎಂದರೆ ಚಲಾವಣೆ ಆಗಿರುವ 551 ಅಂಚೆಮತಪತ್ರಗಳ ಪೈಕಿ 182 ಅಂಚೆಮತಗಳನ್ನು ಅಸಿಂಧುಗೊಳಿಸಲಾಗಿತ್ತು. ಈ ಹಿನ್ನೆಲೆ ಮತಎಣಿಕೆಯಲ್ಲಿ ದೋಷವಿದೆ ಎದು ತೇಜಸ್ವಿ ಯಾದವ್ ದೂಷಿಸಿದ್ದರು.

900 ಅಂಚೆಮತಪತ್ರ ಅಸಿಂಧುಗೊಳಿಸಲು ಕಾರಣ?
ಬಿಹಾರದ 139 ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಮತ್ತು ಮತಗಳ ಅಂತರವನ್ನು ಒಂದೊಮ್ಮೆ ಪರಾಮರ್ಶೆ ಮಾಡಿದಾಗ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮತಎಣಿಕೆ ಕಾರ್ಯದಲ್ಲಿ ದೋಷ ಕಂಡು ಬಂದಿರುವ ಬಗ್ಗೆ ತೇಜಸ್ವಿ ಯಾದವ್ ಅನುಮಾನ ವ್ಯಕ್ತಪಡಿಸಿದ್ದರು. ಚುನಾವಣಾ ಆಯೋಗದ ನಿಯಮದಂತೆ ಅಂಚೆ ಮತಪತ್ರಗಳನ್ನು ಇವಿಎಂ ಮತಗಳ ಎಣಿಕೆಗೂ ಮೊದಲೇ ನಡೆಸಬೇಕು. ಆದರೆ ಈ ಬಾರಿ ಇವಿಎಂ ಮತಗಳ ಎಣಿಕೆ ಕಾರ್ಯವನ್ನು ಅದೆಷ್ಟೋ ಕಡೆಗಳಲ್ಲಿ ಕೊನೆಯ ಹಂತದಲ್ಲಿ ನಡೆಸಲಾಗಿದೆ. ಅಲ್ಲದೇ 900ಕ್ಕೂ ಹೆಚ್ಚು ಅಂಚೆ ಮತಗಳನ್ನು ಅಸಿಂಧುಗೊಳಿಸಲಾಗಿದೆ ಎಂದು ತೇಜಸ್ವಿ ಯಾದವ್ ದೂಷಿಸಿದ್ದರು.

1,000ಕ್ಕಿಂತ ಕಡಿಮೆ ಮತಗಳಿಂದ 11 ಕ್ಷೇತ್ರ ಕೈತಪ್ಪಿದವು
ಬಿಹಾರದ 11 ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ ಜೆಡಿ ಅಭ್ಯರ್ಥಿಗಳು ಗೆಲುವಿನ ಹೊಸ್ತಿಲಿನಲ್ಲಿ ಎಡವಿದ್ದಾರೆ. 243 ವಿಧಾನಸಭಾ ಕ್ಷೇತ್ರಗಳ ಪೈಕಿ ಹಿಲ್ಸಾ, ಬರಬಿಘಾ, ರಾಮಘರ್, ಮತಿಹನಿ, ಭೋರಿಯ್, ದೆಹ್ರಿ, ಬಚಾವರ್, ಚಕೈ, ಕುರ್ಹಾನಿ, ಬಖ್ರಿ, ಪರ್ಬಟ್ಟಾ ಕ್ಷೇತ್ರಗಳಲ್ಲಿ ಕೇವಲ 1000 ಮತಗಳ ಅಂತರದಲ್ಲೇ ಸೋಲು ಕಂಡಿದ್ದಾರೆ ಎಂಬುದು ಚುನಾವಣಾ ಆಯೋಗ ನೀಡಿರುವ ದತ್ತಾಂಶಗಳಿಂದಲೇ ತಿಳಿದು ಬಂದಿದೆ. ಈ ಕ್ಷೇತ್ರಗಳ ಪೈಕಿ ಜೆಡಿಯು ನಾಲ್ಕು, ಆರ್ ಜೆಡಿ ಮೂರು, ಬಿಜೆಪಿ, ಸಿಪಿಐ, ಎಲ್ ಜೆಪಿ ಮತ್ತು ಒಬ್ಬ ಪಕ್ಷೇತರ ಶಾಸಕರು ಗೆಲುವು ಸಾಧಿಸಿದ್ದಾರೆ. ಈ ಪೈಕಿ ಆರ್ ಜೆಡಿಯ ಎರಡು ಕಡೆಗಳಲ್ಲಿ ಕೇವಲ 1000 ಮತಗಳ ಅಂತರದಲ್ಲಿ ಸೋಲು ಅನುಭವಿಸಿದೆ.

ಗೆದ್ದವರಿಗೆ ಪ್ರಮಾಣಪತ್ರ ನೀಡುವಲ್ಲಿ ಏಕೆ ವಿಳಂಬ?
ಕಳೆದ ನವೆಂಬರ್.10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕವೂ ಗೆಲುವು ಸಾಧಿಸಿದ ಅಭ್ಯರ್ಥಿಗೆ ಪ್ರಮಾಣಪತ್ರ ನೀಡುವಲ್ಲಿ ವಿಳಂಬ ತೋರಲಾಗಿತ್ತು ಎಂದು ತೇಜಸ್ವಿ ಯಾದವ್ ಆರೋಪಿಸಿದ್ದರು. ಇದಕ್ಕೆ ಬಿಹಾರ ಚುನಾವಣಾ ಆಯೋಗದ ಮುಖ್ಯಸ್ಥ ಹೆಚ್.ಆರ್.ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ಮತಗಳನ್ನು ಎಣಿಕೆ ಮಾಡಿದ ನಂತರದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಗಳಲ್ಲಿ ದಾಖಲಾದ ಮತಗಳನ್ನು ಹೋಲಿಕೆ ಮಾಡಿ ನೋಡಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಗೆಲುವಿನ ಪ್ರಮಾಣಪತ್ರವನ್ನು ಆ ತಕ್ಷಣಕ್ಕೆ ನೀಡಲು ಸಾಧ್ಯವಾಗಲಿಲ್ಲ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ಹೆಚ್.ಆರ್.ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟನೆ ಏನು?
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಯಾವುದೇ ರಾಜಕಾರಣಿಗಳು ಏನಾದರೂ ಆರೋಪ ಮಾಡಿಕೊಳ್ಳಲಿ. ಅದು ಕೇವಲ ರಾಜಕೀಯಕ್ಕೆ ಸಂಬಂಧಪಟ್ಟಿದ್ದು ಆಗಿರುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರ ಹೇಳಿದ್ದಾರೆ. ಕೊರೊನಾವೈರಸ್ ಸಂದಿಗ್ಧತೆ ನಡುವೆ ಈ ಬಾರಿ ಚುನಾವಣಾ ಮತಗಟ್ಟೆಗಳಲ್ಲಿ ಕೇವಲ 1000 ದಿಂದ 1500 ಮತಗಳ ಚಲಾವಣೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದ ಹೆಚ್ಚುವರಿಯಾಗಿ 33,000 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬಿಹಾರವೊಂದರಲ್ಲೇ ಈ ಬಾರಿ 1 ಲಕ್ಷಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ತೆರೆಯಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿ ಮತಗಳನ್ನು ಎಣಿಕೆ ಮಾಡುವುದಕ್ಕೆ ಸ್ವಲ್ಪ ವಿಳಂಬವಾಗಿದೆ. ಈ ಕುರಿತು ಬಿಹಾರ ರಾಜ್ಯ ಚುನಾವಣೆ ಆಯೋಗವು ಎಲ್ಲ ರೀತಿಯ ಸ್ಪಷ್ಟನೆಯನ್ನು ನೀಡಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ತಿಳಿಸಿದ್ದಾರೆ.

ಬಿಹಾರ ಮತದಾರರು ನೀಡಿರುವ ತೀರ್ಪಿನ ವಿವರ
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಈ ಪೈಕಿ ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications