ಬಿಹಾರದ ಮಹಾಘಟಬಂಧನ ಮೈತ್ರಿಕೂಟಕ್ಕೆ ಆಘಾತ ನೀಡಿದ ಮಾಂಝಿ
ಪಟ್ನಾ, ಆಗಸ್ಟ್ 20: ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್, ಆರ್ಜೆಡಿ ಸೇರಿದಂತೆ ವಿವಿಧ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನಕ್ಕೆ ಹಿನ್ನಡೆಯಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) (ಎಚ್ಎಎಂ-ಎಸ್) ತಾನು ಮಹಾಮೈತ್ರಿಕೂಟದಿಂದ ಹೊರನಡೆಯುತ್ತಿರುವುದಾಗಿ ಘೋಷಣೆ ಮಾಡಿದೆ.
ಪಕ್ಷವು ಪ್ರಸ್ತುತ ಬಿಹಾರದಲ್ಲಿನ ಆಡಳಿತಾರೂಢ ಎನ್ಡಿಎ ಮೈತ್ರಿಕೂಟವನ್ನು ಸೇರಲು ಸಿದ್ಧತೆ ನಡೆಸಿದ್ದು, ಕೆಲವು ದಿನಗಳಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
'ಪಕ್ಷದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಕ್ಷದ ಕಾರ್ಯಕಾರಿ ಸಮಿತಿಯು ಜಿತನ್ ರಾಮ್ ಮಾಂಝಿ ಅವರಿಗೆ ಅಧಿಕಾರ ನೀಡಿದೆ' ಎಂದು ಎಚ್ಎಎಂ-ಎಸ್ ವಕ್ತಾರ ದಾನಿಶ್ ರಿಜ್ವಾನ್ ತಿಳಿಸಿದ್ದಾರೆ.

ಎಚ್ಎಎಂ-ಎಸ್ ಆಡಳಿತಾರೂಢ ಸರ್ಕಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದೊಂದಿಗೆ ವಿಲೀನಗೊಳ್ಳಬಹುದು ಇಲ್ಲವೇ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅದರೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು. ರಾಜಕೀಯವು ಸಂಭವನೀಯತೆ ಮತ್ತು ಸಾಧ್ಯತೆಗಳಿಂದ ತುಂಬಿಕೊಂಡಿದೆ ಎಂದು ರಜ್ವಾನ್ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಟು ಟೀಕಾಕಾರರಾಗಿದ್ದ ಮಾಂಝಿ, ಬಳಿಕ ರಾಜ್ಯ ಸರ್ಕಾರವು ತೆಗೆದುಕೊಳ್ಳುವ ನಿರ್ಧಾರಗಳನ್ನು ಹೊಗಳುತ್ತಿದ್ದರು. ಮಹಾಘಟಬಂಧನದ ಭಾಗವಾಗಿಯೇ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಜೂನ್ 25ರಂದು ಮೈತ್ರಿಕೂಟದ ಸೀಟು ಹಂಚಿಕೆಯ ಸಂಬಂಧ ನಡೆದ ಸಹಕಾರ ಸಮಿತಿ ರಚನೆಯ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಓವೈಸಿ ನೇತೃತ್ವದ ಎಐಎಂಐಎಂ ಸೇರಿದಂತೆ ಬೇರೆ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕೂಡ ಮಾಂಝಿ ಪ್ರಯತ್ನಗಳನ್ನು ನಡೆಸಿದ್ದರು.












Click it and Unblock the Notifications