ಬಿಹಾರ ಚುನಾವಣೆ: ಸಿಎಂ ಅಭ್ಯರ್ಥಿ ವಿಚಾರದಲ್ಲಿ ಶುರುವಾಯ್ತು ಮಹಾಮೈತ್ರಿಕೂಟದಲ್ಲಿ ತಿಕ್ಕಾಟ
ಪಟ್ನಾ, ಸೆಪ್ಟೆಂಬರ್ 26: ಬಿಹಾರ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಅ. 28ರಿಂದ ಮೂರು ಹಂತಗಳಲ್ಲಿ ಚುನಾವಣೆಯ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ. ಈ ಬಾರಿ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಸ್ಪರ್ಧಿಸುವುದಾಗಿ ಎನ್ಡಿಎ ಒಕ್ಕೂಟ ತಿಳಿಸಿದೆ.
ಆದರೆ ಚುನಾವಣೆಯ ದೊಡ್ಡ ಸವಾಲು ಎದುರಾಗಿರುವುದು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಿಗೆ. ಬಿಹಾರದ ವಿರೋಧಪಕ್ಷದ ಸ್ಥಾನದಲ್ಲಿರುವ ಮಹಾ ಮೈತ್ರಿಕೂಟವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ. ಸಿಎಂ ಅಭ್ಯರ್ಥಿ ಘೋಷಣೆ ಬಗ್ಗೆ ಈ ಮಿತ್ರಪಕ್ಷಗಳಲ್ಲಿ ಗೊಂದಲ ಏರ್ಪಡುವ ಸಾಧ್ಯತೆ ಇದೆ.
ಮಹಾ ಘಟಬಂಧನದ ನೇತೃತ್ವ ವಹಿಸುವವರು ಯಾರು ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಆರ್ಜೆಡಿ ನೇತೃತ್ವದ ಮಹಾಮೈತ್ರಿ ಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ತೇಜಸ್ವಿ ಯಾದವ್ ಅವರನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಮೈತ್ರಿಕೂಟದ ಭಾಗವಾದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್ಎಲ್ಎಸ್ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಹೇಳಿದ್ದಾರೆ. ತಮ್ಮ ಪಕ್ಷ ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಕುಶ್ವಾಹ ಅವರ ಪಕ್ಷ ಎನ್ಡಿಎದಿಂದ ಹೊರಬಂದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 243 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಮ್ಮ ಪಕ್ಷ ಸಿದ್ಧತೆ ನಡೆಸಿದೆ ಎಂದು ಅವರು ಹೇಳಿದ್ದಾರೆ. ಮುಂದೆ ಓದಿ.

ಬಿಹಾರ ಜನತೆ ಬಯಕೆ
ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಲು ವಿರೋಧಪಕ್ಷಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಬಿಹಾರದ ಜನತೆ ಬಯಸಿದ್ದಾರೆ. ಎಲ್ಲ ಪಕ್ಷಗಳೂ ಜನರ ಬಯಕೆಯನ್ನು ಗೌರವಿಸಲು ತಮ್ಮ ಅಹಂ ಅನ್ನು ತ್ಯಜಿಸಬೇಕು ಎಂದು ಬಿಹಾರ ಕಾಂಗ್ರೆಸ್ ಉಸ್ತುವಾರಿ ಶಕ್ತಿಸಿನ್ಹ ಗೋಹಿಲ್ ತಿಳಿಸಿದ್ದಾರೆ.

ಕಿತ್ತಾಟ ಸ್ವಾಭಾವಿಕ
ತನ್ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಎಂದು ಆರ್ಜೆಡಿ ಈಗಾಗಲೇ ಘೋಷಿಸಿದೆ. ಈಗ ಕಾಂಗ್ರೆಸ್ನ ಹೇಳಿಕೆಯು, ಮೈತ್ರಿಕೂಟದೊಳಗೆ ತೀವ್ರ ಮಟ್ಟದ ಹಗ್ಗಜಗ್ಗಾಟ ನಡೆಸುವ ಸೂಚನೆ ನೀಡಿದೆ. ಬಿಹಾರದಲ್ಲಿ ರಾಜಕೀಯ ಸಂಚಲನ ಇರುತ್ತದೆ. ಇಲ್ಲಿ ರಾಜಕೀಯ ಪಕ್ಷಗಳ ನಡುವೆ ಕಿತ್ತಾಟ ಸ್ವಾಭಾವಿಕ ಎಂದು ಗೋಹಿಲ್ ಹೇಳಿದ್ದಾರೆ.

ಒಗ್ಗಟ್ಟಿನ ಹೋರಾಟ ಬೇಕಿದೆ
'ಎಲ್ಲ ಸಮಾನಮನಸ್ಕ ಪಕ್ಷಗಳೂ ಜತೆಗಿರುವಂತೆ ನೋಡಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ. ಅದರ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ನಾವು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕೆಟ್ಟ ಆಡಳಿತದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು' ಎಂದಿದ್ದಾರೆ. ಪ್ರತಿ ಪಕ್ಷಗಳೂ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಇಚ್ಛಿಸುತ್ತವೆ. ಹೀಗಾಗಿ ಕಿತ್ತಾಟ ಹೆಚ್ಚು ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.

ಕುಶ್ವಾಹ ಜತೆ ಸಂಪರ್ಕ
'ನಾವು ಕುಶ್ವಾಹ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ಎನ್ಡಿಎ ತೊರೆದಿದ್ದರು. ಅವರು ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಅತ್ಯಂತ ಸಮೀಪದಿಂದ ಅವರು ಎನ್ಡಿಎಯನ್ನು ನೋಡಿದ್ದಾರೆ. ತಮ್ಮ ತತ್ವಗಳ ಕಾರಣಕ್ಕೆ ಅವರು ಎನ್ಡಿಎ ತೊರೆದಿದ್ದಾರೆ' ಎಂದು ತಮ್ಮ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದ್ದಾಗಿ ಕುಶ್ವಾಹ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಎಲ್ಲ ಸೇರಿ ಚರ್ಚಿಸಬೇಕು
ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಆರ್ಜೆಡಿ ನಿರ್ಧಾರದ ಬಗ್ಗೆ ಮಾತನಾಡಿದ ಅವರು, 'ಪ್ರತಿ ಪಕ್ಷಕ್ಕೂ ತಮ್ಮ ನಾಯಕನ್ನು ಬಿಂಬಿಸುವ ಹಕ್ಕು ಇರುತ್ತದೆ. ಆರ್ಜೆಡಿ ತನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸಿದ್ದರೆ ಅದಕ್ಕೆ ಯಾರೂ ವಿರೋಧಿಸುವುದಿಲ್ಲ. ಆದರೆ ಮೈತ್ರಿಕೂಟದ ವಿಚಾರ ಬಂದಾಗ ನಾವು ಎಲ್ಲ ಮಿತ್ರಪಕ್ಷಗಳೂ ಚರ್ಚಿಸಬೇಕು. ನಾವು ಈಗ ಪ್ರಮುಖ ಹಂತವನ್ನು ತಲುಪಿದ್ದೇವೆ. ಇನ್ನೂ ಸಾಕಷ್ಟು ಸಮಯವಿದೆ. ಚರ್ಚೆಗಳು ನಡೆಯುವಾಗ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ' ಎಂದಿದ್ದಾರೆ.

ಮುಖ್ಯಮಂತ್ರಿ ಅಭ್ಯರ್ಥಿಗೆ ಚರ್ಚೆ
ಮೈತ್ರಿಕೂಟದ ಪಕ್ಷಗಳು ಸೇರಿ ಚರ್ಚೆ ನಡೆಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲಿವೆ. ಚುನಾವಣೆಗೂ ಮುನ್ನ ಇದನ್ನು ಘೋಷಿಸಲಿವೆ. ಇದರಿಂದ ಚುನಾವಣೆ ಎದುರಿಸಲು ಸಹಾಯವಾಗಲಿದೆ. ಒಂದು ವೇಳೆ ಅದು ನಿರ್ಧಾರವಾಗದೆ ಹೋದರೂ, ಸಿಎಂ ಅಭ್ಯರ್ಥಿ ಇಲ್ಲದೆಯೇ ಒಗ್ಗಟ್ಟಾಗಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
Recommended Video

ನಮ್ಮದೇ ಸರ್ಕಾರ ಬರಲಿದೆ
2015ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಮತಗಳಿಕೆ ಚೆನ್ನಾಗಿತ್ತು. ಈ ಬಾರಿ ಕೂಡ ನಾವು ಹಾಗೂ ನಮ್ಮ ಜತೆಗೆ ಇರುವ ಯಾವುದೇ ಮಿತ್ರಪಕ್ಷಗಳು ಜತೆಯಾಗಿ ಸ್ಪರ್ಧಿಸಿ ಜನರ ಆಶೀರ್ವಾದದೊಂದಿಗೆ ಸರ್ಕಾರ ರಚಿಸುತ್ತೇವೆ. ನಾವು ಒಟ್ಟಾಗಿ ಚರ್ಚಿಸಿ ಎಲ್ಲವನ್ನೂ ನಿರ್ಧರಿಸುತ್ತೇವೆ. ಸಣ್ಣ ಪುಟ್ಟ ವಿವಾದ ಹಾಗೂ ಅಹಮ್ಮಿಕೆಯನ್ನು ಬದಿಗಿಡಬೇಕಿದೆ. ಆಡಳಿತ ವಿರೋಧಿ ಮತಗಳಲ್ಲಿ ಯಾವ ವಿಭಜನೆಯೂ ಇರುವುದಿಲ್ಲ ಎಂದಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications