ಬಿಹಾರ ಚುನಾವಣೆ: ಸಿಎಂ ಅಭ್ಯರ್ಥಿ ವಿಚಾರದಲ್ಲಿ ಶುರುವಾಯ್ತು ಮಹಾಮೈತ್ರಿಕೂಟದಲ್ಲಿ ತಿಕ್ಕಾಟ
ಪಟ್ನಾ, ಸೆಪ್ಟೆಂಬರ್ 26: ಬಿಹಾರ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಅ. 28ರಿಂದ ಮೂರು ಹಂತಗಳಲ್ಲಿ ಚುನಾವಣೆಯ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ. ಈ ಬಾರಿ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಸ್ಪರ್ಧಿಸುವುದಾಗಿ ಎನ್ಡಿಎ ಒಕ್ಕೂಟ ತಿಳಿಸಿದೆ.
ಆದರೆ ಚುನಾವಣೆಯ ದೊಡ್ಡ ಸವಾಲು ಎದುರಾಗಿರುವುದು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಿಗೆ. ಬಿಹಾರದ ವಿರೋಧಪಕ್ಷದ ಸ್ಥಾನದಲ್ಲಿರುವ ಮಹಾ ಮೈತ್ರಿಕೂಟವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ. ಸಿಎಂ ಅಭ್ಯರ್ಥಿ ಘೋಷಣೆ ಬಗ್ಗೆ ಈ ಮಿತ್ರಪಕ್ಷಗಳಲ್ಲಿ ಗೊಂದಲ ಏರ್ಪಡುವ ಸಾಧ್ಯತೆ ಇದೆ.
ಮಹಾ ಘಟಬಂಧನದ ನೇತೃತ್ವ ವಹಿಸುವವರು ಯಾರು ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಆರ್ಜೆಡಿ ನೇತೃತ್ವದ ಮಹಾಮೈತ್ರಿ ಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ತೇಜಸ್ವಿ ಯಾದವ್ ಅವರನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಮೈತ್ರಿಕೂಟದ ಭಾಗವಾದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್ಎಲ್ಎಸ್ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಹೇಳಿದ್ದಾರೆ. ತಮ್ಮ ಪಕ್ಷ ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
Breaking ಕೋವಿಡ್ ಭೀತಿಯ ನಡುವೆ ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ
ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಕುಶ್ವಾಹ ಅವರ ಪಕ್ಷ ಎನ್ಡಿಎದಿಂದ ಹೊರಬಂದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 243 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಮ್ಮ ಪಕ್ಷ ಸಿದ್ಧತೆ ನಡೆಸಿದೆ ಎಂದು ಅವರು ಹೇಳಿದ್ದಾರೆ. ಮುಂದೆ ಓದಿ.
ಬಿಹಾರ ಜನತೆ ಬಯಕೆ
ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಲು ವಿರೋಧಪಕ್ಷಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಬಿಹಾರದ ಜನತೆ ಬಯಸಿದ್ದಾರೆ. ಎಲ್ಲ ಪಕ್ಷಗಳೂ ಜನರ ಬಯಕೆಯನ್ನು ಗೌರವಿಸಲು ತಮ್ಮ ಅಹಂ ಅನ್ನು ತ್ಯಜಿಸಬೇಕು ಎಂದು ಬಿಹಾರ ಕಾಂಗ್ರೆಸ್ ಉಸ್ತುವಾರಿ ಶಕ್ತಿಸಿನ್ಹ ಗೋಹಿಲ್ ತಿಳಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಕಣಕ್ಕೆ ಶಿವಸೇನೆ ಕಲಿಗಳು?
ಕಿತ್ತಾಟ ಸ್ವಾಭಾವಿಕ
ತನ್ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಎಂದು ಆರ್ಜೆಡಿ ಈಗಾಗಲೇ ಘೋಷಿಸಿದೆ. ಈಗ ಕಾಂಗ್ರೆಸ್ನ ಹೇಳಿಕೆಯು, ಮೈತ್ರಿಕೂಟದೊಳಗೆ ತೀವ್ರ ಮಟ್ಟದ ಹಗ್ಗಜಗ್ಗಾಟ ನಡೆಸುವ ಸೂಚನೆ ನೀಡಿದೆ. ಬಿಹಾರದಲ್ಲಿ ರಾಜಕೀಯ ಸಂಚಲನ ಇರುತ್ತದೆ. ಇಲ್ಲಿ ರಾಜಕೀಯ ಪಕ್ಷಗಳ ನಡುವೆ ಕಿತ್ತಾಟ ಸ್ವಾಭಾವಿಕ ಎಂದು ಗೋಹಿಲ್ ಹೇಳಿದ್ದಾರೆ.
ಒಗ್ಗಟ್ಟಿನ ಹೋರಾಟ ಬೇಕಿದೆ
'ಎಲ್ಲ ಸಮಾನಮನಸ್ಕ ಪಕ್ಷಗಳೂ ಜತೆಗಿರುವಂತೆ ನೋಡಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ. ಅದರ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ನಾವು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕೆಟ್ಟ ಆಡಳಿತದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು' ಎಂದಿದ್ದಾರೆ. ಪ್ರತಿ ಪಕ್ಷಗಳೂ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಇಚ್ಛಿಸುತ್ತವೆ. ಹೀಗಾಗಿ ಕಿತ್ತಾಟ ಹೆಚ್ಚು ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ಸಮೀಕ್ಷೆ ಫಲಿತಾಂಶ: 4ನೇ ಬಾರಿಗೆ ನಿತೀಶ್ ನೇತೃತ್ವದ ಎನ್ಡಿಎ ಕ್ಲೀನ್ ಸ್ವೀಪ್
ಕುಶ್ವಾಹ ಜತೆ ಸಂಪರ್ಕ
'ನಾವು ಕುಶ್ವಾಹ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ಎನ್ಡಿಎ ತೊರೆದಿದ್ದರು. ಅವರು ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಅತ್ಯಂತ ಸಮೀಪದಿಂದ ಅವರು ಎನ್ಡಿಎಯನ್ನು ನೋಡಿದ್ದಾರೆ. ತಮ್ಮ ತತ್ವಗಳ ಕಾರಣಕ್ಕೆ ಅವರು ಎನ್ಡಿಎ ತೊರೆದಿದ್ದಾರೆ' ಎಂದು ತಮ್ಮ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದ್ದಾಗಿ ಕುಶ್ವಾಹ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಎಲ್ಲ ಸೇರಿ ಚರ್ಚಿಸಬೇಕು
ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಆರ್ಜೆಡಿ ನಿರ್ಧಾರದ ಬಗ್ಗೆ ಮಾತನಾಡಿದ ಅವರು, 'ಪ್ರತಿ ಪಕ್ಷಕ್ಕೂ ತಮ್ಮ ನಾಯಕನ್ನು ಬಿಂಬಿಸುವ ಹಕ್ಕು ಇರುತ್ತದೆ. ಆರ್ಜೆಡಿ ತನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸಿದ್ದರೆ ಅದಕ್ಕೆ ಯಾರೂ ವಿರೋಧಿಸುವುದಿಲ್ಲ. ಆದರೆ ಮೈತ್ರಿಕೂಟದ ವಿಚಾರ ಬಂದಾಗ ನಾವು ಎಲ್ಲ ಮಿತ್ರಪಕ್ಷಗಳೂ ಚರ್ಚಿಸಬೇಕು. ನಾವು ಈಗ ಪ್ರಮುಖ ಹಂತವನ್ನು ತಲುಪಿದ್ದೇವೆ. ಇನ್ನೂ ಸಾಕಷ್ಟು ಸಮಯವಿದೆ. ಚರ್ಚೆಗಳು ನಡೆಯುವಾಗ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ' ಎಂದಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿಗೆ ಚರ್ಚೆ
ಮೈತ್ರಿಕೂಟದ ಪಕ್ಷಗಳು ಸೇರಿ ಚರ್ಚೆ ನಡೆಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲಿವೆ. ಚುನಾವಣೆಗೂ ಮುನ್ನ ಇದನ್ನು ಘೋಷಿಸಲಿವೆ. ಇದರಿಂದ ಚುನಾವಣೆ ಎದುರಿಸಲು ಸಹಾಯವಾಗಲಿದೆ. ಒಂದು ವೇಳೆ ಅದು ನಿರ್ಧಾರವಾಗದೆ ಹೋದರೂ, ಸಿಎಂ ಅಭ್ಯರ್ಥಿ ಇಲ್ಲದೆಯೇ ಒಗ್ಗಟ್ಟಾಗಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
Recommended Video
ನಮ್ಮದೇ ಸರ್ಕಾರ ಬರಲಿದೆ
2015ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಮತಗಳಿಕೆ ಚೆನ್ನಾಗಿತ್ತು. ಈ ಬಾರಿ ಕೂಡ ನಾವು ಹಾಗೂ ನಮ್ಮ ಜತೆಗೆ ಇರುವ ಯಾವುದೇ ಮಿತ್ರಪಕ್ಷಗಳು ಜತೆಯಾಗಿ ಸ್ಪರ್ಧಿಸಿ ಜನರ ಆಶೀರ್ವಾದದೊಂದಿಗೆ ಸರ್ಕಾರ ರಚಿಸುತ್ತೇವೆ. ನಾವು ಒಟ್ಟಾಗಿ ಚರ್ಚಿಸಿ ಎಲ್ಲವನ್ನೂ ನಿರ್ಧರಿಸುತ್ತೇವೆ. ಸಣ್ಣ ಪುಟ್ಟ ವಿವಾದ ಹಾಗೂ ಅಹಮ್ಮಿಕೆಯನ್ನು ಬದಿಗಿಡಬೇಕಿದೆ. ಆಡಳಿತ ವಿರೋಧಿ ಮತಗಳಲ್ಲಿ ಯಾವ ವಿಭಜನೆಯೂ ಇರುವುದಿಲ್ಲ ಎಂದಿದ್ದಾರೆ.