ಬಿಹಾರ: ಲಾಲೂ ಎದುರಿಗೆ ಕೈಕಟ್ಟಿ ನಿಲ್ಲುತ್ತಾರಾ ನಿತೀಶ್ ಕುಮಾರ್?
ಪಾಟ್ನಾ, ನವೆಂಬರ್.05: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬರುವುದೇ ತಡ, ಮೇವು ಹಗರಣದ ರೂವಾರಿ ಲಾಲೂ ಪ್ರಸಾದ್ ಯಾದವ್ ಎದುರಿಗೆ ಸಿಎಂ ನಿತೀಶ್ ಕುಮಾರ್ ಅವರು ಕೈ ಜೋಡಿಸಿ, ತಲೆ ಬಾಗಿಸಿ ನಿಲ್ಲುತ್ತಾರೆ ಎಂದು ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಇನ್ನೊಂದು ಅವಧಿಯ ಅಧಿಕಾರಕ್ಕಾಗಿ ರಾಷ್ಟ್ರೀಯ ಜನತಾ ದಳದ ನಾಯಕರ ಎದುರಿಗೆ ಸಿಎಂ ನಿತೀಶ್ ಕುಮಾರ್ ಕೈಕಟ್ಟಿ ನಿಲ್ಲಲಿದ್ದಾರೆ ಎಂದು ಚಿರಾಗ್ ಪಾಸ್ವಾನ್ ಕಿಡಿ ಕಾರಿದ್ದಾರೆ. ಅಲ್ಲದೇ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಹೊಸ ಸರ್ಕಾರವಂತೂ ಅಸ್ತಿತ್ವಕ್ಕೆ ಬರುತ್ತದೆ. ಅದು ಬಿಜೆಪಿ ಮತ್ತು ಎಲ್ ಜೆಪಿ ಮೈತ್ರಿಕೂಟದ ಸರ್ಕಾರ ಆಗಿರಲಿದೆ ಎಂದು ಹೇಳಿದ್ದಾರೆ.
ಬಿಹಾರ ಚುನಾವಣಾ ಪ್ರಚಾರ: ನಿತೀಶ್ ಕುಮಾರ್, ಯೋಗಿ ಕಿತ್ತಾಟ
ಕಳೆದ ಕೆಲವೇ ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧವೇ ನಿತೀಶ್ ಕುಮಾರ್ ಮಾತನಾಡುತ್ತಿದ್ದರು. ಇಂದು ಪ್ರಧಾನಿಯವರ ಜೊತೆಗಿನ ರ್ಯಾಲಿಗಳಲ್ಲಿ ನಿತೀಶ್ ಕುಮಾರ್ ಹೇಗೆ ನಿಲ್ಲುತ್ತಿದ್ದಾರೆ ಎನ್ನುವುದನ್ನು ಸಾಕ್ಷೀಕರಿಸುವಂತಾ ಫೋಟೋಗಳು ನಿಮ್ಮ ಎದುರಿನಲ್ಲೇ ಇವೆ. ಅಂದರೆ ಈ ಹಿಂದೆ ಇದೇ ನಿತೀಶ್ ಕುಮಾರ್ ತೆಗಳಿಕೆಗೆ ಗುರಿಯಾಗಿದ್ದ ನರೇಂದ್ರ ಮೋದಿ ಅವರ ಎದುರಿಗೆ ಕೈಕಟ್ಟಿಕೊಂಡು ತಲೆ ಬಾಗಿಸಿಕೊಂಡು ನಿಲ್ಲುತ್ತಾರೆ. ಅಂದರೆ ಅಧಿಕಾರಕ್ಕಾಗಿ ಯಾರು ಎದುರಿಗಾದರೂ ತಲೆ ಬಾಗಿ ನಿಲ್ಲುವುದಕ್ಕೆ ನಿತೀಶ್ ಕುಮಾರ್ ಸಿದ್ಧರಿರುತ್ತಾರೆ ಎಂದು ಚಿರಾಗ್ ಪಾಸ್ವಾನ್ ಕಿಡಿ ಕಾರಿದ್ದಾರೆ.
ಸಿಎಂ ಕುರ್ಚಿ ಮೇಲೆ ನಿತೀಶ್ ಕುಮಾರ್ ಲಾಲಸೆ
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಇರುವ ಅಧಿಕಾರದ ಲಾಲಸೆ ಅಷ್ಟಿಷ್ಟಲ್ಲ. ಮುಖ್ಯಮಂತ್ರಿ ಕುರ್ಚಿಯನ್ನು ಅವರು ಅಷ್ಟು ಸುಲಭಕ್ಕೆ ಬಿಟ್ಟು ಕೊಡುವುದಿಲ್ಲ. ಅವರ ಇನ್ನೊಂದು ಮುಖವನ್ನು ತೋರಿಸುವ ಕಾಲ ಇನ್ನೇನು ಸನ್ನಿಹಿತದಲ್ಲಿದೆ ಎಂದು ಚಿರಾಗ್ ಪಾಸ್ವಾನ್ ದೂಷಿಸಿದ್ದಾರೆ.
ಅಧಿಕಾರಕ್ಕಾಗಿ ತೇಜಸ್ವಿ ಎದುರು ತಲೆ ಬಾಗಲಿರುವ ನಿತೀಶ್
ನವೆಂಬರ್.10ರಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ಹೊರ ಬರುತ್ತಿದ್ದಂತೆ ಸಿಎಂ ನಿತೀಶ್ ಕುಮಾರ್, ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮನೆಯ ಬಾಗಿಲು ತಟ್ಟುತ್ತಾರೆ. ಇಂದು ಪ್ರಧಾನಿ ಮೋದಿ ಎದುರಿಗೆ ನಿಲ್ಲುವಂತೆ ನಾಳೆ ತೇಜಸ್ವಿ ಯಾದವ್ ಎದುರು ಅಧಿಕಾರಕ್ಕಾಗಿ ನಿಲ್ಲುತ್ತಾರೆ. ಅಗತ್ಯ ಬಿದ್ದಲ್ಲಿ ರಾಂಚಿಗೆ ತೆರಳಿ ಪಕ್ಷದ ಸರ್ವೋಚ್ಛ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಆಶೀರ್ವಾದವನ್ನೂ ಪಡೆದುಕೊಂಡು ಬರುವುದಕ್ಕೂ ನಿತೀಶ್ ಕುಮಾರ್ ಸಿದ್ಧರಿದ್ದಾರೆ ಎಂದು ಲೇವಡಿ ಮಾಡಿದರು.
ಎಲ್ ಜೆಪಿ ಹೇಳುವುದೇ ಒಂದು, ಬಿಜೆಪಿಯ ರಾಗ ಇನ್ನೊಂದು!
ಬಿಹಾರ ಚುನಾವಣೆ ಬಳಿಕ ಬಿಜೆಪಿ ಮತ್ತು ಎಲ್ ಜೆಪಿ ಸೇರಿಕೊಂಡು ಮೈತ್ರಿ ಸರ್ಕಾರವನ್ನು ರಚಿಸುವುದಕ್ಕೆ ಎಲ್ಲವೂ ಸಿದ್ಧವಾಗಿದೆ ಎನ್ನುವ ಧಾಟಿಯಲ್ಲಿ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆದಿಯಾಗಿ ಎಲ್ಲ ಹೈಕಮಾಂಡ್ ನಾಯಕರು, ನಿತೀಶ್ ಕುಮಾರ್ ಅವರೇ ತಮ್ಮ ಎನ್ ಡಿಎ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಎಂದು ಪುನರ್ ಉಚ್ಛರಿಸುತ್ತಲೇ ಬಂದಿದ್ದಾರೆ. ಇದರ ಮಧ್ಯೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸಾಕಷ್ಟು ಕುತೂಹಲಕಾರಿಯಾಗಿವೆ.
ಚಿರಾಗ್ ಮತ್ತು ತೇಜಸ್ವಿ ವಿರುದ್ಧ ನಿತೀಶ್ ಕುಮಾರ್ ಸಿಡಿಮಿಡಿ
ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಒಂದು ಕಡೆಯಲ್ಲಿ ಚಿರಾಗ್ ಪಾಸ್ವಾನ್ ಗುಡುಗಿದರೆ, ಇನ್ನೊಂದು ಕಡೆ ಚಿರಾಗ್ ವಿರುದ್ಧ ನಿತೀಶ್ ಸಿಡಿಮಿಡಿಕೊಂಡಿದ್ದರು. ಬಿಹಾರ ಫಲಿತಾಂಶದ ಬಳಿಕ ಚಿರಾಗ್ ಪಾಸ್ವಾನ್ ಅವರಿಗೆ ತೇಜಸ್ವಿ ಯಾದವ್ ಜಿಂದಾಬಾದ್ ಘೋಷಣೆ ಕೂಗುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಆರ್ ಜೆಡಿ ಮುಖ್ಯಸ್ಥರಿಗೆ ಜಿಂದಾಬಾದ್ ಎನ್ನುತ್ತಾರೋ ಅಥವಾ ದೆಹಲಿಗೆ ವಾಪಸ್ ಹೋಗುತ್ತಾರೋ ನೋಡೋಣ ಎಂದು ಸಿಎಂ ನಿತೀಶ್ ಕುಮಾರ್ ಲೇವಡಿ ಮಾಡಿದ್ದರು.