ಗೋವಾದಲ್ಲಿ ಮೀನು ಮತ್ತು ಪುಟ್ಬಾಲ್ ಕಥೆ ಹೇಳಿದ ಮಮತಾ ಬ್ಯಾನರ್ಜಿ!
ಪಣಜಿ, ಅಕ್ಟೋಬರ್ 29: ಮೀನು ಹಾಗೂ ಫುಟ್ಬಾಲ್ ಎಂಬ ಎರಡು ಅಂಶಗಳು ಪಶ್ಚಿಮ ಬಂಗಾಳ ಮತ್ತು ಗೋವಾದ ನಡುವೆ ನಂಟು ಬೆಸಿದಿದೆ ಎಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರು ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
"ಗೋವಾದಲ್ಲಿ ಅಧಿಕಾರ ಹಿಡಿಯುವ ಹಾಗೂ ಮುಖ್ಯಮಂತ್ರಿ ಆಗುವ ಉದ್ದೇಶ ನನಗೆ ಇಲ್ಲ. ಆದರೆ ಕೇಂದ್ರ ಸರ್ಕಾರವು ಗೋವಾದಲ್ಲಿ ದಾದಾಗಿರಿ ನಡೆಸುವುದಕ್ಕೆ ಟಿಎಂಸಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕೊಂಕಣಿ ಭಾಷೆಯಲ್ಲಿ ಮೊದಲು ಭಾಷಣ ಆರಂಭಿಸಿದ ಮಮತಾ ಬ್ಯಾನರ್ಜಿ, "ಡೆಲ್ಲಿಚಿ ದಾದಾಗಿರಿ ಅನಿಕ್ ನಾಕಾ,( ಇನ್ನು ಮುಂದೆ ದೆಹಲಿಯಿಂದ ದಬ್ಬಾಳಿಕೆ ಇರುವುದಿಲ್ಲ) ನಾನು ಹೊರಗಿನವರು ಅಲ್ಲ, ಗೋವಾ ಸಿಎಂ ಆಗುವುದು ನನಗೆ ಬೇಕಾಗಿಲ್ಲ, ಎಂದು ಹೇಳಿದರು.

"ಕಪ್ಪು ಬಾವುಟ ತೋರಿಸಿದವರಿಗೆ ನಮಸ್ತೆ":
"ನಾನು ಭಾರತೀಯಳು, ನಾನು ಎಲ್ಲಿಗೆ ಬೇಕಾದರೂ ಹೋಗಬಹುದು. ಬಂಗಾಳ ನನ್ನ ತಾಯಿನಾಡು ಎಂದಾದರೆ ಗೋವಾ ಕೂಡಾ ನನ್ನ ತಾಯಿ ನಾಡು ಆಗುತ್ತದೆ. ನಾನು ಗೋವಾಗೆ ಬರುತ್ತೇನೆ, ಈ ವೇಳೆ ಅವರು ನಮ್ಮ ಪೋಸ್ಟರ್ ಅನ್ನು ಹಾಳು ಮಾಡುತ್ತಾರೆ. ಬಿಜೆಪಿಯವರು ಮಾನಸಿಕ ಸ್ಥಿತಿ ಸರಿಯಾಗಿಲ್ಲ. ನನಗೆ ಅವರು ಕಪ್ಪು ಬಾವುಟ ತೋರಿಸಿದಾಗ ನಾನು ಅವರಿಗೆ ನಮಸ್ಕರಿಸಿದೆ," ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮೀನು ಮತ್ತು ಫುಟ್ಬಾಲ್ ನಂಟು:
"ನಾವು ಪ್ರಜಾಪ್ರಭುತ್ವವನ್ನು ನಂಬುತ್ತೇವೆ ಮತ್ತು ಗೋವಾ ಸುಂದರವಾಗಿದೆ. ನಾನು ಅಧಿಕಾರ ಹಿಡಿಯಲು ಇಲ್ಲಿಗೆ ಬಂದಿಲ್ಲ, ಬದಲಿಗೆ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೇನೆ. ನೀವು ಮೀನುಗಳನ್ನು ಪ್ರೀತಿಸುತ್ತೇವೆ, ನಾವೂ ಮೀನುಗಳನ್ನು ಪ್ರೀತಿಸುತ್ತೇವೆ. ನೀವು ಫುಟ್ಬಾಲ್ ಅನ್ನು ಪ್ರೀತಿಸುತ್ತೀರಿ, ಬಂಗಾಳವೂ ಫುಟ್ಬಾಲ್ ಅನ್ನು ಪ್ರೀತಿಸುತ್ತದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿ ಹೋರ್ಡಿಂಗ್ಸ್ ವಿರೂಪ:
ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರ ಭೇಟಿಗೂ ಮೊದಲೇ ಗೋವಾದಲ್ಲಿ ಅವರ ಚಿತ್ರಗಳನ್ನು ಹೊಂದಿರುವ ಹೋರ್ಡಿಂಗ್ಗಳನ್ನು ವಿರೂಪಗೊಳಿಸಲಾಗಿತ್ತು. ಈ ಘಟನೆ ಬಿಜೆಪಿ ಮತ್ತು ಟಿಎಂಸಿ ನಡುವೆ ತೀಕ್ಷ್ಣ ವಾಕ್ಸಮರಕ್ಕೆ ಕಾರಣವಾಗಿದೆ. ಕರಾವಳಿ ರಾಜ್ಯದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಗುರುವಾರ ಸಂಜೆ ಗೋವಾಗೆ ಭೇಟಿ ನೀಡಿದ್ದರು. ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಸಲಿದ್ದು, ಈ ಹಿನ್ನೆಲೆ ಶುಕ್ರವಾರ ನಟಿ ನಫೀಸಾ ಅಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಗೋವಾದತ್ತ ಟಿಎಂಸಿ ಲಕ್ಷ್ಯ:
ಬಂಗಾಳದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ತೃಣಮೂಲ ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಗೋವಾದ ಕಡೆಗೆ ಲಕ್ಷ್ಯ ವಹಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೋವಾ ಪ್ರವಾಸಕ್ಕೆ ಮುಂದಾಗಿದ್ದಾರೆ. ಮಮತಾ ಬ್ಯಾನರ್ಜಿಯವರ ಜೊತೆ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೋ ಫಲೈರೊ, ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ ಮತ್ತು ಸ್ಥಳೀಯ ನಾಯಕರು ಜೊತೆಗಿದ್ದರು. ಶನಿವಾರ ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದು, ನಂತರ ಹಳೆಯ ಗೋವಾದ ಬಾಮ್ ಜೀಸಸ್ ಬೆಸಿಲಿಕಾ ಮತ್ತು ಮಾಪುಸಾದ ಬೋಡ್ಗೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.












Click it and Unblock the Notifications