'ಆಸ್ಪತ್ರೆಯಲ್ಲಿ ರಕ್ತವಾಂತಿ ಮಾಡಿಕೊಂಡ ಪರಿಕ್ಕರ್, ಗಾಬರಿಯಾಗುವ ಅಗತ್ಯವಿಲ್ಲ'
ಪಣಜಿ, ಫೆಬ್ರವರಿ 26: "ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಆಸ್ಪತ್ರೆಯಲ್ಲಿ ರಕ್ತವಾಂತಿ ಮಾಡಿಕೊಂಡರು, ಆದರೆ ಗಾಬರಿಯಾಗುವ ಅಗತ್ಯವಿಲ್ಲ. ಅವರಿಗೆ ಸೋಂಕು ತಗುಲಿದೆ ಎಂಬ ವದಂತಿ ಸುಳ್ಳು" ಎಂದು ಗೋವಾ ಸರ್ಕಾರದ ಅಧಿಕೃತ ವಕ್ತಾರ ಪ್ರಮೋದ್ ಸಾವಂತ್ ಹೇಳಿದ್ದಾರೆ.
"ನಾನು ಪರಿಕ್ಕರ್ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಗಾರ್ಗ್ ಅವರನ್ನು ಭೇಟಿಯಾಗಿದ್ದೇನೆ. ಅವರಿಗೆ ಎದೆಯ ಸೋಂಕಿದೆ ಎಂಬ ಸುದ್ದಿ ಸುಳ್ಳು, ಆದರೆ ಅವರು ಸ್ವಲ್ಪ ರಕ್ತ ವಾಂತಿ ಮಾಡಿಕೊಂಡಿದ್ದು ಸತ್ಯ. ಆದರೆ ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರೇ ತಿಳಿಸಿದ್ದಾರೆ" ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ.
ಪ್ಯಾಂಕ್ರಿಯಾಸ್ ಸಂಬಂಧೀ ಕಾಯಿಲೆಯಿಂದ ಬಳಲುತ್ತಿರುವ ಪರಿಕ್ಕರ್ ಅವರನ್ನು ಶನಿವಾರ ಗೋವಾ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಪಡೆದ ತಕ್ಷಣವೇ ಮನೆಗೆ ಮರಳುವುದಾಗಿ ಹೇಳಿದರೂ, ಇನ್ನೊಂದು ದಿನ ಆಸ್ಪತ್ರೆಯಲ್ಲೇ ಇರುವಂತೆ ನಾವೇ ಹೇಳಿದೆವು ಎಂದು ಗೋವಾ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

"ಮುಖ್ಯಮಂತ್ರಿಗಳ ನಾಡಿಮಿಡಿತ, ಹೃದಯಬಡಿತ ಎಲ್ಲವೂ ಸ್ಥಿರವಾಗಿದೆ. ದಯವಿಟ್ಟು ಸಮಾಜಿಕ ಮಾಧ್ಯಮಗಳಲ್ಲಿ ಬರುವ ವದಂತಿಗಳಿಗೆ ಕಿವಿಗೊಡಬೇಡಿ" ಎಂದು ರಾಣೆ ಮನವಿ ಮಾಡಿದ್ದಾರೆ.












Click it and Unblock the Notifications