ಕೊನೆಯುಸಿರುವವರೆಗೂ ಸೇವೆ ಸಲ್ಲಿಸಲು ಬಯಸಿದ್ದ ಮನೋಹರ್ ಪರಿಕರ್
Recommended Video

ಪಣಜಿ, ಮಾರ್ಚ್ 18: ಮೂಗಿಗೆ ನಳಿಗೆ ಸಿಲುಕಿಸಿದ ಸ್ಥಿತಿಯಲ್ಲಿಯೇ ಓಡಾಡಿ, ಕಚೇರಿ ಕೆಲಸ ಮಾಡುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರಿಗೆ ಕೊನೆಯುಸಿರು ಇರುವವರೆಗೂ ಸೇವೆ ಸಲ್ಲಿಸುವ ಬಯಕೆಯಿತ್ತು. ಅವರ ಛಲ ಆ ಬಯಕೆಯನ್ನು ಈಡೇರಿಸಿತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಪರಿಕರ್ ತಮ್ಮ ಕರ್ತವ್ಯ ಮನೋಭಾವದಿಂದ ಹಿಂದೆ ಸರಿಯಲಿಲ್ಲ. ಆಸ್ಪತ್ರೆ ಸೇರಿದಾಗ ಅವರ ರಾಜಕೀಯ ಭವಿಷ್ಯ ಇನ್ನೇನು ಮುಗಿದೇ ಹೋಯಿತು. ಅವರಿನ್ನು ರಾಜೀನಾಮೆ ನೀಡಿ ವಿಶ್ರಾಂತಿ ಪಡೆಯುವುದು ಅನಿವಾರ್ಯ ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ, ಪರಿಕರ್ ಈ ಹೇಳಿಕೆಗಳನ್ನು ಸುಳ್ಳಾಗಿಸಿದರು. ಆಸ್ಪತ್ರೆಯಿಂದ ಹೊರಬಂದವರು, ಉಸಿರಾಟದ ಸಾಧನವನ್ನು ಹಿಡಿದುಕೊಂಡೇ ಮತ್ತೆ ಕಚೇರಿ ಪ್ರವೇಶಿಸಿದರು. ಓಡಾಟ, ಪರಿಶೀಲನೆಯ ಚಟುವಟಿಕೆಗಳಿಂದಲೂ ಅವರು ಹಿಂದೆ ಸರಿಯಲಿಲ್ಲ.

ಈ ವರ್ಷದ ಜನವರಿಯಲ್ಲಿ ಅವರು 'ನನ್ನ ಕೊನೆಯುಸಿರು ಇರುವವರೆಗೂ ಗೋವಾಕ್ಕೆ ಸೇವೆ ಸಲ್ಲಿಸುತ್ತೇನೆ' ಎಂದಿದ್ದರು. ಆ ಹೇಳಿಕೆಯನ್ನು ಅವರು ಸುಳ್ಳಾಗಿಸಲಿಲ್ಲ.
'ಅನಾರೋಗ್ಯದ ನಡುವೆಯೂ, ದೇಹಕ್ಕೆ ಕೊಳವೆ ಮತ್ತು ಬ್ಯಾಗ್ ಅಂಟಿಸಿಕೊಂಡಿದ್ದರೂ ಅವರು ಕೆಲಸ ಮಾಡುವುದನ್ನು ಮುಂದುವರಿಸಿದ್ದರು. ಆದರೆ, ಇತ್ತೀಚೆಗೆ ಆಸ್ಪತ್ರೆಗೆ ತೆರಳಿ ಅವರನ್ನು ನೋಡುವವರೆಗೂ ಅವರ ಕರ್ತವ್ಯ ಬದ್ಧತೆಯ ಸ್ವರೂಪ ಅರ್ಥವಾಗಿರಲಿಲ್ಲ' ಎಂದು ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
'ಆರೋಗ್ಯ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಕಡತವೊಂದಕ್ಕೆ ಪರಿಕರ್ ಅವರ ಸಹಿ ಬೇಕಿತ್ತು. ಅಗ ಪರಿಕರ್ ಆಸ್ಪತ್ರೆಯ ಹಾಸಿಗೆ ಮೇಲಿದ್ದರು. ಬಾಗಿಲಿನಲ್ಲಿ ನಿಂತಿದ್ದ ನನ್ನನ್ನು ಒಳ ಕರೆದರು. ನಾನು ಕೊಂಡೊಯ್ದಿದ್ದ ಕಡತಕ್ಕೆ ಸಹಿ ಹಾಕಲು ಬಯಸಿರುವುದಾಗಿ ಹೇಳಿದರು. ಅವರು ಸಹಿ ಹಾಕಿದ ಕೊನೆಯ ಕಡತವದು' ಎಂದು ರಾಣೆ ತಿಳಿಸಿದ್ದಾರೆ.












Click it and Unblock the Notifications