ಗೋವಾ 'ಸಿಎಂ' ಮನೋಹರ್ ಸ್ಥಾನವನ್ನು ಯಾರು ತುಂಬಬಲ್ಲರು?
Recommended Video

ಪಣಜಿ, ಮಾರ್ಚ್ 17: ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತೀವ್ರವಾಗಿ ಅನಾರೋಗ್ಯ ಪೀಡಿತರಾದರೂ ಕರ್ತವ್ಯವಿಮುಖರಾಗಿರಲಿಲ್ಲ. ಏಮ್ಸ್ ಆಸ್ಪತ್ರೆಯಲ್ಲೆ ಸಚಿವ ಸಂಪುಟ ಸಭೆ, ಆಸ್ಪತ್ರೆಯಿಂದ ಬಂದ ಬಳಿಕ ಬಜೆಟ್ ಮಂಡನೆ, ಮೂಗಿಗೆ ನಳಿಕೆ ಹಾಕಿಕೊಂಡೇ ಆಡಳಿತ ನಿಭಾಯಿಸಿದ್ದು ಈಗ ನೆನಪು ಮಾತ್ರ.
ಆದರೆ, ಮನೋಹರ್ ಅವರ ನಿಧನದ ಬಳಿಕ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ನಾಯಕನಿಗಾಗಿ ಬಿಜೆಪಿ ಹುಡುಕಾಟ ನಡೆಸಿದೆ. ಲೋಕಸಭೆ ಚುನಾವಣೆ 2019 ಹೊಸ್ತಿಲಲ್ಲಿ ಬಿಜೆಪಿಯು ತುರ್ತಾಗಿ ಈ ಕಾರ್ಯವನ್ನು ಮುಗಿಸಬೇಕಾಗಿ ಬಂದಿದೆ.
ಮನೋಹರ್ ಪರಿಕ್ಕಾರ್ ಅವರು ವಿದೇಶಕ್ಕೆ ಚಿಕಿತ್ಸೆಗಾಗಿ ತೆರಳಿದ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಗೋವಾದಲ್ಲಿ ನಾಯಕತ್ವ ಬದಲಿ ಮಾಡಲು ಚರ್ಚೆ ನಡೆಸಿತ್ತು.ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನ ತೊರೆಯಲು ಮನೋಹರ್ ಪರಿಕ್ಕರ್ ಮುಂದಾಗಿ, ತಮ್ಮ ಇಚ್ಛೆಯನ್ನು ಹೈಕಮಾಂಡ್ ಗೆ ತಿಳಿಸಿದ್ದರು.
ಆದರೆ, ಅವರ ಮನವಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಗೋವಾ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಹೇಳಿ, ಮನೋಹರ ಪರಿಕ್ಕರ್ ಅವರೇ ಗೋವಾ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ವತಃ ಅಮಿತ್ ಶಾ ಸ್ಪಷ್ಟಪಡಿಸಿದ್ದರು.ಈಗಲೂ ಸಿಎಂ ಸ್ಥಾನದಿಂದ ಇಳಿಯುವುದು ಬಿಡುವುದು ಮನೋಹರ್ ಅವರ ನಿರ್ಧಾರಕ್ಕೆ ಬಿಡಲಾಗಿತ್ತು.

ವಿಶ್ವಜಿತ್ ರಾಣೆ ಹೆಸರು ಕೇಳಿ ಬಂದಿತು
ಶಾಸಕರಾದ ದಯಾನಂದ್ ಸಾಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಎಂಬ ಇಬ್ಬರು ಕಾಂಗ್ರೆಸ್ ಶಾಸಕರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಬ್ಬರು ಬಿಜೆಪಿ ಸೇರಿದ ವೇಳೆ, ಮನೋಹರ್ ಅವರು ಏಮ್ಸ್ ನಿಂದ ಡಿಸ್ಚಾರ್ಜ್ ಆಗಿ ಗೋವಾದ ಡೋನಾಪಾಲದ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಕಾರಣರದ ಸಚಿವ ವಿಶ್ವಜಿತ್ ರಾಣೆ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಒಂದು ಬಣ ಯತ್ನಿಸಿತ್ತು. ಆನಂತರ ಇನ್ನಷ್ಟು ಹೆಸರುಗಳು ಕೇಳಿ ಬಂದಿತ್ತು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕ ದಿಗಂಬರ್ ಕಾಮತ್ ಅವರು ಬಿಜೆಪಿ ಸೇರಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಲಾಯಿತು.

ಪ್ರಮೋದ್ ಸಾವಂತ್ ಹೆಸರು ಮುಂಚೂಣಿಯಲ್ಲಿದೆ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗೋವಾ ಸ್ಪೀಕರ್ ಡಾ. ಪ್ರಮೋದ್ ಸಾವಂತ್ ರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಎರಡು ಬಾರಿ ಶಾಸಕರಾದವರು ಹಾಗು ಈಗ ಗೋವಾದ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸಾವಂತ್ ಗೆ ಆರೆಸ್ಸೆಸ್ ಬೆಂಬಲವೂ ಇದೆ. ಇತ್ತೀಚೆಗಷ್ಟೇ ಸಾವಂತ್ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ರನ್ನು ಭೇಟಿಯಾಗಿ ಬಂದ ಬಳಿಕ, ಈ ಬೆಳವಣಿಗೆ ನಡೆದಿದೆ. ವೃತ್ತಿಯಿಂದ ಆಯುರ್ವೇದ ವೈದ್ಯರಾಗಿದ್ದಾರೆ. ಇವರ ಪತ್ನಿ ಸುಲಕ್ಷಣಾ ಅವರು ಕೆಮಿಸ್ಟ್ರಿ ಟೀಚರ್ ಆಗಿದ್ದು, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದಾರೆ.

ವಿಶ್ವಜಿತ್ ರಾಣೆ
ಕಾಂಗ್ರೆಸ್ಸಿನಿಂದ ಇಬ್ಬರು ಶಾಸಕರನ್ನು ಬಿಜೆಪಿಗೆ ಸೇರುವಂತೆ ಮಾಡಿದ ಸಚಿವ ವಿಶ್ವಜಿತ್ ರಾಣೆ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ಸಾಧ್ಯತೆಯಿದೆ. ಹೀಗಾಗಿ, ವಿಶ್ವಜಿತ್ ರಾಣೆ ಅವರ ಬೆಂಬಲಿಗರೆಲ್ಲರೂ ಬಿಜೆಪಿ ಸೇರುವ ಸಾಧ್ಯತೆ ಕಂಡು ಬಂದಿದೆ.
ಗೋವಾ ಕಾಂಗ್ರೆಸ್ನ ಹಿರಿಯ ನಾಯಕ, ನಾಲ್ಕು ಬಾರಿ ಗೋವಾದ ಸಿಎಂ ಆಗಿದ್ದ ಪ್ರತಾಪ್ ಸಿಂಗ್ರಾವ್ ರಾಣೆ ಅವರ ಪುತ್ರ ವಿಶ್ವಜಿತ್ ರಾಣೆ. ಮನೋಹರ್ ಅವರ ಸಚಿವ ಸಂಪುಟದಲ್ಲಿ ಮಹಿಳಾ ಕಲ್ಯಾಣ ಮತ್ತು ಆರೋಗ್ಯ ಸಚಿವರಾಗಿದ್ದಾರೆ.

ಗೋವಾ ವಿಧಾನಸಭೆ ಶಾಸಕರ ಬಲಾಬಲ
ಗೋವಾ ವಿಧಾನಸಭೆ ಶಾಸಕರ ಬಲಾಬಲ ಒಟ್ಟು 40,
ಹಾಲಿ ಬಲಾಬಲ 37: ಮ್ಯಾಜಿಕ್ ನಂಬರ್ : 19
ಬಿಜೆಪಿ : 12
ಗೋವಾ ಫಾರ್ವಡ್: 3
ಎಂಜಿಪಿ: 3
ಎನ್ ಸಿಪಿ : 1
ಪಕ್ಷೇತರರು : 2
ಬಿಜೆಪಿ ಪ್ಲಸ್ : 21
ಕಾಂಗ್ರೆಸ್ : 14
17 ಶಾಸಕರ ಬಲದೊಂದಿಗೆ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೂ, ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿ, ಆಡಳಿತ ನಡೆಸುತ್ತಿದೆ. ಫೆಬ್ರವರಿ 2017ರ ನಂತರ ಕಾಂಗ್ರೆಸ್ಸಿನಿಂದ ಮೂವರು ಶಾಸಕರು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಹುಮತ ಸಾಬೀತುಪಡಿಸಲು ಕನಿಷ್ಠ 21 ಸ್ಥಾನವಾದ್ರೂ ಬೇಕು. ಡಿಸೋಜಾ ಸಾವು ಮತ್ತು ಸುಭಾಷ್ ಶಿರೋಡ್ಕರ್, ದಯಾ ನಂದ್ ಸೊಪ್ಟೆ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಹೀಗಾಗಿ, ಸದನದ ಒಟ್ಟು ಸಂಖ್ಯಾಬಲ 40ರಿಂದ 37ಕ್ಕೆ ಇಳಿದಿದೆ. ಹೇಗಾದರೂ ಕಾಂಗ್ರೆಸ್ಸಿಗೆ ಕನಿಷ್ಠ 4+5 ಸ್ಥಾನಗಳ ಕೊರತೆ ಕಂಡು ಬರುತ್ತದೆ.

ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ದಿನು ತೆಂಡೂಲ್ಕರ್
ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಅವರ ಹೆಸರು ಕೂಡಾ ಸಿಎಂ ಸ್ಥಾನಕ್ಕೆ ಕೇಳಿ ಬಂದಿದೆ. ಕಾಂಗ್ರೆಸ್ ಸಂಸದ ಶಾಂತರಾಮ್ ನಾಯ್ಕ್ ಅವರನ್ನು ಸೋಲಿಸಿ ಏಕೈಕ ರಾಜ್ಯಸಭಾ ಸದಸ್ಯರಾಗಿ 2017ರಲ್ಲಿ ವಿನಯ್ ಅವರು ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಗೋವಾ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ ಅನುಭವವುಳ್ಳವಾಗಿದ್ದಾರೆ.
ಕಾಂಗ್ರೆಸ್ ಶಾಸಕ, ಮಾಜಿ ಸಿಎಂ ದಿಗಂಬರ್ ಕಾಮತ್ ಅವರು ಬಿಜೆಪಿ ಸೇರಿ ಸಿಎಂ ಆಗುವ ಸುದ್ದಿಯನ್ನು ವಿನಯ್ ಅಲ್ಲಗೆಳೆದಿದ್ದಾರೆ. ಅತ್ತ ದಿಗಂಬರ್ ಕಾಮತ್ ಕೂಡಾ ಬಿಜೆಪಿ ಸೇರಿದರೆ ಅದು 'ರಾಜಕೀಯ ಆತ್ಮಹತ್ಯೆ' ಎಂದಿದ್ದಾರೆ.












Click it and Unblock the Notifications