ಪರಿಕ್ಕರ್ ಪುತ್ರನಿಗೆ ಕೈ ಕೊಟ್ಟ ಬಿಜೆಪಿ, ಎಎಪಿಗೆ ಆಹ್ವಾನ!

ಪಣಜಿ, ಜನವರಿ 20; ಗೋವಾದ ಆಡಳಿತ ಪಕ್ಷ ಬಿಜೆಪಿ ಫೆಬ್ರವರಿ 14ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 40 ಸದಸ್ಯ ಬಲದ ವಿಧಾನಸಭೆಗೆ 34 ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ.

ಗುರುವಾರ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್‌ಗೆ ಪಣಜಿ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿದೆ.

ಪಣಜಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಕ್ಷೇತ್ರದ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. 2019ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಅಟನಸಿಯೋ ಮೊನ್ನೆರ್ರೇಟ್ ಬಳಿಕ ಬಿಜೆಪಿ ಸೇರಿದ್ದರು. ಈಗ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Arvind Kejriwal Welcomes Utapal Parrikar To Party Fight Elections On AAP Ticket

ಇದರಿಂದಾಗಿ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್‌ಗೆ ತೀವ್ರ ನಿರಾಸೆಯಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದದ್ದ ಅವರು ಚುನಾವಣಾ ಪ್ರಚಾರವನ್ನು ಸಹ ಆರಂಭಿಸಿದ್ದರು. ಆದರೆ ಬಿಜೆಪಿ ಟಿಕೆಟ್ ನೀಡದೆ ಕೈ ಕೊಟ್ಟಿದೆ.

ಈ ಕುರಿತು ಮಾತನಾಡಿದ ದೇವೇಂದ್ರ ಫಡ್ನವೀಸ್, "ಮನೋಹರ್ ಪರಿಕ್ಕರ್ ಪುತ್ರನಿಗೆ ಬೇರೆ ಕ್ಷೇತ್ರದ ಆಯ್ಕೆ ನೀಡಲಾಗಿತ್ತು, ಆದರೆ ಅವರು ತಿರಸ್ಕರಿಸಿದರು. ಅವರ ಜೊತೆ ಮಾತುಕತೆ ನಡೆಯುತ್ತಿದೆ. ಅವರು ಒಪ್ಪಿಕೊಳ್ಳುತ್ತಾರೆ ಎಂದು ನಾವು ಭಾವಿಸಿದ್ದೇವೆ" ಎಂದು ಹೇಳಿದ್ದಾರೆ.

ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ 2019ರಲ್ಲಿ ಮೃತಪಟ್ಟರು. ಆಗ ಅವರು ಪ್ರತಿನಿಧಿಸುತ್ತಿದ್ದ ಪಣಜಿ ಕ್ಷೇತ್ರದ ಉಪ ಚುನಾವಣೆ ಎದುರಾಯಿತು. ಆಗಲೂ ಸಹ ಉತ್ಪಲ್‌ ಪರಿಕ್ಕರ್ ಉಪ ಚುನಾವಣಾ ಕಣಕ್ಕಿಳಿಯಲು ಬಯಸಿದ್ದರು. ಆದರೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ.

ಪಕ್ಷಕ್ಕೆ ಆಹ್ವಾನಿಸಿದ ಕೇಜ್ರಿವಾಲ್; ಉತ್ಪಲ್ ಪರಿಕ್ಕರ್‌ಗೆ ಟಿಕೆಟ್ ಕೈ ತಪ್ಪಿದ ಕುರಿತು ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, "ಬಿಜೆಪಿ ಬಳಸಿ ಬಿಸಾಡುವ ನೀತಿಯನ್ನು ಪರಿಕ್ಕರ್ ಕುಟುಂಬದೊಂದಿಗೆ ಅನುಸರಿಸುತ್ತಿದೆ. ಇದು ಗೋವಾದ ಜನರಿಗೆ ನೋವು ತಂದಿದೆ" ಎಂದು ಹೇಳಿದ್ದಾರೆ.

"ನಾನು ಯಾವಾಗಲೂ ಮನೋಹರ್ ಪರಿಕ್ಕರ್ ಗೌರವಿಸುತ್ತೇನೆ. ಉತ್ಪಲ್ ಪರಿಕ್ಕರ್‌ ಪಕ್ಷಕ್ಕೆ ಸೇರಲು ಮತ್ತು ಎಎಪಿ ಟಿಕೆಟ್‌ನಿಂದ ಕಣಕ್ಕಿಳಿಯಲು ಸ್ವಾಗತ" ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಶನಿವಾರ ಗೋವಾ ಪ್ರವಾಸ ಕೈಗೊಂಡಿದ್ದ ಅರವಿಂದ ಕೇಜ್ರಿವಾಲ್ ಎರಡು ದಿನ ರಾಜ್ಯದಲ್ಲಿ ಪ್ರಚಾರ ನಡೆಸಿದ್ದರು. ಆಗಲೂ ಮಾತನಾಡಿದ್ದ ಅವರು, "ಉತ್ಪಲ್ ಪರಿಕ್ಕರ್ ಪಕ್ಷಕ್ಕೆ ಬರುವುದಾದರೆ ಸ್ವಾಗತ" ಎಂದು ಹೇಳಿದ್ದರು.

ಆಮ್ ಆದ್ಮಿ ಪಕ್ಷ ಇದೇ ಮೊದಲ ಬಾರಿಗೆ ಗೋವಾ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದೆ. ವಕೀಲರಾಗಿರುವ ಅಮಿತ್ ಪಾಲೇಕರ್ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ಯಾವುದೇ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಆಮ್ ಆದ್ಮಿ ಪಕ್ಷ ಚುನಾವಣೆ ಎದುರಿಸುತ್ತಿದೆ. ಗೋವಾದ 40 ಕ್ಷೇತ್ರಗಳಲ್ಲಿಯೂ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದು, ಅಭ್ಯರ್ಥಿಗಳ ಪಟ್ಟಿ ಸಹ ಬಿಡುಗಡೆ ಮಾಡಿದೆ. ಗೋವಾದ ಜನರಿಗಾಗಿ 13 ಅಂಶಗಳ ಕಾರ್ಯಕ್ರಮವನ್ನು ಘೋಷಣೆ ಮಾಡಿದೆ.

ಶಿವಸೇನೆ ಬೆಂಬಲ; ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್‌ಗೆ ಶಿವಸೇನೆ ಸಹ ಬೆಂಬಲ ನೀಡಿದೆ. ಪಕ್ಷದ ನಾಯಕ ಸಂಜಯ್ ರಾವತ್ ಎರಡು ದಿನಗಳ ಹಿಂದೆ ಟ್ವೀಟ್ ಮಾಡಿದ್ದರು. "ಗೋವಾದ ಎಲ್ಲ ವಿರೋಧ ಪಕ್ಷಗಳು ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುವುದನ್ನು ಬೆಂಬಲಿಸಬೇಕು. ಯಾವ ಪಕ್ಷಗಳು ಸಹ ಅವರ ವಿರುದ್ಧ ಅಭ್ಯರ್ಥಿ ಹಾಕಬಾರದು" ಎಂದು ಕರೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+