'ಕೇಜ್ರಿವಾಲ್ ಬಡ ಕಕ್ಷೀದಾರ ಅಂದುಕೊಂಡು ಪುಕ್ಕಟೆ ವಾದ ಮಾಡ್ತೀನಿ'
ಕೇಂದ್ರ ಸಚಿವ ಅರುಣ್ ಜೇಟ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರವಾಗಿ ವಕೀಲಿಕೆ ಮಾಡುತ್ತಿರುವ ರಾಮ್ ಜೇಠ್ಮಲಾನಿ, ತಮ್ಮ ಶುಲ್ಕ 3 ಕೋಟಿಗೂ ಹೆಚ್ಚು ಮೊತ್ತವನ್ನು ಬಿಟ್ಟುಬಿಡುವುದಾಗಿ ಹೇಳಿದ್ದಾರೆ
ನವದೆಹಲಿ, ಏಪ್ರಿಲ್ 4: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರವಾಗಿ ಪುಕ್ಕಟೆಯಾಗಿ ಕೋರ್ಟ್ ನಲ್ಲಿ ವಾದ ಮಾಡ್ತೀನಿ ಎಂದಿದ್ದಾರೆ ಹಿರಿಯ ವಕೀಲ ರಾಮ್ ಜೇಠ್ಮಲಾನಿ. "ದೆಹಲಿ ಸರಕಾರವಾಗಲೀ ಅಥವಾ ಅರವಿಂದ್ ಕೇಜ್ರಿವಾಲ್ ಆಗಲೀ ನನ್ನ ಶುಲ್ಕ ಕೊಡಲಿಲ್ಲ ಅಂದರೂ ನಾನು ಪುಕ್ಕಟೆಯಾಗಿ ವಾದ ಮಾಡಿಕೊಡ್ತೀನಿ. ಕೇಜ್ರಿವಾಲ್ ರನ್ನು ನನ್ನ ಬಡ ಕಕ್ಷೀದಾರರಲ್ಲಿ ಒಬ್ಬರು ಅಂದುಕೊಳ್ತೀನಿ" ಎಂದಿದ್ದಾರೆ ಜೇಠ್ಮಲಾನಿ.
ಕೇಜ್ರಿವಾಲ್ ವಿರುದ್ಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದು, ಕೇಜ್ರಿವಾಲ್ ಪರವಾಗಿ ವಕೀಲಿಕೆ ವಹಿಸಿರುವ ಜೇಠ್ಮಲಾನಿ 3.42 ಕೋಟಿ ರುಪಾಯಿ ಬಿಲ್ ಮಾಡಿದ್ದರು. ಆ ಬಿಲ್ ಅನ್ನು ದೆಹಲಿ ಸರಕಾರ ನೀಡಬೇಕು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನವಿ ಮಾಡಿದ್ದರು.[ಕೇಜ್ರಿವಾಲ್ ಕೇಸು ಬಡಿದಾಡಲು ದೆಹಲಿ ಸರಕಾರದ ಕಾಸು!]

ಇದೀಗ ರಾಮ್ ಜೇಠ್ಮಲಾನಿ ಎಎನ್ ಐ ಸುದ್ದಿ ಮಾಧ್ಯಮದ ಜತೆಗೆ ಈ ಬಗ್ಗೆ ಮಾತನಾಡಿದ್ದು, "ನಾನು ಶ್ರೀಮಂತರಿಗಷ್ಟೇ ಫೀ ತೆಗೆದುಕೊಳ್ತೀನಿ ಮತ್ತು ಬಡವರಿಗೆ ನನ್ನ ಸೇವೆ ಉಚಿತ" ಎಂದಿದ್ದಾರೆ. ಡಿಡಿಸಿಎ ಪ್ರಕರಣದ ವಿಚಾರದಲ್ಲಿ ಕೇಜ್ರಿವಾಲ್ ಹೇಳಿಕೆ ವಿರುದ್ಧವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 10 ಕೋಟಿ ರುಪಾಯಿ ಪರಿಹಾರ ಕೇಳಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.












Click it and Unblock the Notifications