ಅಣ್ಣಾರನ್ನು ಖುದ್ದಾಗಿ ಆಹ್ವಾನಿಸುವೆ: ಕೇಜ್ರಿವಾಲ್
ಘಾಜಿಯಾಬಾದ್, ಡಿ. 26- ದಿಲ್ಲಿಯ ರಾಮಲೀಲಾ ಮೈದಾನವು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರ ಕರ್ಮಭೂಮಿ. ಹಾಗಾಗಿ ನನ್ನ ಗುರುಗಳಾದ ಅಣ್ಣಾ ಹಜಾರೆ ಅವರನ್ನು ಅದೇ ಜಾಗದಲ್ಲಿ ಡಿಸೆಂಬರ್ 28ರಂದು (ಶನಿವಾರ) ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ನಾನೇ ಖುದ್ದಾಗಿ ಆಹ್ವಾನಿಸುತ್ತೇನೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಮುಖ್ಯಸ್ಥ ಮತ್ತು ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರು ತಿಳಿಸಿದ್ದಾರೆ.
ಜತೆಗೆ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಕೇಜ್ರಿವಾಲ್ ಸಾರ್ವಜನಿಕರಿಗೂ ಆಹ್ವಾನ ನೀಡಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ದೆಹಲಿ ಜನತೆಯೇ ನಿಜವಾದ ಮುಖ್ಯಮಂತ್ರಿಗಳು, ನಾನಲ್ಲ ಎಂದು ಕೇಜ್ರಿವಾಲರು ಹೇಳಿದರು. ಹಾಗೆಯೇ ಕಿರಣ್ ಬೇಡಿ, ನ್ಯಾ.ಸಂತೋಷ್ ಹೆಗ್ಡೆ ಅವರುಗಳಿಗೂ ಆಹ್ವಾನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಗಾಂಧಿವಾದಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಿದ ರಾಮ ಲೀಲಾ ಮೈದಾನದಲ್ಲೇ ಕೇಜ್ರಿವಾಲ್ ದೆಹಲಿಯ 7ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಜತೆಗೆ, 6 ಮಂದಿ ಶಾಸಕರೂ ಸಚಿವರಾಗಿ ಪ್ರತಿಜ್ಞಾ ಸ್ವೀಕಾರ ಮಾಡಲಿದ್ದಾರೆ.
ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗುತ್ತೀರಾ? ಎಂದು 2 ದಿನಗಳ ಹಿಂದೆ ರಾಳೇಗಣದಲ್ಲಿ ಸುದ್ದಿಗಾರರು ಅಣ್ಣಾರನ್ನು ಕೇಳಿದಾಗ ಇನ್ನೂ ಅಂತಹ ಯಾವುದೇ ಆಮಂತ್ರಣ ತಮಗೆ ಬಂದಿಲ್ಲ. ಸದ್ಯಕ್ಕೆ ನನ್ನ ಆರೋಗ್ಯ ಸರಿಯಿಲ್ಲ ಎಂದು ಅವರು ನುಣುಚಿಕೊಂಡಿದ್ದರು.
ಗುರುವಾರ ಇಲ್ಲಿನ ತಮ್ಮ ಕೌಶಾಂಬಿ (Kausambhi) ನಿವಾಸದಲ್ಲಿ ನಡೆಸಿದ ಜನತಾ ದರ್ಶನ (Janta Darbar) ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು. ಅಣ್ಣಾ ಹಜಾರೆ ಅವರು ನನ್ನ ಈ ಬೆಳವಣಿಗೆಗೆ ಮಾರ್ಗದರ್ಶಕರು ಹಾಗೂ ಗುರುಗಳು ಆಗಿದ್ದು, ಅವರನ್ನು ನಾನೇ ವೈಯಕ್ತಿಕವಾಗಿ ಆಹ್ವಾನಿಸುತ್ತೇನೆ ಎಂದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಕುಡಿಯುವ ನೀರು ಕೊರತೆ ಕುರಿತಂತೆ ನೂರಾರು ಮಂದಿ ಅರ್ಜಿ ಸಲ್ಲಿಸಿದರು. ಜನತಾ ದರ್ಶನದಲ್ಲಿ ಭಾಗವಹಿಸಿದವರೊಂದಿಗೆ ಮಾತನಾಡಿದ ಕೇಜ್ರಿವಾಲ್, ಇಂದಿನ ಈ ದರ್ಬಾರ್ ನಲ್ಲಿ ಭಾಗವಹಿಸಿದವರಲ್ಲಿ ವಕೀಲರು, ಇಂಜಿನಿಯರ್ಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.