ಕುಮಾರ್ ವಿಶ್ವಾಸ್ ಅಸಮಾಧಾನಕ್ಕೆ ಸಿಕ್ಕು ಇಬ್ಭಾಗವಾಗಲಿದೆಯಾ ಆಮ್ ಆದ್ಮಿ ಪಕ್ಷ?
ಕುಮಾರ್ ವಿಶ್ವಾಸ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ತಮ್ಮ ಎಲ್ಲ ಪ್ರಯತ್ನ ಮಾಡಿದ್ದಾರೆ. ವಿಶ್ವಾಸ್ ಮುಂದಿನ ನಡೆ ಏನು, ಆಪ್ ಇಬ್ಭಾಗವಾಗಬಹುದಾ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ
ನವದೆಹಲಿ, ಮೇ 3: ಆಮ್ ಆದ್ಮಿ ಪಕ್ಷ ಇಬ್ಭಾಗವಾಗುವ ಸಾಧ್ಯತೆಗಳು ದಟ್ಟವಾಗಿವೆ. ಪಕ್ಷ ಬಿಡುವುದಾಗಿ ಕುಮಾರ್ ವಿಶ್ವಾಸ್ ಸೂಚನೆ ನೀಡಿದ್ದಾರೆ. ಸಿಸೋಡಿಯಾ ಹಾಗೂ ಕೇಜ್ರಿವಾಲ್ ಎಚ್ಚೆತ್ತು ವಿಶ್ವಾಸ್ ನನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ ವಿಶ್ವಾಸ್ ಮನೆಗೆ ತೆರಳಿದ ಇಬ್ಬರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಆ ಭೇಟಿಯ ನಂತರ ಮಾತನಾಡಿದ ಕೇಜ್ರಿವಾಲ್, ನಮ್ಮ ಚಳವಳಿಯ ಭಾಗವಾದ ವಿಶ್ವಾಸ್ ನಮ್ಮ ಮಾತಿಗೆ ಒಪ್ಪಿ, ಪಕ್ಷದಲ್ಲೇ ಉಳಿಯುತ್ತಾರೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ. ನಮ್ಮಿಬ್ಬರ ಮಧ್ಯೆ ಕೆಲ ನಾಯಕರು ಭಿನ್ನಾಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆ ಹಾಗೂ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಪ್ ಪಕ್ಷದ ಹೀನಾಯ ಸೋಲಿನ ನಂತರ ಕುಮಾರ್ ವಿಶ್ವಾಸ್ ಪಕ್ಷದೊಳಗೆ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಒತ್ತಡ ಹೆಚ್ಚಿದೆ.[ಕೇಜ್ರಿವಾಲ್ ಅಧಿಕಾರದಾಸೆಯಿಂದ ದೆಹಲಿಯಲ್ಲಿ ಸೋಲು: ಅಣ್ಣಾ ಹಜಾರೆ]

ಅದಕ್ಕೂ ಮುನ್ನ ತಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿ ಬಗ್ಗೆ ಕುಮಾರ್ ವಿಶ್ವಾಸ್ ಮಾತನಾಡಿದ್ದರು.ಅಮಾನತ್ ಉಲ್ಲಾ ಖಾನ್ ಕೇವಲ ಮುಖವಾಡ ಮಾತ್ರ. ಆತನ ಹಿಂದೆ ನಿಂತು ಯಾರೋ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನನ್ನೇ ಗುರಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಖಾನ್ ನನ್ನ ಬಗ್ಗೆ ಹೇಗೆ ಮಾತನಾಡುತ್ತಿದ್ದಾರೋ ಅದೇ ರೀತಿ ಸಿಸೋಡಿಯಾ ಅಥವಾ ಕೇಜ್ರಿವಾಲ್ ಬಗ್ಗೆ ಮಾತನಾಡಿದ್ದರೆ ಹತ್ತು ನಿಮಿಷದೊಳಗೆ ಪಕ್ಷದಿಂದ ಆಚೆ ಇರುತ್ತಿದ್ದರು ಎಂದಿದ್ದಾರೆ.
ನಾನು ದೆಹಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಬೇರೆ ಪಕ್ಷಕ್ಕೆ ಸೇರುವುದಕ್ಕೆ ಕೂಡ ಪ್ರಯತ್ನಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಕೆಲವರು ಆರೋಪಿಸುವ ಪ್ರಕಾರ, ವಿಶ್ವಾಸ್ ಅವರು ರಾಷ್ಟ್ರೀಯ ಭದ್ರತಾ ಸಲಹೆಹಾರ ಅಜಿತ್ ದೋವಲ್ ಜತೆಗೆ ಸಂಪರ್ಕದಲ್ಲಿದ್ದಾರೆ. ಅವರ ಇಶಾರೆ ಮೇಲೆ ಆಮ್ ಆದ್ಮಿ ಪಕ್ಷದ ಇಬ್ಭಾಗಕ್ಕೆ ಯತ್ನಿಸುತ್ತಿದ್ದಾರೆ. ದೋವಲ್ ರಿಮೋಟ್ ಕಂಟ್ರೋಲ್ ರೀತಿ ವಿಶ್ವಾಸ್ ನಡೆದುಕೊಳ್ಳುತ್ತಿದ್ದಾರೆ.











Click it and Unblock the Notifications