ರಫೇಲ್ ಡೀಲ್ ಬಗ್ಗೆ ಐಎಎಫ್ ವಿವರಣೆ ನೀಡಲಿ : ಸುಪ್ರೀಂ ಕೋರ್ಟ್
ನವೆದಹಲಿ, ನವೆಂಬರ್ 14: "ರಫೇಲ್ ಡೀಲ್ ನಲ್ಲಿ ಭಾರತೀಯ ವಾಯು ಸೇನೆಗೆ ಅಗತ್ಯವಾಗಿ ಬೇಕಾದ ಫೈಟರ್ ಜೆಟ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಚರ್ಚಿಸುತ್ತಿದ್ದೇವೆ. ಈ ವ್ಯವಹಾರದ ವಿವರಗಳನ್ನು ಸಾರ್ವಜನಿಕವಾಗಿ ತರಬೇಕಾದರೆ ಮಾತ್ರ ಇವುಗಳ ಮೌಲ್ಯದ ಬಗ್ಗೆ ಚರ್ಚೆ ನಡೆಸುತ್ತೇವೆ" ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
ಫ್ರಾನ್ಸ್ ಸರಕಾರದೊಂದಿಗೆ ಭಾರತ ಖರೀದಿಸುತ್ತಿರುವ 36 ರಫೇಲ್ ಫೈಟರ್ ಜೆಟ್ ಕುರಿತ ತನಿಖೆ ನಡೆಸಬೇಕೆಂದು ಸಲ್ಲಿಸಲಾಗಿರುವ ದೂರಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ತರ ವಾದವಿವಾದವನ್ನು ಬುಧವಾರ ಆಲಿಸುತ್ತಿದೆ.
36 ರಫೇಲ್ ಫೈಟರ್ ಜೆಟ್ ಖರೀದಿಸುವ ವಿಷಯದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರೀ ಭ್ರಷ್ಟಾಚಾರ ಎಸಗಿದ್ದು, ಮೊದಲಿನ ಡೀಲ್ ಗಿಂತ ಡಬಲ್ ಮೊತ್ತ ನೀಡುತ್ತಿದೆ. ಯಾವ ಮೊತ್ತಕ್ಕೆ ಈ ಜೆಟ್ ಗಳು ಖರೀದಿಯಾಗಿವೆ, ಯಾರ್ಯಾರು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ತನಿಖೆಯಾಗಬೇಕು ಎಂದು ಅರುಣ್ ಶೌರಿ ಅವರು ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಹೊರಬಂದಿರುವ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ರಫೇಲ್ ಡೀಲ್ ಹಗರಣವನ್ನು ಪ್ರತಿಷ್ಠೆಯ ವಿಷಯವನ್ನಾಗಿಸಿದ್ದಾರೆ. ಅವರಿಬ್ಬರೂ ವಕೀಲ ಪ್ರಶಾಂತ್ ಭೂಷಣ್ ಜೊತೆ ಸರ್ವೋಚ್ಚ ನ್ಯಾಯಾಲಯಕ್ಕೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾರೆ.

ಐಎಎಫ್ ಪರ ಉತ್ತರಿಸಲು ಯಾರಿದ್ದಾರೆ?
ರಫೇಲ್ ಡೀಲ್ ಅನ್ನು ತಜ್ಞರೇ (ಐಎಎಫ್) ವಿಮರ್ಶೆ ಮಾಡಬೇಕು, ನ್ಯಾಯಾಲಯವಲ್ಲ ಎಂದು ಕೇಂದ್ರದ ಪರ ವಾದಿಸುತ್ತಿರುವ ಕೆಕೆ ವೇಣುಗೋಪಾಲ್ ಅವರು ಹೇಳಿದ್ದಕ್ಕೆ, ಈ ವಿಷಯದಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರಿಸಲು ಭಾರತೀಯ ವಾಯು ಸೇನೆಯಿಂದ ಯಾರಾದರೂ ಬಂದಿದ್ದಾರಾ? ಇದು ಏರ್ ಫೋರ್ಸ್ ಗೆ ಸಂಬಂಧಿಸಿದಾದ್ದರಿಂದ ಅವರಿಗೆ ಕೆಲವೊಂದು ಪ್ರಶ್ನೆ ಕೇಳಬೇಕಿದೆ ಎಂದು ನ್ಯಾ. ರಂಜನ್ ಗೊಗೊಯ್ ಕೇಳಿದ್ದಾರೆ.

ರಹಸ್ಯ ಒಪ್ಪಂದ ರಹಸ್ಯವಾಗಿಯೇ ಇರಬೇಕು
ಫ್ರಾನ್ಸ್ ಸರಕಾರದೊಡನೆ ಭಾರತ ಮಾಡಿಕೊಂಡಿರುವ ರಫೇಲ್ ಡೀಲ್ ಬಗ್ಗೆ ಸುಪ್ರೀಂ ಕೋರ್ಟ್ ಗೆ ಸರಕಾರ ಮುಚ್ಚಿದ ಲಕೋಟೆಯಲ್ಲಿ ವಿವರಣೆ ನೀಡಿದೆ. ಆದರೆ, ಎರಡೂ ಸರಕಾರಗಳ ನಡುವೆ ನಡೆದಿರುವ ಗೌಪ್ಯ ಒಪ್ಪಂದದ ಬಗ್ಗೆ ವಿವರಗಳನ್ನು ಬಹಿರಂಗ ಮಾಡಬೇಕು ಎಂಬ ಅರ್ಜಿದಾರರ ಬೇಡಿಕೆಯನ್ನು ಕೇಂದ್ರ ನಿರಾಕರಿಸಿದೆ. ರಹಸ್ಯ ಒಪ್ಪಂದ ರಹಸ್ಯವಾಗಿಯೇ ಇರಬೇಕು. ಅದನ್ನು ಬಹಿರಂಗವಾಗಿ ನ್ಯಾಯಾಲಯದಲ್ಲಿ ತಿಳಿಸಲು ಹೇಗೆ ಸಾಧ್ಯ ಎಂದು ವೇಣುಗೋಪಾಲ್ ವಾದಿಸಿದ್ದಾರೆ.

ಸಿನ್ಹಾ, ಶೌರಿ ಮತ್ತು ಭೂಷಣ್ ರಿಂದ ಅರ್ಜಿ
ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಪರವಾಗಿ ಮತ್ತು ಸ್ವತಃ ತಮ್ಮ ಪರವಾಗಿ ವಾದ ಮಂಡಿಸುತ್ತಿರುವ ಪ್ರಶಾಂತ್ ಭೂಷಣ್ ಅವರು, ರಫೇಲ್ ಫೈಟರ್ ಜೆಟ್ ಡೀಲ್ ನಲ್ಲಿ ನಡೆದಿರುವ ಮೌಲ್ಯವನ್ನು ಕೇಂದ್ರ ಸರಕಾರ ಬಚ್ಚಿಟ್ಟು, ದೇಶದ ಜನತೆಯ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ವಾದಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕೋರ್ಟ್, ನಿಮಗೆ ವಾದ ಮಂಡಿಸಲು ಎಲ್ಲ ಅವಕಾಶಗಳನ್ನು ಕೋರ್ಟ್ ನೀಡುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆದರೆ, ಯಾವುದು ಅವಶ್ಯವಿದೆಯೋ ಅದನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿ ಎಂದು ತಾಕೀತು ಮಾಡಿದೆ.

ಮೌಲ್ಯದ ವಿವರ ಸಾರ್ವಜನಿಕ ಮಾಡಬೇಕಾ?
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಎಸ್ ಕೆ ಕೌಲ್ ಮತ್ತು ನ್ಯಾ. ಕೆಎಂ ಜೋಸೆಫ್ ಇರುವ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ರಫೇಲ್ ಫೈಟರ್ ಜೆಟ್ ಮೌಲ್ಯವನ್ನು ಸಾರ್ವಜನಿಕವಾಗಿ ಚರ್ಚಿಸಬೇಕೋ ಬೇಡವೋ ಎಂಬ ಬಗ್ಗೆಯೂ ನ್ಯಾಯಾಲಯ ನಿರ್ಧರಿಸಲಿದೆ. ಕೇಂದ್ರ ಈಗಾಗಲೆ ಸಲ್ಲಿಸಿರುವ ಈ ಡೀಲ್ ನ ಮಾಹಿತಿಯ ಜೊತೆಗೆ, ಒಟ್ಟು ಮೌಲ್ಯದ ಬಗ್ಗೆಯೂ ಮುಚ್ಚಿದ ಲಕೋಟೆಯಲ್ಲಿ ವಿವರಣೆ ಸಲ್ಲಿಸಲು ಕೇಳುವ ಸಾಧ್ಯತೆಯಿದೆ.

ಅಂಬಾನಿಯನ್ನು ಮೇಲೆತ್ತಲು ಕೇಂದ್ರದಿಂದ ಭ್ರಷ್ಟಾಚಾರ
59 ಸಾವಿರ ಕೋಟಿಯಷ್ಟು ವ್ಯವಹಾಸ ಫ್ರಾನ್ಸ್ ಮತ್ತು ಭಾರತ ಸರಕಾರಗಳ ನಡುವೆ ನಡೆದಿದ್ದು, ದಿವಾಳಿ ಅಂಚಿನಲ್ಲಿದ್ದ ಮತ್ತು ಜೆಟ್ ನಿರ್ಮಾಣದ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದ ಅನಿಲ್ ಅಂಬಾನಿಯವರ ರಿಲಯನ್ಸ್ ಕಂಪನಿಯನ್ನು ಮೇಲೆತ್ತಲೆಂದೇ ಆಫ್ಸೆಟ್ ಪಾರ್ಟನರ್ ಆಗಿ ಮಾಡಿಕೊಳ್ಳಬೇಕೆಂದು 30 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ಕೇಂದ್ರ ಸರಕಾರ ನಡೆಸಿದೆ ಎಂದು ಆರೋಪಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಿಬಿಐ ತಪ್ಪಿತಸ್ಥರ ವಿರುದ್ಧ ಯಾವುದೇ ಎಫ್ಐಆರ್ ದಾಖಲಿಸದಿದ್ದರಿಂದ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬೇಕಾಯಿತು ಎಂದು ಭೂಷಣ್, ಶೌರಿ ಮತ್ತು ಸಿನ್ಹಾ ಹೇಳಿದ್ದಾರೆ.












Click it and Unblock the Notifications