ಮೋದಿಯಿಂದ ದೇಶಭಕ್ತಿಯ ಪಾಠ ಕಲಿಯಬೇಕಾಗಿಲ್ಲ ಎಂದ ಖರ್ಗೆ
Recommended Video

ನವದೆಹಲಿ, ಮಾರ್ಚ್ 04 : "ಯಾಕೆ ಎಲ್ಲರೂ ಸೇನೆಯನ್ನು ಪ್ರಶ್ನಿಸುತ್ತಿದ್ದಾರೆ. ಮೋದಿಯವರ ಹೊರತುಪಡಿಸಿ ಯಾರೂ ಸೇನೆಯನ್ನು ಪ್ರಶ್ನಿಸುತ್ತಿಲ್ಲ. ಈ ದಾಳಿಯ ಯಶಸ್ಸು ಅವರಿಗೇ ಸಿಗಬೇಕಾಗಿದೆ. ನಾವು ಸೇನೆಯನ್ನು ಬೆಂಬಲಿಸುತ್ತೇವೆ. ನಾವು ಮೋದಿಯಿಂದ ದೇಶಭಕ್ತಿಯ ಪಾಠವನ್ನು ಕಲಿಯಬೇಕಾಗಿಲ್ಲ."
ಎಂದು ಕಾಂಗ್ರೆಸ್ ಪಕ್ಷದ ನಾಯಕ, ಕಲಬುರಗಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಈ ಮಾತುಗಳಿಗೆ ಕಾರಣವೂ ಇದೆ. ಗುಜರಾತ್ ನಲ್ಲಿ ಭಾಷಣ ಮಾಡುತ್ತಿದ್ದ ನರೇಂದ್ರ ಮೋದಿಯವರು, ಬಾಲಕೋಟ್ ಏರ್ ಸ್ಟ್ರೈಕ್ ಅನ್ನು ನರೇಂದ್ರ ಮೋದಿಯವರೇ ಪ್ರಶ್ನಿಸಿದ್ದರು ಎಂದಿದ್ದಕ್ಕೆ ರಾಹುಲ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು ಮತ್ತು ಕಾಮನ್ ಸೆನ್ಸ್ ಬಳಸಿ ಎಂದು ವ್ಯಂಗ್ಯವಾಡಿದ್ದರು.
ನರೇಂದ್ರ ಮೋದಿಯವರು ಹೇಳಿದ್ದು ಹೀಗಿದೆ : "ಸ್ವಲ್ಪ ಸಾಮಾನ್ಯ ಜ್ಞಾನ ಉಪಯೋಗಿಸಿ. ನಾನು ಹೇಳಿದ್ದೇನೆಂದರೆ, ಏರ್ ಸ್ಟ್ರೈಕ್ ಮಾಡಿದ ಸಂದರ್ಭದಲ್ಲಿ ನಮ್ಮ ಬಳಿ ರಫೇಲ್ ಯುದ್ಧ ವಿಮಾನಗಳಿದ್ದರೆ ನಮ್ಮ ಯುದ್ಧ ವಿಮಾನಗಳು ಧರೆಗೆ ಉರುಳುತ್ತಿರಲಿಲ್ಲ ಮತ್ತು ಪಾಕಿಸ್ತಾನದ ವೈರಿಗಳು ಕೂಡ ಬದುಕುಳಿಯುತ್ತಿರಲಿಲ್ಲ."

ಜನರನ್ನೇನು ಮೂರ್ಖರೆಂದುಕೊಂಡಿರಾ?
ಮಲ್ಲಿಕಾರ್ಜುನ ಖರ್ಗೆ ಅವರು ಈ ಹೇಳಿಕೆ ನೀಡುತ್ತಿದ್ದಂತೆ, ಟ್ವಿಟ್ಟಿಗರು ಖರ್ಗೆ ಅವರ ಮೇಲೆಯೇ ತಿರುಗಿಬಿದ್ದಿದ್ದಾರೆ. ಜನರನ್ನೇನು ಮೂರ್ಖರೆಂದುಕೊಂಡಿರಾ? ಏರ್ ಸ್ಟ್ರೈಕ್ ಮಾಡಿದ್ದು ಯಾರು? ಐಎಎಫ್. ಉಗ್ರರ ಮೇಲಿನ ದಾಳಿ ಯಶಸ್ವಿಯಾಗಿದೆ ಎಂದು ಹೇಳಿದ್ದು ಯಾರು? ಐಎಎಫ್. ಏರ್ ಸ್ಟ್ರೈಕ್ ಯಶಸ್ವಿಯಾಗಿಲ್ಲ, ಸಾಕ್ಷ್ಯ ಕೊಡಿ ಎಂದು ಹೇಳುತ್ತಿರುವವರು ಯಾರು? ನವಜೋತ್ ಸಿಂಗ್ ಸಿಧು, ದಿಗ್ವಿಜ್ ಸಿಂಗ್, ನಿರುಪಮ್. ಇವರೆಲ್ಲ ಯಾವ ಪಕ್ಷದವರು? ಎಂದು ಟೀಕಾಪ್ರಹಾರ ಮಾಡಿದ್ದಾರೆ. ಖರ್ಗೆ ಅವರ ಮಾತಿಗೆ ಪ್ರತಿಕ್ರಿಯಿಸಿದ ಮತ್ತೊಬ್ಬರು, ಮುರಿದ ಕೈಗೆ ಖರ್ಗೆಯವರು ಬ್ಯಾಂಡ್ ಏಯ್ಡ್ ಹಚ್ಚುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಬುಡಮೇಲು ಮಾಡಿರುವುದು ಮರಗಳನ್ನೋ?
ನವಜೋತ್ ಸಿಂಗ್ ಸಿಧು ಅವರು, 300 ಉಗ್ರರು ಸತ್ತರು, ಹೌದೋ ಅಲ್ವೋ? ನೀವೇನು ಭಯೋತ್ಪಾದಕರನ್ನು ಬುಡಮೇಲು ಮಾಡುತ್ತಿದ್ದೀರೋ, ಮರಗಳನ್ನೋ? ಇದು ಚುನಾವಣಾ ಗಿಮಿಕ್ ಅಲ್ಲವೆ? ವಿದೇಶದ ವೈರಿಗಳನ್ನು ಹೊಡೆದುರುಳಿಸುತ್ತೇವೆ ಎಂಬ ಭ್ರಮೆಯಲ್ಲಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ. ರಾಜಕೀಯಕ್ಕೆ ಭಾರತದ ಸೇನೆಯನ್ನು ಬಳಸಿಕೊಳ್ಳಬೇಡಿ, ಸೇನೆ ಎಲ್ಲಕ್ಕಿಂತ ಪವಿತ್ರ ಎಂದು ಕೇಂದ್ರಕ್ಕೆ ಟಾಂಗ್ ನೀಡಿದ್ದರು. ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಮುತ್ತನ್ನುದುರಿಸಿದ್ದ ಅವರು, ನೀವೇನು ಉಗ್ರರನ್ನು ಬುಡಮೇಲು ಮಾಡುತ್ತಿದ್ದೀರೋ, ಗಿಡಮರಗಳನ್ನೋ? ಎಂದೂ ಪ್ರಶ್ನಿಸಿದ್ದಾರೆ. ಮಾತಾಡಲು ಬರುತ್ತದೆಂದು, ಬಾಯಿಗೆ ಬಂದಿದ್ದು ಮಾತಾಡಲು ಸಾಧ್ಯವೆ?

ಇಮ್ರಾನ್ ಖಾನ್ ಗೆ ಅಭಿನಂದನೆ
ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಕ್ಯಾಂಪ್ ಮೇಲೆ ಮೇಲೆ ಬಾಲಕೋಟ್ ನಲ್ಲಿ ದಾಳಿ ಮಾಡಿದ್ದೇನೆನ್ನುವ ಕೇಂದ್ರ ಸರಕಾರ ಸಾಕ್ಷ್ಯ ನೀಡಬೇಕು ಎಂದು ಕೇಳಿದ್ದ ದಿಗ್ವಿಜಯ್ ಸಿಂಗ್ ಅವರು, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಕ್ಕೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯಿಂದ ದೂರವುಳಿಯಲು ಕಾಂಗ್ರೆಸ್ ನಿರ್ಧರಿಸಿದೆ.

ಅಂತಾರಾಷ್ಟ್ರೀಯ ಮಾಧ್ಯಮಗಳು ಹೀಗೆಂದಿವೆಯಂತೆ
ಮಹಾಬುದ್ಧಿವಂತ ವಕೀಲ, ಅದ್ಭುತ ವಾಕ್ಪಟು ಎಂದು ಅನ್ನಿಸಿಕೊಂಡಿರುವ ಕಪಿಲ್ ಸಿಬಲ್ ಅವರು ಭಾರತೀಯ ವಾಯು ಸೇನೆಯನ್ನು ಮತ್ತು ಕೇಂದ್ರ ಸರಕಾರವನ್ನು ಪ್ರಶ್ನಿಸಿರುವ ರೀತಿ ಹೀಗಿದೆ : "ಮೋದಿಜಿ, ನ್ಯೂಯಾರ್ಕ್ ಟೈಮ್ಸ್, ಲಂಡನ್ ನಲ್ಲಿರುವ ಜೇನ್ಸ್ ಇನ್ಫಾರ್ಮೇಶನ್ ಗ್ರೂಪ್, ವಾಷಿಂಗ್ಟನ್ ಪೋಸ್ಟ್, ಡೇಲಿ ಟೆಲಿಗ್ರಾಫ್, ದಿ ಗಾರ್ಡಿಯನ್, ರಾಯ್ಟರ್ಸ್... ಯಾವುದೇ ಉಗ್ರರ ಹತ್ಯೆಯಾಗಿಲ್ಲ ಎಂದು ಪ್ರಶ್ನಿಸುತ್ತಿರುವ ಈ ಅಂತಾರಾಷ್ಟ್ರೀಯ ಮಾಧ್ಯಮಗಳು ಪಾಕಿಸ್ತಾನದ ಪರವಾಗಿವೆಯೆ? ಭಯೋತ್ಪಾದನೆಯನ್ನು ರಾಜಕೀಯಕ್ಕೆ ಬಳಸಿಕೊಂಡು ತಪ್ಪೆಸಗಿದ್ದೀರಿ." ಅಪಾರ ಬುದ್ಧಿಮತ್ತೆಯಿರುವ ಕಪಿಲ್ ಸಿಬಲ್ ಅವರು ರಾಹುಲ್ ಗಾಂಧಿಯವರ ಗಿಳಿಯಂತೆ ಪಾಠ ಒಪ್ಪಿಸಿರುವುದು ನಿಜಕ್ಕೂ ವಿಪರ್ಯಾಸ. ಅವರ ಈ ಮಾತಿಗೆ ಟ್ವಿಟ್ಟಿಗರು ಏನು ಉತ್ತರ ನೀಡಿದ್ದಾರೆಂದು, ಸಿಬಲ್ ಅವರ ಟ್ವಿಟ್ಟರ್ ಖಾತೆಗೆ ಹೋಗಿ ನೋಡಬಹುದು.












Click it and Unblock the Notifications